ಉಡುಪಿ; ಕಾಂಗ್ರೆಸ್ನಿಂದ ಜನಧ್ವನಿ ಪಾದಯಾತ್ರೆ, ಸಿದ್ದರಾಮಯ್ಯ ಚಾಲನೆ
ಉಡುಪಿ, ಫೆಬ್ರವರಿ 19; ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ಕಾಯ್ದೆಗಳ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ 'ಜನಧ್ವನಿ' ಎಂಬ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಫೆಬ್ರವರಿ 22 ರಿಂದ 27ರ ತನಕ ಜಿಲ್ಲೆಯ ಉದ್ದಕ್ಕೂ ಪಾದಯಾತ್ರೆ ನಡೆಯಲಿದೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಈ ಕುರಿತು ಮಾಹಿತಿ ನೀಡಿದರು. "ಫೆಬ್ರವರಿ 22ರಂದು ನಡೆಯುವ ಜನಧ್ವನಿ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ" ಎಂದರು.
"ವಿದ್ಯುತ್ ಕಾಯ್ದೆ ತಿದ್ದುಪಡಿ , ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮತ್ತು ದಿನೇದಿನೇ ಏರುತ್ತಿರುವ ಪೆಟ್ರೋಲ್ ಮತ್ತು ಅಡುಗೆ ಅನಿಲ ದರ ಏರಿಕೆ ವಿರುದ್ಧ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ" ಎಂದು ಹೇಳಿದರು.

ಫೆ. 22ರಂದು ಪಾದಯಾತ್ರೆಯು ಉಡುಪಿ ಜಿಲ್ಲೆಯ ಗಡಿ ಭಾಗ ಹೆಜಮಾಡಿ ಟೋಲ್ ಗೇಟ್ನಿಂದ ಪ್ರಾರಂಭವಾಗಲಿದೆ. ಕಾಪು, ಪಾಂಗಾಳ, ಉಡುಪಿ, ಬ್ರಹ್ಮಾವರ, ಕುಂದಾಪುರ ಮಾರ್ಗವಾಗಿ ಬೈಂದೂರಿನಲ್ಲಿ ಸಮಾರೋಪಗೊಳ್ಳಲಿದೆ.
ಒಟ್ಟು 108 ಕಿಲೋಮೀಟರ್ ನಡೆಯುವ ಪಾದಯಾತ್ರೆಯಲ್ಲಿ ಕಾಂಗ್ರೆಸ್ನ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 27ರಂದು ಜನಧ್ವನಿ ಪಾದಯಾತ್ರೆಯು ಬೈಂದೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications