ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕರಾವಳಿ ಮೂಲದ ಇಬ್ಬರು ಎಸ್ಐಟಿ ವಶಕ್ಕೆ
ಉಡುಪಿ, ಆಗಸ್ಟ್.09: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವವ ಎಸ್ ಐಟಿ ಅಧಿಕಾರಿಗಳು ಕರಾವಳಿ ಮೂಲದ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಗೌರಿ ಲಂಕೇಶ್ ಹತ್ಯೆ : ಉಪ್ಪಿನಂಗಡಿ ಮೂಲದ ವ್ಯಕ್ತ ವಿಚಾರಣೆ
ಇಬ್ಬರೂ ಹಿಂದೂ ಜಾಗರಣ ವೇದಿಕೆಯ ಪಡುಬಿದ್ರಿ ಹಾಗೂ ಕಾಪು ಸಂಘಟನೆಯ ಪ್ರಮುಖರಾಗಿದ್ದು, ಸಂದೇಶ್ ಶೆಟ್ಟಿ ಪಾದೆಬೆಟ್ಟು (28) ಹಾಗೂ ಯುವರಾಜ್ ಕಂಚಿನಡ್ಕ(30) ಎಂಬುವವರನ್ನು ಎಸ್ಐಟಿ ವಶಕ್ಕೆ ಪಡೆದಿದೆ.
ಬೆಂಗಳೂರು ಎಸ್ ಐಟಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಬ್ಬರನ್ನು ಸ್ಥಳೀಯ ಪೊಲೀಸರ ಸಹಾಯ ಪಡೆದು ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಬ್ಬರು ಯುವಕರು ಗೌರಿ ಹತ್ಯೆ ಪ್ರಕರಣದ ಆರೋಪಿಗಳೊಂದಿಗೆ ಲಿಂಕ್ ಹೊಂದಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
ಬೆಳಗ್ಗೆಯಷ್ಟೇ ಎಸ್ ಐಟಿ ಅಧಿಕಾರಿಗಳು ಬೆಳಗಾವಿ ನಗರದ ಓರ್ವ ರೆಸಾರ್ಟ್ ಮಾಲೀಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಅಧಿಕಾರಿಗಳು ಮಂಗಳವಾರ ರಾತ್ರಿಯೇ ಬೆಳಗಾವಿಗೆ ಬಂದಿದ್ದು, ಇಲ್ಲಿನ ಮಹಾದ್ವಾರ ರಸ್ತೆಯ ನಿವಾಸಿಯಾದ ರೆಸಾರ್ಟ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಅಜ್ಞಾತ ಸ್ಥಳದಲ್ಲಿ ಬಂಧಿತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಜುಲೈ ತಿಂಗಳಲ್ಲೂ ಎಸ್ಐಟಿ ಅಧಿಕಾರಿಗಳ ತಂಡ ಬೆಳಗಾವಿ ಜಿಲ್ಲೆಗೆ ಆಕಸ್ಮಿಕ ಭೇಟಿ ನೀಡಿ ತನಿಖೆ ಕೈಗೊಂಡಿತ್ತು.