ಶೀರೂರು ಮಠದ ಉತ್ತರಾಧಿಕಾರಿಯಾಗಿ ಬರಲು ವಟುಗಳ ನಿರಾಸಕ್ತಿ ?
ಉಡುಪಿ, ಜುಲೈ.22: ಶೀರೂರು ಮಠದ ಆಡಳಿತಕ್ಕೆ ಐವರು ಸದಸ್ಯರ ಸಮಿತಿ ರಚಿಸಲಾಗುತ್ತದೆ. ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಸೋದೆ ವಿಶ್ವವಲ್ಲಭ ಶ್ರೀಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಇದರಲ್ಲಿ ಶೀರೂರು ಮಠದ ವಿದ್ವಾಂಸರನ್ನೂ ಸೇರಿಸಲಾಗುತ್ತದೆ.
ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರಕ್ಕೆ ತೊಡಕಾಗಿದೆ. ಆಷಾಢದ ಬಳಿಕವೇ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭಿಸಲಾಗುವುದು ಅಂತ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಸ್ಪಷ್ಟಪಡಿಸಿದೆ. ಈಗಾಗಲೇ ವಟುವಿನ ಜಾತಕ ಪರಿಶೀಲನೆ ನಡೆಯುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉತ್ತರಾಧಿಕಾರಿ ನೇಮಕ ನಡೆಯಲಿದೆ.
ಸೋಮವಾರ ಈ ಸಮಿತಿ ರಚನೆ ಸಾಧ್ಯತೆಯಿದ್ದು , ಸದ್ಯ ಶೀರೂರುಮಠದ ನಿರ್ವಹಣೆಯ ಜವಾಬ್ದಾರಿಯನ್ನು ಸೋದೆ ವಿಶ್ವವಲ್ಲಭ ಶ್ರೀಗಳು ವಹಿಸಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ಉತ್ತರಾಧಿಕಾರಿಯಾಗಿ ಬರಲು ಹಲವರು ನಿರಾಸಕ್ತಿ ತೋರುತ್ತಿದ್ದಾರಂತೆ.

ಇದಕ್ಕೆ ಕಾರಣ ಶೀರೂರು ಮಠದ ಆರ್ಥಿಕ ಸ್ಥಿತಿ. ಆರ್ಥಿಕ ನಷ್ಟದಲ್ಲಿರುವ ಮಠವನ್ನು ಮುನ್ನಡೆಸುವುದು ಅಷ್ಟು ಸುಲಭವಂತೂ ಅಲ್ಲ. ಒಟ್ಟಾರೆ ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ನಡೆಯಲಿದ್ದು, ಯಾರಾಗಲಿದ್ದಾರೆ ಉತ್ತರಾಧಿಕಾರಿ ಎಂಬ ಕುತೂಹಲ ಹೆಚ್ಚುತ್ತಿದೆ.












Click it and Unblock the Notifications