ಉಪ ಚುನಾವಣೆ: ಜೆಡಿಎಸ್ ಸೋಲುವ ಅಭ್ಯರ್ಥಿಗೆ ಯಾರಾದರೂ ಮತ ಹಾಕುತ್ತಾರೇನ್ರೀ?
ವಿಜಯಪುರ, ಅ 8: ಸಿಂಧಗಿ ಮತ್ತು ಹಾನಗಲ್ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆರ್ ಎಸ್ ಎಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ಮುಂದುವರಿಸಿದ್ದಾರೆ. ಚರ್ಚೆಗೆ ನಾನು ರೆಡಿ ಎಂದು ಕುಮಾರಸ್ವಾಮಿಯವರು ಬಿಜೆಪಿಯವರಿಗೆ ಪಂಥಾಹ್ವಾನ ನೀಡಿದ್ದಾರೆ.
ಇನ್ನು ಇತ್ತ ಕಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಉಪ ಚುನಾವಣೆಗೆ ಜೆಡಿಎಸ್ ಪಾರ್ಟಿ, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ವಿಚಾರದಲ್ಲಿ ದಳಪತಿಗಳ ವಿರುದ್ದ ವಾಗ್ದಾಳಿ ಮುಂದುವರಿಸಿದ್ದಾರೆ.
ಸೋಲೋ ಅಭ್ಯರ್ಥಿಗೆ ಯಾರಾದರೂ ಮತ ಹಾಕುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಜೆಡಿಎಸ್ ಯಾವ ಉದ್ದೇಶಕ್ಕಾಗಿ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎನ್ನುವುದು ಮತದಾರನಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
"Who is that ಸಿದ್ದರಾಮಯ್ಯ? ಅವರು ಯಾರು ನನಗೆ ಹೇಳುವುದಕ್ಕೆ. ಅವರೇನು ನಮಗೆ ದೊಣ್ಣೆನಾಯಕನಾ. ನನ್ನ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ನನ್ನ ನಿರ್ಧಾರ"ಎಂದು ಕುಮಾರಸ್ವಾಮಿ ಹೇಳಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರತಿಕ್ರಿಯೆ ನೀಡಿದ್ದು ಹೀಗೆ..

ಸೋಲುವ ಕ್ಯಾಂಡಿಡೇಟಿಗೆ ಯಾರಾದರೂ ವೋಟ್ ಹಾಕುತ್ತಾರಾ - ಸಿದ್ದರಾಮಯ್ಯ
"ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ, ಅವರ ಉದ್ದೇಶ ಏನೇ ಇದ್ದರೂ ಕೂಡಾ, ಮತದಾರರು ಬುದ್ದಿವಂತರಿದ್ದಾರೆ. ಸೋಲುವ ಕ್ಯಾಂಡಿಡೇಟಿಗೆ ಯಾರಾದರೂ ವೋಟ್ ಹಾಕುತ್ತಾರಾ"ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುವ ಉದ್ದೇಶ ಅವರಿಗಿರಬಹುದು, ಆದರೆ ಜನರು ದಡ್ಡರಲ್ಲ ಎಂದು ವಿರೋಧ ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕುವುದಿಲ್ಲ
"ಮತದಾರನಿಗೆ ಯಾರಿಗೆ ವೋಟ್ ಹಾಕಬೇಕು, ಹಾಕಬಾರದು ಎನ್ನುವ ವಿವೇಚನೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಜೆಡಿಎಸ್ ಅಭ್ಯರ್ಥಿಗೆ ವೋಟ್ ಹಾಕುವುದಿಲ್ಲ"ಎನ್ನುವ ಖಚಿತ ವಿಶ್ವಾಸದ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ. ಬೆಲೆ ಏರಿಕೆ ವಿಚಾರ ಕಾಂಗ್ರೆಸ್ಸಿಗೆ ವರವಾಗಿ ಪರಿಣಮಿಸುತ್ತದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿರುವ ಸಿದ್ದರಾಮಯ್ಯ, ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನವನ್ನು ಪಡೆದಿದೆ, ಹುಬ್ಬಳ್ಳಿಯಲ್ಲೂ ನಾವು ಬಿಜೆಪಿಗಿಂತ ಮುಂದಿರಲಿಲ್ಲವೇ, ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಚಿಹ್ನೆಯ ಮೇಲೆ ಚುನಾವಣೆ ನಡೆದಿತ್ತು
"ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಚಿಹ್ನೆಯ ಮೇಲೆ ಚುನಾವಣೆ ನಡೆದಿತ್ತು, ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುವುದು ಬೇರೆ, ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆಗಳು ನಡೆಯುವುದು ಬೇರೆ ವಿಚಾರದ ಮೇಲೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರ ಮೇಲೆ ಆದಾಯ ತೆರಿಗೆ ದಾಳಿ ಕೇವಲ ತೋರಿಕೆಗಾಗಿ ಮಾಡಲಾಗಿದೆ"ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಸಿದ್ದರಾಮಯ್ಯನವರನ್ನು ಕೇಳಿ ಅಭ್ಯರ್ಥಿ ನಿಲ್ಲಿಸಲು ಸಾಧ್ಯವೇಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿ
"ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲುವಂತಹ ಹೋರಾಟವನ್ನು ನಾವು ಮಾಡಬೇಕಾಗಿದೆ. ಇದನ್ನೆಲ್ಲಾ ಲೆಕ್ಕಾಚಾರ ಮಾಡಿಕೊಂಡು ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಸಿದ್ದರಾಮಯ್ಯನವರನ್ನು ಕೇಳಿ ಅಭ್ಯರ್ಥಿ ನಿಲ್ಲಿಸಲು ಸಾಧ್ಯವೇ"ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಮೈಸೂರಿನಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲವೇ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದರು.
"ಎಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವುದು ನಮಗೆ ಗೊತ್ತಿದೆ, ಸಿದ್ದರಾಮಯ್ಯನವರು ನಮ್ಮ ಪಕ್ಷದ ಮುಖಂಡರಾ? ಅವರಿಗೆ ರಾಜಕೀಯ ಅನುಭವ ಏನಾದರೂ ಇದ್ದರೆ, ಜೆಡಿಎಸ್ ಅಭ್ಯರ್ಥಿಯ ಬಗ್ಗೆ ಕಮೆಂಟ್ ಮಾಡುವುದು ಅವರಿಗೆ ಅನಾವಶ್ಯಕ. ಮುಸ್ಲಿಂ ಸಮುದಾಯದವನ್ನು ನಮ್ಮಿಂದ ದೂರ ಮಾಡಬೇಕು ಎಂದು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿದರು" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದರು.












Click it and Unblock the Notifications