ಉಡುಪಿ: ಆಸ್ಪತ್ರೆ ಸೇರಿದ ಗರ್ಭಿಣಿಯನ್ನು ಕೆಲಸದಿಂದ ಕಿತ್ತೊಗೆದ ಕಾಲೇಜು
ಕೆಲಸದಲ್ಲಿರುವಾಗಲೇ ಆಸ್ಪತ್ರೆ ಸೇರಿದ್ದ ಉಪನ್ಯಾಸಕಿಯನ್ನ ವಜಾ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಾ ಹೇರಿಕುದ್ರು ವಜಾಗೊಂಡವರು.
ಉಡುಪಿ, ಎಪ್ರಿಲ್ 3: ಕೆಲಸದಲ್ಲಿರುವಾಗಲೇ ಆಸ್ಪತ್ರೆ ಸೇರಿದ್ದ ಉಪನ್ಯಾಸಕಿಯನ್ನ ವಜಾ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸೌಮ್ಯಾ ಹೇರಿಕುದ್ರು ವಜಾಗೊಂಡವರು.
ಕುಂದಾಪುರ ತಾಲೂಕಿನ ಹೇರಿಕುದ್ರು ನಿವಾಸಿಯಾಗಿರುವ ಸೌಮ್ಯಾ ಕಳೆದೊಂದು ವರ್ಷದಿಂದ ಕುಂದಾಪುರದ ಭಂಡಾರಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.[ಉಡುಪಿ ಡಿಸಿ ಕೊಲೆ ಯತ್ನ ಖಂಡಿಸಿ ನಾಳೆ ಸರಕಾರಿ ನೌಕರರ ಬಂದ್]
ಜನವರಿ 31ರ 2017ರಂದು ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಇವರು ಕುಸಿದು ಬಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ಸೌಮ್ಯಾರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದಾಗ ಗರ್ಭಕೋಶ ಹರಿದಿರುವುದು ತಿಳಿದು ಬಂತು. ತಕ್ಷಣವೇ ಹೆರಿಗೆ ಮಾಡಬೇಕು. ಇಲ್ಲದಿದ್ದರೆ ತಾಯಿ ಮಗು ಇಬ್ಬರ ಜೀವಕ್ಕೂ ಅಪಾಯವಿದೆ ಎಂಬ ವೈದ್ಯರ ಸಲಹೆ ಮೇರೆಗೆ 6 ಫೆಬ್ರವರಿ 2016ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು.
ಮಗುವಿನ ತೂಕ 1.3 ಕೆಜಿ ಇದ್ದ ಕಾರಣ ಮಗುವನ್ನೂ ಐಸಿಯುನಲ್ಲಿಡಲಾಗಿತ್ತು. ಈ ವಿಷಯ ತಿಳಿದಿದ್ದ ಕಾಲೇಜು ಆಡಳಿತ ಮಂಡಳಿ ಇದ್ದಕ್ಕಿದ್ದಂತೆ ಸೇವೆಯಿಂದ ವಜಾ ಮಾಡಲಾಗಿದೆ ಎಂಬ ನೋಟಿಸ್ ನೀಡಿದೆ. ಈ ಬಗ್ಗೆ ನೊಂದ ಸೌಮ್ಯಾ ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ.[ಉಡುಪಿ ಡಿಸಿ, ಎಸಿ ಕೊಲೆ ಯತ್ನ, ಬಂಧಿತರ ಸಂಖ್ಯೆ 13ಕ್ಕೆ ಏರಿಕೆ]
2014ರ ಕೋರ್ಟ್ ಆದೇಶ ಮತ್ತು 2016ರ ಕಾಯ್ದೆಯ ಪ್ರಕಾರ ಹೆರಿಗೆ ಸೌಲಭ್ಯ ಕೊಡುವ ಬಗ್ಗೆ ಆಡಳಿತ ಮಂಡಳಿ ಪ್ರಸ್ತಾಪ ಮಾಡದೇ ಸೇವೆಯಿಂದಲೇ ವಜಾ ಮಾಡಿರುವುದು ಕಾನೂನು ಬಾಹಿರ ಎಂದು ಸೌಮ್ಯಾ ಆರೋಪಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಈಕೆಗೆ ನೀಡಿದ ಕಿರುಕುಳ ಹಾಗೂ ದೌರ್ಜನ್ಯವನ್ನು ಖಂಡಿಸಿ ಮತ್ತು ಇನ್ನು ಮುಂದೆ ಇನ್ಯಾವ ಮಹಿಳೆಗೂ ಈ ರೀತಿಯ ದೌರ್ಜನ್ಯ ನಡೆಯಬಾರದು ಎಂದು ಆಗ್ರಹಿಸಿ, ಈಗಾಗಲೇ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿ, ಮಕ್ಕಳ ಕಲ್ಯಾಣ ಇಲಾಖೆಗೆ ಮತ್ತು ಉಡುಪಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಕಾಲೇಜು ಆಡಳಿತ ಮಂಡಳಿಯ ದುರ್ವರ್ತನೆಯ ವಿರುದ್ಧ ತನಿಖೆ ನಡೆಸಿ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮ ಜರುಗಿಸುವಂತೆಯೂ ಅವರು ಆಗ್ರಹಿಸಿದ್ದಾರೆ.