ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿದ ಪದೂರು ಗ್ರಾಮದ ಯುವಕರು
ಉಡುಪಿ, ಜನವರಿ. 06 : ಪದೂರು ಗ್ರಾಮದ ಜನರನ್ನು ನಿದ್ದೆಗೆಡಿಸಿದ್ದ ಸುಮಾರು 8 ತಿಂಗಳಿನ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಪದೂರಿನ ಪ್ರಕಾಶ್, ಪೃಥ್ವಿ ಮತ್ತು ಸೂರಜ್ ಎನ್ನುವ ಯುವಕರು ಈ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಉಡುಪಿ ಜಿಲ್ಲೆಯ ಪದೂರು ಗ್ರಾಮದಲ್ಲಿ ಇತೀಚೆಗಷ್ಟೆ ಚಿರತೆ ಹಾವಳಿಯಿಂದ ಅಲ್ಲಿನ ಜನರು ಸಾಕಷ್ಟು ಭಯದಿಂದ ಓಡಾಡುವಂತಹ ಪರಿಸ್ಥಿತಿ ಎದುರಾಗಿತ್ತು.
ಹೌದು. ಮಜೂರು, ಪದೂರು ಹಾಗೂ ಕಲತ್ತುರಿನಲ್ಲಿ ಹಲವಾರು ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು. ಈ ಬಗ್ಗೆ ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಏನು ಪ್ರಯೋಜನವಾಗಿರಲಿಲ್ಲ.
ಬುಧವಾರ ಮಧ್ಯಾಹ್ನ ಮೂವರು ಯುವಕರು ಪದೂರು ಬಳಿ ಚಿರತೆಯನ್ನು ಹಿಡಿಯಲು ಹರಸಾಹಸ ಪಟ್ಟರು. ಕೊನೆಗೆ ಬಲೆ ಹಾಕಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರಣ್ಯಾಧಿಕಾರಿಗಳಾದ ನಾಗೇಶ್ ಬಿಲ್ಲವ, ಜಯರಾಮ್ ಶೆಟ್ಟಿ, ಪ್ರಭಾತ್ ಕುಮಾರ್ ಮತ್ತು ಸಂದೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದಲ್ಲದೆ ಇನ್ನೆರಡು ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಚಿರತೆಗಳನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.