ಇಸ್ರೇಲ್ನಲ್ಲಿರುವವರ ವಿವರ ಕೇಳಿದ ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತ
ಉಡುಪಿ, ಅಕ್ಟೋಬರ್ 10; ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ತಲ್ಲಣ ಮೂಡಿಸಿದೆ. ಇದುವರೆಗೂ ಎರಡು ಕಡೆಯ ಸುಮಾರು 600ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ತಮ್ಮ ದೇಶದ ಜನರ ಸುರಕ್ಷತೆ ಬಗ್ಗೆ ವಿವಿಧ ರಾಷ್ಟ್ರಗಳು ಕಾಳಜಿ ವ್ಯಕ್ತಪಡಿಸುತ್ತಿವೆ.
ಇಸ್ರೇಲ್ನಲ್ಲಿ ಕರ್ನಾಟಕದ ಮೂಲಕ ಸುಮಾರು 15 ಸಾವಿರ ಜನರ ನೆಲೆಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯವರೇ ಅಧಿಕ.

ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಇಸ್ರೇಲ್ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ನಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಜಿಲ್ಲೆಯ ಜನರ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಇಸ್ರೇಲ್ ದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಪಟ್ಟವರು ಇದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂಗೆ ನೀಡುವಂತೆ ಕೋರಲಾಗಿದೆ.
ಮಾಹಿತಿ ನೀಡಲು ದೂರವಾಣಿ ಸಂಖ್ಯೆಗಳು 1077/ 08382-229857. ಮೊಬೈಲ್ ನಂಬರ್ 9483511015. ರಾಜ್ಯ ಸರ್ಕಾರದ ತುರ್ತು ಸಂಖ್ಯೆ 080-22340676, 080-22253707ಕ್ಕೆ ಸಹ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಉಡುಪಿ ಜಿಲ್ಲಾಡಳಿತ ಮನವಿ; ಉಡುಪಿ ಜಿಲ್ಲಾಡಳಿತ ಸಹ ಇಸ್ರೇಲ್ ದೇಶದಲ್ಲಿ ನೆಲೆಸಿರುವ ಜಿಲ್ಲೆಯ ಜನರ ಬಗ್ಗೆ ಮಾಹಿತಿ ಪಡೆಯಲು ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ.
ಜಿಲ್ಲಾಧಿಕಾರಿಗಳ ಕಛೇರಿ ಉಡುಪಿ, ರಜತಾದ್ರಿ, ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ 1077/ 0820-2574802ಗೆ ಕರೆ ಮಾಡಿ ಕೂಡಲೇ ಮಾಹಿತಿ ನೀಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ನಲ್ಲಿರುವ ಸುಮಾರು 15 ಸಾವಿರ ಕನ್ನಡಿಗರಲ್ಲಿ 8 ಸಾವಿರಕ್ಕೂ ಅಧಿಕ ಜನರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಇದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಎಲ್ಲಾ ಕನ್ನಡಿಗರು ಸಹ ಸುರಕ್ಷಿತವಾಗಿದ್ದಾರೆ. ಕೆಲವು ಜನರು ಕನ್ನಡದ ವಿವಿಧ ಸುದ್ದಿ ವಾಹಿನಿಗಳ ಜೊತೆ ಸೋಮವಾರ ಮಾತನಾಡಿದ್ದಾರೆ.
ದಕ್ಷಿಣ ಕನ್ನಡದ ಅಪರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, "ದಕ್ಷಿಣ ಕನ್ನಡದ ಎಷ್ಟು ಮಂದಿ ಇಸ್ರೇಲ್ನಲ್ಲಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತದ ಬಳಿ ಇಲ್ಲ. ಅಲ್ಲಿ ಸಿಲಿಕಿರಬಹುದಾದ ಯಾರ ಕುಟುಂಬದವರು ಜಿಲ್ಲಾಡಳಿತ ಸಂಪರ್ಕಿಸಿಲ್ಲ. ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಜನರು ಜಿಲ್ಲಾಡಳಿತವನ್ನು ಸಂಪರ್ಕಿಸಿದರೆ ಸಾಧ್ಯವಿರುವ ನೆರವು ನೀಡುತ್ತೇವೆ" ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಟ್ವೀಟ್ ವೊಂದನ್ನು ಮಾಡಿದ್ದು, ಯುದ್ಧಪೀಡಿತ ಇಸ್ರೇಲ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ನಾವು ಸಹಾಯವಾಣಿಯನ್ನು ತೆರೆದಿದ್ದೇವೆ. ಇಸ್ರೇಲ್ನಲ್ಲಿರುವ ಕುಟುಂಬ ಸದಸ್ಯರು ನಿಮ್ಮ ಸಂಪರ್ಕಕ್ಕೆ ಸಿಗದಿದ್ದಲ್ಲಿ ಅಥವಾ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ನಿಮ್ಮವರಿಗೆ ತಕ್ಷಣದ ನೆರವಿನ ಅಗತ್ಯವಿದ್ದಲ್ಲಿ ಕೂಡಲೇ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆಮಾಡಿ, ಅಗತ್ಯ ನೆರವು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೆರವು ಪಡೆಯಲು ದೂರವಾಣಿ ಸಂಖ್ಯೆಗಳು 080-22340676, 080-22253707.
ಏರ್ ಇಂಡಿಯಾ ವಿಮಾನ ಸ್ಥಗಿತ; ಇಸ್ರೇಲ್ನಲ್ಲಿ ಸಿಲುಕಿರುವ ಕನ್ನಡಿಗರು ಸದ್ಯ ವಾಪಸ್ ಬರುವಂತಿಲ್ಲ. ಭಾರತದ ಏರ್ ಇಂಡಿಯಾ ಇಸ್ರೇಲ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಅಕ್ಟೋಬರ್ 14ರ ತನಕ ಸ್ಥಗಿತಗೊಳಿಸಿದೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ 2023ರ ಅಕ್ಟೋಬರ್ 14ರ ತನಕ ಟೆಲ್ ಅವೀವ್ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಕಾಳಗದಲ್ಲಿ ಭಾರತ ಇಸ್ರೇಲ್ ಬೆಂಬಲಿಸಿದೆ. ಒಂದು ವೇಳೆ ಕಾಳಗ ಭೀಕರ ಸ್ವರೂಪ ಪಡೆದರೆ ಕೇಂದ್ರ ಸರ್ಕಾರ ಭಾರತೀಯ ನಿವಾಸಿಗಳನ್ನು ಏರ್ಲಿಫ್ಟ್ ಮಾಡುವ ನಿರೀಕ್ಷೆ ಇದೆ.












Click it and Unblock the Notifications