ಉಡುಪಿಯಲ್ಲಿ ಪುಸ್ತಕೋತ್ಸವ; ಓದುಗರನ್ನು ಸೃಷ್ಟಿಸಲು ಹೊಸ ಪ್ರಯೋಗ
ಉಡುಪಿ, ಮಾರ್ಚ್ 05: ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಪುಸ್ತಕೋತ್ಸವ ಎಂಬ ವಿನೂತನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನಗಳ ಪುಸ್ತಕೋತ್ಸವಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.
ಪುಸ್ತಕೋತ್ಸವದಲ್ಲಿ ಯುವಜನತೆಯ ದಂಡೇ ನೆರೆದಿತ್ತು. ತಮಗಿಷ್ಟವಾದ ಪುಸ್ತಕಗಳನ್ನು ಹುಡುಕುವುದರಲ್ಲಿ ವಿದ್ಯಾರ್ಥಿಗಳು ಮಗ್ನರಾಗಿದ್ದರು. ಓದುವವರ ಸಂಖ್ಯೆ ಕಮ್ಮಿಯಾಗಿದೆ, ಅದರಲ್ಲೂ ಪುಸ್ತಕ ಕೊಂಡು ಓದುವವರಿಲ್ಲ ಎನ್ನುವ ಅಪವಾದ ಇದೆ.
ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವೇ ಇಲ್ಲ ಎಂಬ ದೂರು ಎಲ್ಲೆಡೆ ಕೇಳಿ ಬರುತ್ತಿದೆ. ಅದನ್ನು ಸುಳ್ಳಾಗಿಸುವ ಮತ್ತು ಪುಸ್ತಕ ಸಂಸ್ಕೃತಿಯನ್ನು ಸೃಷ್ಟಿಸುವ ಸಲುವಾಗಿ ಉಡುಪಿಯ ಎಂ.ಜಿ.ಎಂ ಕಾಲೇಜು ನಡೆಸಿರುವ ಹೊಸ ಪ್ರಯೋಗ ಇದಾಗಿದೆ.

ಪ್ರದರ್ಶನ, ಮಾರಾಟ; ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 8ರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಂಜಿಎಂ ಪುಸ್ತಕೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನವ ಕರ್ನಾಟಕ, ಮಣಿಪಾಲ್ ಯೂನಿವರ್ಸಲ್ ಪ್ರೆಸ್, ಭಾರತ್ ಬುಕ್ ಮಾರ್ಕ್, ಬಿಬ್ಲಿಯೋಸ್, ಸ್ಕೂಲ್ ಬುಕ್ ಕಂಪೆನಿ ಸೇರಿದಂತೆ 17ಕ್ಕೂ ಅಧಿಕ ಮಳಿಗೆಗಳು ಇವೆ. ಸಾವಿರಾರು ಬಗೆಯ ಪುಸ್ತಕಗಳು ಇಲ್ಲಿ ಲಭ್ಯ ಇದ್ದು, ವಿದ್ಯಾರ್ಥಿಗಳಲ್ಲಿ ಪುಸ್ತಕದ ಬಗ್ಗೆ ಆಸಕ್ತಿ ಮೂಡಿಸುತ್ತಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ದೇವದಾಸ್ ನಾಯಕ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಲತಿ ದೇವಿ, ಉಡುಪಿಯ ಗ್ರಂಥಪಾಲಕ ಕಿಶೋರ್ ಮುಂತಾದವರಿದ್ದರು.












Click it and Unblock the Notifications