ಶಾಮನೂರು, ಖಂಡ್ರೆ ಇತರರು ಬರ್ತ್ ಸರ್ಟಿಫಿಕೇಟ್ ತೋರಿಸಲಿ: ಎಂಬಿ ಪಾಟೀಲ
ವಿಜಯಪುರ, ಜನವರಿ 8: ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಹಾಗೂ ತಿಪ್ಪಣ್ಣ ಅವರು ತಮ್ಮ ಹಾಗೂ ತಮ್ಮ ತಂದೆ-ತಾಯಿಗಳ ಜನನ ಪ್ರಮಾಣ ಪತ್ರವನ್ನು ಬಹಿರಂಗ ಪಡಿಸಲಿ. ಅವುಗಳಲ್ಲಿ ಹಿಂದೂ ಲಿಂಗಾಯತ ಅಂತಲೇ ಇರುತ್ತದೆ. ಒಂದು ವೇಳೆ ಅದರಲ್ಲಿ ವೀರಶೈವ ಅಂತ ಇದ್ದರೆ ಅವರಿಗೆ ನಾನು ತಲೆ ಬಾಗಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸವಾಲು ಹಾಕಿದ್ದಾರೆ.
ಇಲ್ಲಿ ಮಾತನಾಡಿದ ಅವರು, 17 ಸಾವಿರ ವೀರಶೈವರಲ್ಲಿ ಕೇವಲ 5 ಜನರ ಜನನ ಪ್ರಮಾಣ ಪತ್ರದಲ್ಲಿ ವೀರಶೈವ ಅಂತ ಇದ್ದರೆ ಅವರು ಹೇಳುವ ಹಾಗೇ ಕೇಳ್ತೀನಿ. ನಿನ್ನೆ ನಡೆದ ವೀರಶೈವ ಮಹಾಸಭಾದಲ್ಲಿ ನನ್ನ ಕ್ಷೇತ್ರದಲ್ಲಿ ಸೋಲಿಸಲು ನಿರ್ಧರಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಬರಲಿ, ಸ್ವಾಗತಿಸುತ್ತೇನೆ. ಅವರ ಶಕ್ತಿ ಪ್ರದರ್ಶಿಸಲಿ ಎಂದು ಪಂಥಾಹ್ವಾನ ನೀಡಿದರು.

ಅವರ ಶಕ್ತಿಯನ್ನು ಮೊದಲು ಅರಿತುಕೊಳ್ಳಲಿ ಎಂದ ಅವರು, ಯಾರೇ ಬಂದು ತಲೆ ಕೆಳಗಾಗಿ- ಕಾಲು ಮೇಲೆ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬಸವಣ್ಣ ಮತ್ತು ಮತಕ್ಷೇತ್ರದ ಜನರ ಆಶೀರ್ವಾದ ಇದ್ದಾಗ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. 50 ಸಾವಿರ ಮತಗಳ ಅಂತರದಿಂದ ನಾನು ಗೆಲ್ಲುವುದು ನಿಶ್ಚಿತ ಎಂದು ಪಾಟೀಲ್ ಹೇಳಿದರು.












Click it and Unblock the Notifications