ಹಿಂಸೆರಹಿತ ಕಂಬಳಕ್ಕೆ ಪೇಜಾವರ ಶ್ರೀಗಳ ಬೆಂಬಲ
ಉಡುಪಿ, ಜನವರಿ 25 : ಜಲ್ಲಿಕಟ್ಟಿನಂತೆ ಕಂಬಳ ಆಚರಣೆಗೂ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ವಾದ ಗಟ್ಟಿಗೊಳ್ಳುತ್ತಿರುವಾಗಲೇ, ಹಿಂಸೆ ರಹಿತವಾದ ಕಂಬಳ ನಡೆಯಬೇಕು ಎಂದು ಪರ್ಯಾಯ ಪೀಠಾಧಿಪತಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಒನ್ಇಂಡಿಯಾ ಕನ್ನಡದ ಜೊತೆ ಬುಧವಾರ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ಪ್ರಾಣಿಗಳಿಗೆ ಇರಲಿ ಯಾರಿಗೇ ಇರಲಿ ಹಿಂಸೆ ಆಗಬಾರದು. ಮನುಷ್ಯರ ಓಟದ ಸ್ಪರ್ಧೆಯಂತೆ ಕೋಣಗಳ ಓಟದ ಸ್ಪರ್ಧೆಯೂ ಇರಬೇಕು. ಮುನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ, ಹಾಗೆಯೇ ಕೋಣಗಳಿಗೂ ಹೊಡೆಯದೆ ಸ್ಪರ್ಧೆ ನಡೆಯಲಿ ಎಂದರು.
ಪೊಂಗಲ್ ಸಮಯದಲ್ಲಿ ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಗೆ ನೀಡುವ ಹಿಂಸೆಯನ್ನು ಕಂಬಳಕ್ಕೆ ಹೋಲಿಸಲಾಗದು ಎಂದು ಪೇಜಾವರ ಶ್ರೀಗಳು ಖಚಿತ ಅಭಿಪ್ರಾಮ ವ್ಯಕ್ತಪಡಿಸಿದರು.
ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಜನಪ್ರಿಯವಾಗಿರುವ ಕಂಬಳದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸಿ ದಿನದಿಂದ ದಿನಕ್ಕೆ ಕರಾವಳಿಯಲ್ಲಿ ಹೋರಾಟ ಕಾವೇರತೊಡಗಿದೆ. ಸಾಫ್ಟ್ ವೇರ್ ಇಂಜಿನಿಯರುಗಳು ಕೂಡ ಕಂಬಳಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ರಾಮಾಯಣದಲ್ಲಿ ಎತ್ತೊಂದಕ್ಕೆ ಒಬ್ಬ ಹೊಡೆದಾಗ ಶ್ರೀರಾಮಚಂದ್ರ ಅದಕ್ಕೆ ಆಕ್ಷೇಪಿಸಿದ್ದನ್ನು ಶ್ರೀಗಳು ಉಲ್ಲೇಖಿಸಿದರು. ತುಳುನಾಡು ಕ್ರೀಡೆ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಪ್ರತ್ಯೇಕ ಕಾನೂನು ಜಾರಿಗೆ ಚಿಂತನೆ : ಫೆಬ್ರವರಿ 6ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಕಂಬಳಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗುವುದೆಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ ತಿಳಿಸಿದರು.