ವಿಜಯಪುರದಲ್ಲಿ ಬಿಎಸ್ ವೈ ನೇತೃತ್ವದಲ್ಲಿ ಪ್ರತಿಭಟನೆ
ವಿಜಯಪುರ, ನವೆಂಬರ್27 : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸೋಮವಾರ (ನ.27)ರಂದು ವಿಜಯಪುರದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೀಶ್ ಗೌಡ ಹತ್ಯೆ, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಚಿವ ಕುಲಕರ್ಣಿ ಹಾಗೂ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಪಡೆಯುವ ಬದಲು ಸಿದ್ದರಾಮಯ್ಯ ಅವರ ನಾಚಿಗೆಗೆಟ್ಟ ಸರ್ಕಾರ ಅವರ ರಕ್ಷಣೆಗೆ ನಿಂತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದರು.

ವಿನಯ ಕುಲಕರ್ಣಿ ಪ್ರಕರಣ ಮುಚ್ಚಿ ಹಾಕಲು ಕೆಂಪಯ್ಯ ಅವರನ್ನು ಧಾರವಾಡಕ್ಕೆ ಕಳುಹಿಸಿ ಪ್ರಭಾವ ಬೀರುತ್ತಿದ್ದಾರೆ. ಇದು ಲಜ್ಜೆಗೆಟ್ಟ ಕೆಲಸ, ಇಬ್ಬರು ಸಚಿವರ ರಾಜಿನಾಮೆ ಬಗ್ಗೆ ನನ್ನ ಯಾತ್ರೆ ಉದ್ದಕ್ಕೂ ಪ್ರಸ್ತಾಪ ಮಾಡುತ್ತೇನೆ. ನಮ್ಮ ಸರ್ಕಾರ ಬಂದ ಮೇಲೆ ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇನೆ ಎಂದು ಹೇಳಿದರು.
ನೀರಾವರಿ ಇಲಾಖೆಯಲ್ಲಿ ಅಷ್ಟೇ ಅಲ್ಲ ಸರ್ಕಾರದಲ್ಲಿ ಸಾಕಷ್ಟು ಹಗರಣಗಳಾಗಿವೆ. ಜಾಹಿರಾತಿನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ಬದಲು ತಮ್ಮ ಫೋಟೋ ಹಾಕಿ ದಲಿತರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಮೋದಿ ಬಗ್ಗೆ ಮಾತನಾಡುವ ಮಾತನಾಡುವ ನೀತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಮೋದಿ ವಿರುದ್ಧ ಮಾತನಾಡಿದರೆ ಹೆಚ್ಚು ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ ಎಂದರು. ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಅವರ ಭಾಷಣದ ಕುರಿತು ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ರಾಜಕೀಯ ಭಾಷಣ ಮಾಡಿದ್ದು ಅಪರಾಧ, ಸಚಿವ ಅನಂತಕುಮಾರ್ ಅವರು ಸಮ್ಮೇಳನದಲ್ಲೇ ಚಂಪಾಗೆ ಛೀಮಾರಿ ಹಾಕಿದ್ದಾರೆ.
ಸಚಿವ ಎಂ.ಬಿ. ಪಾಟೀಲ್ ಹಗರಣವನ್ನೂ ನಾವು ಬಯಲು ಮಾಡಲಿದ್ದೇವೆ. ಮುಖ್ಯಮಂತ್ರಿಗೆ ಎಂ.ಬಿ. ಪಾಟೀಲ್ ಕಮಿಚನ್ ಏಜೆಂಟ್ ಇದ್ದಂತೆ, ಪ್ರತಿ ಕಾಮಗಾರಿಯಲ್ಲೂ ಕಮಿಚನ್ ಪಡೆದು ಮುಖ್ಯಮಂತ್ರಿ ನೀರಾವರಿ ಸಚಿವರು ಸಮಪಾಲನ್ನು ಹಂಚಿಕೊಂಡು ಅಭಿವೃದ್ಧಿಯನ್ನು ಮುಂದುವರೆಯದಂತೆ ನೋಡಿಕೊಳ್ಳುತ್ತಿರುವ ಸರ್ಕಾರವಿದು. ಡಿಸೆಂಬರ್ 2 ರಂದು ಅವರ ಕ್ಷೇತ್ರದಲ್ಲೇ 50 ಸಾವಿರ ಜನರನ್ನು ಸೇರಿಸಿ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಂದರ್ಭದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹಲವಾರು ಮುಖಂಡರು ಹಾಜರಿದ್ದರು.












Click it and Unblock the Notifications