ನ25ರ ವರೆಗೆ ಸುಮ್ಮನಿರುತ್ತೇನೆ ಎಂದಿದ್ದ ಯತ್ನಾಳ್, ಮತ್ತೆ ಪರೋಕ್ಷ ಕಿಡಿ
ವಿಜಯಪುರ, ನ 14: ನವೆಂಬರ್ 25ರವರೆಗೆ ಯಾವುದೇ ವಿಚಾರದ ಬಗ್ಗೆ ಪ್ರಸ್ತಾವಿಸುವುದಿಲ್ಲ ಎಂದು ಹೇಳಿದ್ದ ವಿಜಯಪುರ (ನಗರ) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೆ, ಪರೋಕ್ಷವಾಗಿ ತಮ್ಮದೇ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಚಾಟಿ ಬೀಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಯತ್ನಾಳ್, "ಎಲ್ಲವನ್ನೂ ಹೈಕಮಾಂಡ್ ವೀಕ್ಷಿಸುತ್ತಿದೆ. ವಂಶ ಪಾರಂಪರ್ಯ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ"ಎಂದು ಹೇಳಿದ್ದಾರೆ.
ಈ ಬಗ್ಗೆ ಯತ್ನಾಳ್ ಹಾಕಿರುವ ಫೇಸ್ ಬುಕ್ ಪೋಸ್ಟ್ ಹೀಗಿದೆ: "ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ನಮ್ಮ ದೇಶದ ವಂಶಾಡಳಿತ ರಾಜಕೀಯ ವ್ಯವಸ್ಥೆ ಬಗ್ಗೆ ಹಾಗೂ ವಂಶಾಡಳಿತ ಭ್ರಷ್ಟಾಚಾರವನ್ನು ಬೇರು ಸಮೇತವಾಗಿ ಕಿತ್ತೊಗೆಯುವ ಘೋಷಣೆ ಮಾಡಿದ್ದು ರಾಷ್ಟ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ".

"ರಾಷ್ಟ್ರವನ್ನು ಎರಡು ಬಾರಿ ಉದ್ದೇಶಿಸಿ ಮಾತನಾಡಿದ ಅವರು ವಂಶಾಡಳಿತ ಕುಟುಂಬಗಳ ನಡೆಸಿರುವ ವ್ಯಾಪಕ ಭ್ರಷ್ಟಾಚಾರ ದುರಹಂಕಾರ, ಇಡಿ ಕುಟುಂಬ ಅಧಿಕಾರದ ಐಷಾರಾಮಿ ನಿಜಕ್ಕೂ ಹೇಸಿಗೆ ತರುವಂತಹದ್ದು".
"ಪಕ್ಷಕ್ಕಾಗಿ ಪೂರ್ತಿ ಜೀವನ ಹಗಲು ರಾತ್ರಿ ಮನೆ ಮಠ ಬಿಟ್ಟು ದುಡಿದು ಕರ್ಮಟ ಕಾರ್ಯಕರ್ತರು ಯಾವುದೇ ಅಧಿಕಾರ ಅನುಭವಿಸದೆ, ತಮ್ಮ ಜೀವನದ ಅಂತ್ಯದಲ್ಲಿ ಆರೋಗ್ಯ, ಆರ್ಥಿಕ ಮತ್ತು ವ್ಯಕ್ತಿಗತ ಹಾಳು ಮಾಡಿಕೊಂಡಿರುವ ಕಾರ್ಯಕರ್ತರಿಗೆ ಹೊಸ ಆಶಾಕಿರಣ ಮೂಡಿಸಿದೆ" ಎಂದು ಯತ್ನಾಳ್, ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಬಹಿರಂಗವಾಗಿಯೇ ಟೀಕಿಸುತ್ತಿದ್ದ ಯತ್ನಾಳ್, ಇನ್ನು ಸ್ವಲ್ಪದಿನ ಸುಮ್ಮನಿರುತ್ತೇನೆ ಎಂದು ಹೇಳಿದ್ದರು. "ವಿ.ಸೋಮಣ್ಣ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ"ಎಂದು ಯತ್ನಾಳ್ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications