ರವಿ ಬೆಳಗೆರೆ ಪ್ರಕರಣ: ಪತ್ರಕರ್ತನ ವಿಚಾರಣೆ ನಡೆಸಿದ ಸಿಸಿಬಿ
ವಿಜಯಪುರ, ಡಿಸೆಂಬರ್ 11 : ಪತ್ರಕರ್ತ ರವಿ ಬೆಳಗೆರೆ ಅವರು ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ಮೂರನೇ ಆರೋಪಿ ವಿಜು ಬಡಿಗೇರನ ಹುಡುಕಾಟಕ್ಕೆಂದು ವಿಜಯಪುರದಲ್ಲಿ ಬೀಡು ಬಿಟ್ಟಿರುವ ಸಿಸಿಬಿ ತಂಡ ಇಂದು (ಡಿಸೆಂಬರ್ 11) ವಿಜಯಪುರದ ಸ್ಥಳೀಯ ಪತ್ರಕರ್ತ ಟಿ.ಕೆ.ಮಲಗೊಂಡ ಅವರನ್ನು ವಿಚಾರಣೆ ನಡೆಸಿತು.
'ಅಪರಾಧಕ್ಕೆ ಸವಾಲು' ಪತ್ರಿಕೆಯ ಸಂಪಾದಕರಾಗಿರುವ ಟಿ.ಕೆ.ಮಲಗೊಂಡ ಅವರು ಭೀಮಾತೀರದ ಹಂತಕರ ಜೊತೆ ನಿಕಟ ಸಂಬಂಧ ಹೊಂದಿರುವ ಕಾರಣ ಅವರನ್ನು ಸಿಸಿಬಿ ತಂಡ ವಿಚಾರಣೆ ನಡೆಸಿದೆ.

ವಿಜಯಪುರ ನಗರದ ಆದಿಲ್ ಶಾಹಿ ಹೊಟೇಲಿನಲ್ಲಿ 11 ರಿಂದ 5ರ ವರೆಗೆ ಸಿಸಿಬಿ ತಂಡ ಮಲ್ಲಗೊಂಡ ಅವರನ್ನು ವಿಚಾರಣೆ ನಡೆಸಿತು. ಸಿಂಧಗಿ ತಾಲ್ಲೂಕಿನ ಗುಂದಗಿ ಮೂಲದ ಟಿ.ಕೆ.ಮಲಗೊಂಡ ಬಹಳ ವರ್ಷಗಳಿಂದಲೂ ಅಪರಾಧ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಲ್ಲಗೊಂಡ ಅವರ ಬಳಿ ಭೀಮಾ ತೀರದ ಹಂತಕರ ವಿವರ, ಅವರು ಶಸ್ತ್ರಾಸ್ತ್ರ ಕೊಳ್ಳುವ ಬಗೆ, ಸಂಪರ್ಕ, ಹೆಸರುಗಳು, ವಿಳಾಸ, ಅಪರಾಧಗಳ ಬಗ್ಗೆ ಮಾಹಿತಿಯ ಜೊತೆಗೆ ವಿಜು ಬಡಿಗೇರನ ಬಗ್ಗೆಯೂ ಪ್ರಶ್ನೆಗಳನ್ನು ಮಾಡಿದರು ಎನ್ನಲಾಗಿದೆ.
ಮೂರು ದಿನಗಳಿಂದಲೂ ವಿಜಯಪುರದಲ್ಲಿ ಬೀಡು ಬಿಟ್ಟಿರುವ ಸಿಸಿಬಿ ತಂಡ ಸುನಿಲ್ ಕೊಲೆ ಪ್ರಯತ್ನ ಪ್ರಕರಣದ ಮೂರನೇ ಆರೋಪಿ ವಿಜು ಬಡಿಗೇರನನ್ನು ಬಂಧಿಸಲು ಹೊಂಚಿ ಹಾಕಿ ಕೂತಿದೆ.












Click it and Unblock the Notifications