ವಿಜಯಪುರ; ಫೆಬ್ರವರಿಯಲ್ಲಿ ಮೋದಿ ಉದ್ಘಾಟಿಸಲಿದ್ದಾರೆ ಏರ್ಪೋರ್ಟ್
ಪ್ರಧಾನಿ ನರೇಂದ್ರ ಮೋದಿ 2023ರ ಫೆಬ್ರವರಿಯಲ್ಲಿ ವಿಜಯಪುರ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. Airbus-320 ಮಾದರಿ ವಿಮಾನ ಇಳಿಸುವ ರೀತಿಯಲ್ಲಿ ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತಿದೆ.
ವಿಜಯಪುರ, ಜನವರಿ 27; ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯ ಪ್ರವಾಸದ ವೇಳೆ ಅವರು ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿಜಯಪುರ ನಗರದ ಹೊರವಲಯದ ಬುರಾಣಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಶೇ 75ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ. ಕಲಬುರಗಿಗೆ ನರೇಂದ್ರ ಮೋದಿ ಭೇಟಿ ನೀಡಿದಾಗ ಉದ್ಘಾಟನೆ ಬಗ್ಗೆ ಮಾಹಿತಿ ಸಹ ನೀಡಲಾಗಿದೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರಿಡಲು ಸಂಪುಟ ಸಭೆ ಅನುಮೋದನೆ
ಈ ವಿಮಾನ ನಿಲ್ದಾಣ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಅವರ ಕನಸಾಗಿದೆ. ವಿಮಾನ ನಿಲ್ದಾಣವನ್ನು 2022ರ ಡಿಸೆಂಬರ್ನಲ್ಲಿ ಸಂಚಾರಕ್ಕೆ ಮುಕ್ತಗೊಳ್ಳುವ ಗುರಿ ಹೊಂದಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಿದ್ದು, 2023ರಲ್ಲಿ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಲಿದೆ.
ವಿಜಯಪುರ; ವಿಮಾನದಲ್ಲಿ ಹಾರುವ ಜನರ ಕನಸು ಶೀಘ್ರವೇ ನನಸು
ಮಂಗಳವಾರ ಗೋವಿಂದ ಕಾರಜೋಳ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಪರೀಶಿಲಿಸಿದರು. ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿರುವ ಅವರು, 'ಅಂತಿಮ ಹಂತದಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ. ವಿಮಾನ ನಿಲ್ದಾಣವನ್ನು Airbus-320 ವಿಮಾನಗಳ ಹಾರಾಟಕ್ಕೆ ಅಗತ್ಯವಿರುವಂತೆ ರೂಪಿಸಲಾಗಿದೆ. ಒಟ್ಟು 347.92 ಕೋಟಿ ರೂ. ಮಂಜೂರಾಗಿದ್ದು, ಎರಡು ಹಂತದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
Breaking; ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜನರ ಪ್ರವೇಶ ನಿರ್ಬಂಧ
ಗೋವಿಂದ ಕಾರಜೋಳ ಕನಸಿನ ಯೋಜನೆ
ಗೋವಿಂದ ಕಾರಜೋಳ ಬಾಗಲಕೋಟೆಯ ಮುಧೋಳ ಕ್ಷೇತ್ರದ ಶಾಸಕರು. ಆದರೆ ವಿಜಯಪುರ ಜಿಲ್ಲೆಯ ವಿಮಾನ ನಿಲ್ದಾಣ ಅವರ ಕನಸಿನ ಯೋಜನೆಯಾಗಿದೆ. ರಾಜಕೀಯಕ್ಕೆ ಬರುವ ಮೊದಲು ಅವರು ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 1975-76ರಲ್ಲಿ ವಿಮಾನ ನಿಲ್ದಾಣ ಯೋಜನೆಗೆ ಸರ್ವೆ ನಡೆದಿತ್ತು. ಆಗ ಅವರು ಸರ್ವೇ ತಂಡದ ಭಾಗವಾಗಿದ್ದರು. ಬಳಿಕ ಅವರು ರಾಜಕೀಯ ಪ್ರವೇಶ ಮಾಡಿ, ಸಚಿವರಾಗಿ ಈಗ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ.
727 ಎಕರೆ ಪ್ರದೇಶದಲ್ಲಿ ನಿರ್ಮಾಣ
ಬುರಾಣಪುರದಲ್ಲಿ ಸುಮಾರು 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಕರ್ನಾಟಕ ಸರ್ಕಾರ ಈಗಾಲೇ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ 12ನೇ ಶತಮಾನದ ಸಮಾಜ ಸುಧಾರಕ 'ಬಸವೇಶ್ವರ ವಿಮಾನ ನಿಲ್ದಾಣ' ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ವಿಮಾನ ನಿಲ್ದಾಣ ಯೋಜನೆ ಬಗ್ಗೆ ಮಾತನಾಡಿ, "ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್ 72 ದಿಂದ ಏರ್ ಬಸ್ 320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 127.29 ಕೋಟಿ ಹೆಚ್ಚುವರಿ ಅನುದಾನದ ಕಾಮಗಾರಿಗೆ ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ" ಎಂದರು.
ಎರಡು ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ವಿಜಯಪುರ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ವಿಜಯಪುರ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರಕಲಿದ್ದು ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪುರ, ಸೊಲ್ಲಾಪುರ ಹೀಗೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಜನರಿಗೆ ಅನುಕೂಲವಾಗಲಿದೆ.
ವಿಜಯಪುರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಯಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ಅಭಿವೃದ್ಧಿಯಾಗುತ್ತದೆ. ವಿಮಾನ ನಿಲ್ದಾಣದಿಂದ ವಿವಿಧ ಕ್ಷೇತ್ರಗಳು ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ನರೇಂದ್ರ ಮೋದಿ ಇದರ ಜೊತೆಗೆ ಹೊರ್ತಿ ನೀರಾವರಿ ಯೋಜನೆಗೆ ಸಹ ಶಂಕುಸ್ಥಾಪನೆ ಮಾಡಲಿದ್ದಾರೆ. 2,700 ಕೋಟಿ ರೂ.ಗಳ ಯೋಜನೆ ಇದಾಗಿದೆ.
ವಿಮಾನ ನಿಲ್ದಾಣದ ವಿಶೇಷತೆಗಳು
ವಿಜಯಪುರ ವಿಮಾನ ನಿಲ್ದಾಣ 1.9 ಕಿ. ಮೀ. ರನ್ ವೇಯನ್ನು ಹೊಂದಿದೆ. ಮೊದಲು ವಿಮಾನ ನಿಲ್ದಾಣದ ಯೋಜನೆ ಎಟಿಆರ್-72-600 ಮಾದರಿ ಇತ್ತು ಮತ್ತು 95 ಕೋಟಿ ರೂ. ಅನುದಾನ ನೀಡಲಾಗಿತ್ತು. ಪೀಕ್ ಅವರ್ನಲ್ಲಿ 200 ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿತ್ತು.
ಕರ್ನಾಟಕ ಸರ್ಕಾರ ಬಳಿಕ ಯೋಜನೆಯನ್ನು ಅಭಿವೃದ್ಧಿಪಡಿಸಿತು. ಏರ್ಬಸ್-320 ಮಾದರಿ ವಿಮಾನ ಇಳಿಯಲು ಸಹ ಅನುಕೂಲವಾಗುವಂತೆ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ರೂ. 127.92 ಕೋಟಿ ಹೆಚ್ಚುವರಿ ಅನುದಾನ ನೀಡಿತು. ಒಟ್ಟು ಎರಡು ಹಂತದಲ್ಲಿ ಈ ಯೋಜನೆ ನಿರ್ಮಾಣ ಮಾಡಲಾಗುತ್ತಿದೆ.