ಸಿಡಿ ಪ್ರಕರಣ; ಯುವತಿ ಮನೆಗೆ ಪೊಲೀಸರ ನೋಟಿಸ್
ವಿಜಯಪುರ, ಮಾರ್ಚ್ 14; ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ.
ಭಾನುವಾರ ವಿಜಯಪುರ ಜಿಲ್ಲೆಯ ನಿಡಗುಂದಿಯ ಯುವತಿಯ ಮನೆ ಮುಂದೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಹೇಳಿಕೆ ಪಡೆಯಲು ನೋಟಿಸ್ ಅಂಟಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದ ಯುವತಿ ಶನಿವಾರ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಮಾಜಿ ಸಚಿವರಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ್ದರು. ರಕ್ಷಣೆ ಬೇಕು ಎಂದು ಮನವಿ ಮಾಡಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಬಿ. ಮಾರುತಿ ಅವರ ಹೆಸರಿನಲ್ಲಿ ನೋಟಿಸ್ ನೀಡಲಾಗಿದೆ. 13/3/2021ರಂದು ಸಿದ್ಧಪಡಿಸಲಾದ ನೋಟಿಸ್ ಅನ್ನು ವಿಜಯಪುರಕ್ಕೆ ತೆಗೆದುಕೊಂಡು ಹೋಗಿ ಇಂದು ಅಂಟಿಸಲಾಗಿದೆ.
ಸಿಡಿಯಲ್ಲಿರುವ ಯುವತಿಯ ಮನೆಗೆ ಬೀಗ ಹಾಕಿದ ಕಾರಣಕ್ಕೆ ಪೊಲೀಸರು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ತಮ್ಮ ಹೇಳಿಕೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ ಎಂದು ನೋಟಿಸ್ನಲ್ಲಿ ಮಾಹಿತಿ ನೀಡಲಾಗಿದೆ.
ನೋಟಿಸ್ ನೋಡಿದ/ ತಲುಪಿದ ತಕ್ಷಣ ತುರ್ತಾಗಿ ಈ ಕೆಳಗೆ ಸಹಿ ಮಾಡಿರುವ ಅಧಿಕಾರಿಯನ್ನು ಮೊಬೈಲ್/ ಈ -ಮೇಲ್ ಅನ್ನು ಸಂಪರ್ಕಿಸುವುದು ಮತ್ತು ತಾವು ನಿಗದಿಮಾಡಿದ ದಿನಾಂಕ/ ಸಮಯ ಮತ್ತು ಸ್ಥಳಕ್ಕೆ ತಮ್ಮ ಹೇಳಿಕೆಯನ್ನು ಪಡೆಯಲಾಗುತ್ತದೆ, ತಮ್ಮ ಮನವಿಯಂತೆ ಸೂಕ್ತ ರಕ್ಷಣೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications