ವಿಜಯಪುರದಲ್ಲಿ ವರುಣನ ಪರಾಕ್ರಮ: ಬಿಜ್ಜಳ ಸೇತುವೆ ಮುಳುಗಡೆ
ವಿಜಯಪುರ, ಆಗಸ್ಟ್ 4: ಜಿಲ್ಲೆಯ ತಾಳಿ ಕೋಟೆ ಸಮೀಪ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ಎರಡು ದಿನಗಳಿಂದ ಮಳೆಯಿಂದಾಗಿ ಡೋಣಿ ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹ ಉಂಟಾಗಿದ್ದು, ನದಿ ಸುತ್ತಮುತ್ತಲಿನ ಜಮೀನು ಸಂಪೂರ್ಣ ಜಲಾವೃತಗೊಂಡಿದೆ. ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ರೈತರಿಗೆ ಕಂಗಾಲಾಗುವಂತೆ ಮಾಡಿದೆ.
ವಿಜಯಪುರ ಜಿಲ್ಲೆಯ ಐದು ತಾಲೂಕುಗಳಲ್ಲಿ ಡೋಣಿ ನದಿ ಹರಿಯುತ್ತದೆ. ತಿಕೋಟಾ, ಬಬಲೇಶ್ವರ, ಬಾಗೇವಾಡಿ, ದೇವರ ಹಿಪ್ಪರಗಿ, ತಾಳಿಕೋಟೆ ತಾಲೂಕಿನಲ್ಲಿ ಡೋಣಿ ನದಿ ಹರಿಯುತ್ತಿದೆ. ನದಿಯಲ್ಲಿ ಹೂಳು ತುಂಬಿರುವ ಪರಿಣಾಮ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಳಿ ಜಮೀನುಗಳಿಗೆ ನೀರು ನುಗ್ಗಿದೆ. ಇದರರಿಂದ ಕೆಲವು ರೈತರು ಬಿತ್ತನೆ ಮಾಡಿದ್ದ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿದೆ. ಇದರಿಂದ ಅಪಾರ ನಷ್ಟಕ್ಕೊಳಗಾಗಿರುವ ರೈತರು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

ಬಿಜ್ಜಳ ಸೇತುವೆ ಮೇಲೆ ಹರಿಯುತ್ತಿರುವ ನೀರು
ಡೋಣಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ಬಿಜ್ಜಳ ಕೆಳ ಸೇತುವೆ ಮತ್ತೆ ಮುಳುಗಡೆಯಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಭಾರಿ ವಾಹನಗಳು ಓಡಾಟ ಮಾತ್ರ ನಿಲ್ಲಿಸಿಲ್ಲ. ಅಪಾಯವನ್ನೂ ಲೆಕ್ಕಿಸದೆ ವಾಹನ ಚಾಲಕರ ದುಸ್ಸಾಹಸ ಮೆರೆಯುತ್ತಿದ್ದಾರೆ. ಲಾರಿ, ಟಿಪ್ಪರ್ ಸೇರಿದಂತೆ ಬೃಹತ್ ವಾಹನಗಳನ್ನು ನೀರಿನಲ್ಲೇ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಈ ಪರಿಸ್ಥಿತಿಯಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ಸಂಭವಿಸಲಿದೆ.

ಸಿಡಿಲಿಗೆ ಮಹಿಳೆ ಸಾವು
ಜಿಲ್ಲೆಯ ಕಲಕೇರಿ ಸಮೀಪದ ಹುಣಶ್ಯಾಳ ಗ್ರಾಮದಲ್ಲಿ ಬುಧವಾರ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದದ್ದಾರೆ. ಜೈನಾಬಿ ನಜೀರ್ ಅಹ್ಮದ್ ಸಿಪಾಯಿ(55) ಎಂಬುವವರು ಮೃತ ದುರ್ದೈವಿ. ಜಿಲ್ಲೆಯಲ್ಲಿ ಮಳೆಯಿಂದಾಗಿ ಜಿಲ್ಲೆಯಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಇಂಡಿ ತಾಲ್ಲೂಕಿನ ಬಳ್ಳೊಳ್ಳಿಯಲ್ಲಿ ಮೂರು ಮನೆಗಳು ಭಾಗಶಃ ಬಿದ್ದಿವೆ. ವಿಜಯಪುರ ತಾಲ್ಲೂಕಿನಲ್ಲಿ ಐದು, ತಾಳಿಕೋಟೆ ತಾಲ್ಲೂಕಿನಲ್ಲಿ ಎರಡು, ಸಿಂದಗಿ, ತಿಕೋಟಾ ಮತ್ತು ನಿಡಗುಂದಿ ತಾಲ್ಲೂಕಿನಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಶಾಸಕ ನಡಹಳ್ಳಿ ಭೇಟಿ, ಪರಿಹಾರದ ಭರವಸೆ
ಮುದ್ದೇಬಿಹಾಳ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಸ್ಥಳಕ್ಕೆ ಮಳೆಯಲ್ಲೆ ಮುದ್ದೇಬಿಹಾಳ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಭೇಟಿ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿದ ಹಾನಿಯ ಬಗ್ಗೆ ಮಾಹಿತಿಗಳನ್ನ ಪಡೆದುಕೊಂಡರು. ಹಲವು ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿದ್ದು, ಅಲ್ಲಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ಅಧಿಕಾರಿಗಳಿಗೆ ಖಡಕ್ ಸೂಚನೆ
ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೂ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ನಡಹಳ್ಳಿ ಸೂಚನೆ ನೀಡಿದರು. ಮುದ್ದೇಬಿಹಾಳ ಪಟ್ಟಣ, ನಾಲ್ವತವಾಡ ಸೇರಿದಂತೆ ಮುದ್ದೇಬಿಹಾಳ ಕ್ಷೇತ್ರದ ಹಲವೆಡೆ ಉಂಟಾದ ಮಳೆ ಹಾನಿಗಳ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಜನರ ನೆರವಿಗೆ ಹೋಗಬೇಕೆಂದು ತಿಳಿಸಿದ್ದಾರೆ.
ಜಿಲ್ಲೆಯ ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ಸುರಿಯುತ್ತಿದ್ದ ಮಳೆಗೆ ಜನ ಹೈರಾಣಾಗಿ ಹೋಗಿದ್ದರು. ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ತಾಳಿಕೋಟೆಯಲ್ಲಿ ಅತ್ಯಧಿಕ 46 ಮಿಮಿ, ವಿಜಯಪುರದಲ್ಲಿ 38.60 ಮಿಮಿ ಮಳೆಯಾಗಿದೆ.












Click it and Unblock the Notifications