ಉಡುಪಿಯಲ್ಲಿ ಯಕ್ಷಗಾನ ಕಲಾವಿದ ಸ್ತ್ರೀವೇಷಧಾರಿ ನಿಗೂಢ ಸಾವು: ಆಗಿದ್ದೇನು..?
ಉಡುಪಿ, ಜುಲೈ 31: ಕರಾವಳಿಯ ಯಕ್ಷಗಾನ ರಂಗದಲ್ಲಿ ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು (26) ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಸೇವೆ ನೀಡಿದ್ದ ಗುರುಪ್ರಸಾದ್ ನೀರ್ಜೆಡ್ಡು 26 ವರ್ಷಕ್ಕೆ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.
ಗುರುಪ್ರಸಾದ್ ನೀರ್ಜೆಡ್ಡು ಅವರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜುಲೈ 27ರಂದು ಇಲಿ ಪಾಷಾಣ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ನಿನ್ನೆ (ಜುಲೈ 30) ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಗುರುಪ್ರಸಾದ್ ನೀರ್ಜೆಡ್ಡು ಆತ್ಮಹತ್ಯೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.

ಮಂದಾರ್ತಿ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾರಾಡಿ ರಮೇಶ ಗಾಣಿಗರಿಂದ ಗುರುಪ್ರಸಾದ್ ಯಕ್ಷಗಾನ ನೃತ್ಯಾಭ್ಯಾಸ ಮಾಡಿದರು. ಭವಿಷ್ಯದಲ್ಲಿ ಭರವಸೆಯ ಕಲಾವಿದರಾಗಿದ್ದ ಇವರು ಮುಂದಿನ ತಿರುಗಾಟಕ್ಕೆ ಕುಂದಾಪುರ ತಾಲೂಕಿನ ಹಾಲಾಡಿ ಮೇಳಕ್ಕೆ ನೇಮಕಗೊಂಡಿದ್ದರು. ಸುಮಾರು 12 ವರ್ಷ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು, ಮಂದಾರ್ತಿ, ಮಡಾಮಕ್ಕಿ, ಅಮೃತೇಶ್ವರಿ, ಸಾಲಿಗ್ರಾಮ ಹಾಗೂ ಮಾರಣಕಟ್ಟೆ ಮೇಳಗಳಲ್ಲಿ ಈಗಾಗಲೇ ಸೇವೆ ಸಲ್ಲಿಸಿದ್ದರು.
ಸ್ತ್ರೀವೇಷಧಾರಿಯಾಗಿ ತಮ್ಮ ಕುಣಿತ, ಮಾತು ಹಾಗೂ ಕಲೆಯಿಂದ ಅಪಾರ ಯಕ್ಷ ಅಭಿಮಾನಿಗಳನ್ನು ಹೊಂದಿದ್ದ ಗುರುಪ್ರಸಾದ್ ನೀರ್ಜೆಡ್ಡು ಆತ್ಮಹತ್ಯೆಗೆ ಶರಣಾಗಿರುವು ಮಾತ್ರ ಶಾಕಿಂಗ್ ವಿಚಾರವಾಗಿದೆ. 12 ವರ್ಷ ಸ್ತ್ರೀ ವೇಷಧಾರಿಯಾಗಿ ಕಲಾಸೇವೆಗೈದ ಗುರುಪ್ರಸಾದ್ ನೀರ್ಜೆಡ್ಡು ಅವರು ತಾಯಿ, ತಮ್ಮ, ಸ್ನೇಹಿತರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನದ ಅಭಿಮಾನಿಗಳು ಕೂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications