ಟಿಪ್ಪುನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗೆ ಈ ಗತಿ ಬಂದಿದೆ: ಯತ್ನಾಳ್
ವಿಜಯಪುರ, ಸೆಪ್ಟೆಂಬರ್ 3: ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಮೇಲೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವ ಮೇಲೆ ಶಿವಮೂರ್ತಿ ಮುರುಘಾ ಶರಣರು ಮತ್ತೆ ಮಠದ ಪೀಠಾಧಿಪತಿಯಾಗಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ನಗರದಲ್ಲಿ ಮಾತನಾಡಿದ ಯತ್ನಾಳ್, "ದೇಶ ಹಾಳಾಗುವುದಕ್ಕೆ ಪ್ರಗತಿಪರರೇ ಕಾರಣ, ಇಂದು ಸ್ವಾಮೀಜಿಯ ಪರಿಸ್ಥಿತಿಗೂ ಅವರೇ ಕಾರಣ, ಮುರುಘಾ ಶರಣರು ಟಿಪ್ಪು ಸುಲ್ತಾನ ಫೋಟೋ ತೆಗೆದುಕೊಂಡು ಹೋಗಿ ಮಠದಲ್ಲಿಟ್ಟರು. ಟಿಪ್ಪುವನ್ನು ವರ್ಣನೆ ಮಾಡಿದಕ್ಕೆ ಸ್ವಾಮೀಜಿಗೆ ಈ ಗತಿ ಬಂದಿದೆ. ಮಠ ಮಾನ್ಯಗಳು ಇರುವುದೇ ಧರ್ಮದ ರಕ್ಷಣಗಾಗಿ, ಆದರೆ ಮುರುಘಾ ಶರಣರೂ ಇಸ್ಲಾಮ್ ಧರ್ಮದ ವರ್ಣನೆ ಮಾಡಿದರು," ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಿದ್ದ ಸ್ವಾಮೀಜಿ ಪ್ರಗತಿಪರರ ಜೊತೆಗೂಡಿ ಕೆಲವು ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮವನ್ನು ಬೆಳಸಬೇಕಿತ್ತು, ಆದರೆ ವಿಭೂತಿ ಹಚ್ಚಿಕೊಂಡು, ಕುಂಕುಮ ಹಚ್ಚಿಕೊಂಡು ಟಿಪ್ಪು ಸುಲ್ತಾನ್ ಪ್ರಶಂಸೆ ಮಾಡಿದರು. ಆದರೆ ಟಿಪ್ಪು ವರ್ಣನೆ ಮಾಡಿದವರೂ ಯಾರು ಉದ್ದಾರ ಆಗಲ್ಲ, ಟಿಪ್ಪು ಖಡ್ಗ ತಂದ ವಿಜಯ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೊಡ್ಯೂಸರ್ ಹಾಳಾದ, ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ವ್ಯಂಗ್ಯವಾಡಿದರು.

ಟಿಪ್ಪುವಿನ ಪುತ್ಥಳಿ ಮಾಡಬಾರದಿತ್ತು
ಲಕ್ಷಾಂತರ ಹಿಂದೂಗಳನ್ನು ಕೊಂದ ಟಿಪ್ಪು ಸುಲ್ತಾನ್ ಪುತ್ಥಳಿಯನ್ನು ಮಠದಲ್ಲಿ ಮಾಡಿದ್ದಾರೆ. ಆತನ ಪೂಜೆ ಮಾಡುತ್ತಾರೆ, ಅದರಲ್ಲೂ ಮದಕರಿ ನಾಯಕನನ್ನು ಕೊಂದವ ಟಿಪ್ಪುವಿನ ತಂದೆ ಹೈದರಾಲಿ. ಮದಕರಿ ನಾಯಕ ಮಠಕ್ಕೆ ಸಾವಿರಾರು ಎಕರೆಯನ್ನು ನೀಡಿದ್ದಾರೆ. ಆದರೆ ಮದಕರಿ ನಾಯಕರು, ಒನಕೆ ಓಬವ್ವರ ನಾಡಿನಲ್ಲಿರುವ ಮಠದಲ್ಲಿ ಟಿಪ್ಪುವಿನ ಪುತ್ಥಳಿ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.
ಮತ್ತೆ ಮುರುಘಾ ಶರಣರು ಪೀಠಾಧಿಪತಿಯಾಗಬಾರದು
ಗಂಭೀರ ಆರೋಪ ಕೇಳಿಬಂದಿರುವ ಹಿನ್ನಲೆ ಶಿವಮೂರ್ತಿ ಶರಣರನ್ನು ಮತ್ತೆ ಮಠದಲ್ಲಿ ಇಟ್ಟಿಕೊಳ್ಳಲು ಆಗುವುದಿಲ್ಲ. ಸರಕಾರ ಮತ್ತು ವೀರಶೈವ ಲಿಂಗಾಯಿತ ಸಮಾಜ ಪರ್ಯಾಯ ವ್ಯವಸ್ಥೆ ಮಾಡಬೇಕು. ಎಲ್ಲಾ ಧರ್ಮದ ಅಭಿಮಾನವುಳ್ಳ ಮುಖಂಡರು ಸೇರಿ ಸಾವಿರಾರು ವರ್ಷಗಳ ಇತಿಹಾಸ , ಸಾವಿರಾರು ಕೋಟಿ ಆಸ್ತಿವುಳ್ಳವಂತಹ ಮಠ ಕೆಟ್ಟವರ ಕೈಗೆ ಸಿಗಂದಂತೆ ನೋಡಿಕೊಳ್ಳಬೇಕು. ಒಬ್ಬ ಒಳ್ಳೆಯ ಆಡಳಿತಾಧಿಕಾರಿ ಹಾಗೂ ಸ್ವಾಮೀಜಿಯನ್ನು ನೇಮಕ ಮಾಡಬೇಕು ಎಂದರು.












Click it and Unblock the Notifications