ಭಾಸ್ಕರ್ ಶೆಟ್ಟಿ ಹತ್ಯೆ: ಪೊಲೀಸ್ ವಶದಲ್ಲಿ ಜ್ಯೋತಿಷಿ ನಿರಂಜನ್ ಭಟ್
ಉಡುಪಿ, ಆಗಸ್ಟ್ 9: ಕರಾವಳಿ ಭಾಗದಲ್ಲಿ ತಲ್ಲಣ ಮೂಡಿಸಿದ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಸೂತ್ರದಾರ ಜ್ಯೋತಿಷಿ ನಿರಂಜನ್ ಭಟ್ (26) ನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಭಾನುವಾರ (ಆ 7) ರಾತ್ರಿಯೇ ನಿರಂಜನ್ ಭಟ್ ಆಲಿಯಾಸ್ ನಿರಂಜನ್ ಅಸ್ರಣ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾನೆಂದು ವರದಿಯಾಗಿದೆ. ನಿರಂಜನ್ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನಾ ಅಥವಾ ಅವನನ್ನು ಬಂಧಿಸಲಾಗಿದೆಯೇ ಎನ್ನುವುದರ ಬಗ್ಗೆ ಗೊಂದಲ ಮುಂದುವರಿದಿದೆ. (ಪತಿಯನ್ನು ಯಜ್ಞಕುಂಡದಲ್ಲಿ ಸುಟ್ಟಳೇ ಪತ್ನಿ)
ಸೋಮವಾರ ಒಮ್ಮೆ ನಿರಂಜನ್ ಭಟ್ ನನ್ನು ಧಾರವಾಡ, ಇನ್ನೊಮ್ಮೆ ಬೀದರ್ ಮತ್ತೊಮ್ಮೆ ಆತನ ಸ್ವಂತ ಊರಾದ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಬಂಧಿಸಲಾಗಿದೆ ಎನ್ನುವ ಸುದ್ದಿ ಹರಡಿತ್ತು.

ಇದರ ಜೊತೆಗೆ ಬೆಂಗಳೂರು ವಕೀಲರೊಬ್ಬರೊಬ್ಬರ ಮೂಲಕ ನಿರಂಜನ್ ಭಟ್ ಮಣಿಪಾಲ ಪೊಲೀಸರಿಗೆ ಶರಣಾಗಿದ್ದಾನೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದರೆ ಪೊಲೀಸರಿಂದ ಹೆಚ್ಚಿನ ಮಾಹಿತಿ ಈ ಬಗ್ಗೆ ಲಭ್ಯವಾಗುತ್ತಿಲ್ಲ.
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿ, ಪುತ್ರ ಮತ್ತು ನಿರಂಜನ್ ಭಟ್ ಪೊಲೀಸರ ವಶದಲ್ಲಿದ್ದಾರೆ. ಈ ನಡುವೆ ನಿರಂಜನ್ ಭಟ್ ಅವರ ತಂದೆ ಮತ್ತು ಕಾರ್ ಚಾಲಕನನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಸೋಮವಾರ ಹೆಚ್ಚಿನ ತನಿಖೆಗಾಗಿ ಜ್ಯೋತಿಷಿ ನಿರಂಜನ್ ಭಟ್ ನನ್ನು ನಂದಳಿಕೆಯ ಆತನ ಮನೆಗೆ ಪೊಲೀಸರು ಕರೆ ತಂದಿದ್ದರು. ಆದರೆ ಅಲ್ಲಿ ಭಾರೀ ಜನಸ್ತೋಮ ಸೇರಿದ್ದರಿಂದ ಪೊಲೀಸರು ಆತನನ್ನು ಬೇರಡೆಗೆ ಕರೆದುಕೊಂಡು ಹೋಗಿದ್ದಾರೆ.
ವಿಧಿ ವಿಜ್ಞಾನ ತಜ್ಞರು ಘಟನಾ ಸ್ಥಳಕ್ಕೆ ತೆರಳಿ ಹಲವು ಆಯಾಮಗಳಲ್ಲಿ ತಪಾಸಣೆ ನಡೆಸಿದ್ದಾರೆ. ಹೋಮ ಕುಂಡದ ಬಳಿ, ಭಾಸ್ಕರ್ ಶೆಟ್ಟಿಯವರನ್ನು ಎಳೆದುಕೊಂಡು ಹೋಗುವಾಗ ಬಿದ್ದ ರಕ್ತದ ಕಲೆಗಳನ್ನು ಆರೋಪಿಗಳು ತೊಳೆದಿರುವುದು ಕಂಡು ಬಂದಿದೆ.
ಭಾಸ್ಕರ್ ಶೆಟ್ಟಿ ತನ್ನ ಪತ್ನಿಯ ಹೆಸರಿನಲ್ಲಿದ್ದ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹಿಂದಕ್ಕೆ ಪಡೆದು ಎಲ್ಲಾ ಆಸ್ತಿಯನ್ನು ಬದಲಾಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇ ಅವರ ಕೊಲೆಗೆ ಪ್ರಮುಖ ಕಾರಣ. ಘಟನೆ ನಡೆದು ವಾರದ ಮೇಲಾದರೂ ಭಾಸ್ಕರ್ ಶೆಟ್ಟಿಯವರ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications