ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್ನಿಂದ 6 ವರ್ಷ ಉಚ್ಛಾಟನೆಯಾದ 6 ಮುಖಂಡರು
ವಿಜಯಪುರ, ಜನವರಿ 11: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದೆ. ಇಷ್ಟರಲ್ಲಾಗಲೇ ಪಕ್ಷ ವಿರೋಧಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಆರೋಪದ ಮೇರೆಗೆ 06 ಜನ ಮುಖಂಡರನ್ನು ಜೆಡಿಎಸ್ ಪಕ್ಷವು 06 ವರ್ಷದ ಅವಧಿಗೆ ಉಚ್ಛಾಟನೆಗೊಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ ಆಸುಪಾಸಿನಲ್ಲಿ ನಡೆಯಲಿವೆ. ಕೆಲವೇ ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಜೆಡಿಎಸ್ನ ಆರು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ರಾಜ್ಯದೆಲ್ಲಡೆ ಪಂಚರತ್ನ ಯಾತ್ರೆ ನಡೆಯುತ್ತಿದೆ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಅಲೆ ಸೃಷ್ಟಿಸುವ ವಿಶ್ವಾಸ ಎಚ್ಡಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ವಿಜಯಪುರ ಜಿಲ್ಲೆಯ ಜೆಡಿಎಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗಗಳು ನಡೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಜಯಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಅವರು ಬುಧವಾರ ಪಕ್ಷದಲ್ಲಿದ್ದುಕೊಂಡೇ ಪಕ್ಷದ ವಿರುದ್ಧವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಆರು ಜನರನ್ನು ಉಚ್ಛಾಟನೆ ಮಾಡಿ ಆದೇಶ ಹೊರಿಡಿದ್ದಾರೆ. ಜೆಡಿಎಸ್ ಪಕ್ಷದ ಈ ಆದೇಶದ ಮುಂದಿನ ಆರು ವರ್ಷದವರೆಗೆ ಅನ್ವಯವಾಗಲಿದೆ.

ಉಚ್ಛಾಟಿತ 6 ನಾಯಕರು
ಉಚ್ಛಾಟನೆಗೊಂಡ ಆರು ನಾಯಕರ ಮಾಹಿತಿ ನೋಡುವುದಾದರೆ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೇ ಸ್ನೇಹಲತಾ ಶೆಟ್ಟಿ, ಅಲ್ಪ ಸಂಖ್ಯಾತ ಘಟಕ ಜಿಲ್ಲಾಧ್ಯಕ್ಷರಾದ ಯಾಕೂಬ್ ಕೂಪರ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕ ಕಾರ್ಯಾದ್ಯಕ್ಷ ದಸ್ತಗೀರ ಸಾಲೋಟಗಿ, ಅಲ್ಪ ಸಂಖ್ಯಾತ ಘಟಕ ನಗರಾಧ್ಯಕ್ಷ ಸಂಶುದ್ದಿನ ಮುಲ್ಲಾ, ಯೂತ್ ಘಟಕದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಪಾಟೀಲ್ ಹಾಗೂ ಸಿಂದಗಿ ಕ್ಷೇತ್ರದ ಮುಖಂಡ ಅಕ್ಬರ್ ಮುಲ್ಲಾ ಎನ್ನುವರು ಉಚ್ಛಾಟನೆಗೊಂಡವರು.
ವಿಜಯಪುರ ನಗರದ ಪಕ್ಷದ ಮುಖಂಡರು ಒಂದು ವರ್ಷದಿಂದ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ. ಇನ್ನೇನು ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ದೃಷ್ಟಿಯಿಂದ ತೆಗೆಯಲಾಗಿದೆ ಎಂದು ಜಿಲ್ಲಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಕೆಲವರಿಗೆ ಈ ಹಿಂದೆಯು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ತಮ್ಮ ಕಾಯಕ ಮುಂದುವರಿಸಿದ್ದರು. ಪಕ್ಷದ ಹಿತದೃಷ್ಟಿಯಿಂದ ಉಚ್ಭಾಟನೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಈ ಹಿಂದೆ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ವೇಳೆ ಬಿಜೆಪಿ ಪಕ್ಷವು ಸಹ ಕೆಲವು ಮುಖಂಡರನ್ನು ಉಚ್ಛಾಟಿಸಿದ್ದನ್ನು ಸ್ಮರಿಸಬಹುದು.












Click it and Unblock the Notifications