Udupi Bigg News: ಉಡುಪಿಯ ತ್ರಾಸಿ ಬೀಚ್ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ
ಉಡುಪಿ, ಡಿಸೆಂಬರ್, 22: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮುರುಡೇಶ್ವರ ಬೀಚ್ನ ಸಮುದ್ರದಲ್ಲಿ ಮುಳುಗಿ ಕೋಲಾರ ಜಿಲ್ಲೆಯ ವಸತಿ ನಿಲಯದ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಉಡುಪಿ ಜಿಲ್ಲೆಯ ತ್ರಾಸಿ ಬೀಚ್ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಒಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆ ಆಗಿದ್ದಾರೆ. ಬೋಟ್ ಪಲ್ಟಿಯಾದ ಬಳಿಕ ಲೈಫ್ ಜಾಕೆಟ್ ಕೊಟ್ಟಿದ್ದ ಬೆಂಗಳೂರು ಮೂಲದ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಣ್ಮರೆ ಆಗಿರುವ ರೈಡರ್ ರವಿದಾಸ್ಗಾಗಿ ಗಂಗೊಳ್ಳಿ ಪೊಲೀಸ್, ಕರಾವಳಿ ಪೊಲೀಸ್ ಪಡೆ, ಸ್ಥಳೀಯರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಕಳೆದೆ ಕೆಲವ ದಿನಗಳ ಹಿಂದೆಯಷ್ಟೇ ಶಾಲಾ ಮಕ್ಕಳು ಪ್ರವಾಸಕ್ಕೆಂದು ಮುರುಡೇಶ್ವರ ಬೀಚ್ಗೆ ಹೋಗಿದ್ದರು. ಈ ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋದ 7 ಮಂದಿ ಪೈಕಿ ನಾಲ್ವರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿದ್ದರು. ಸದ್ಯ ಈ ಪ್ರಕರಣದಿಂದಾಗಿ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಮುಂದಿನ ಆದೇಶದವರೆಗೂ ಕಡಲತೀರಕ್ಕೆ ನಿರ್ಬಂಧ ವಿಧಿಸಿ, ಈ ಬಗ್ಗೆ ಎಸ್ಪಿ ಎಂ.ನಾರಾಯಣ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಸುಮಾರು 54 ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಆಟವಾಡಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರು ಪಾಲಾಗಿದ್ದರು.
ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ಯಾವುದೇ ಲೈಫ್ಗಾರ್ಡ್ ಮತ್ತು ಪರಿಕರಗಳಿಲ್ಲದೆ, ಮೂವರು ವಿದ್ಯಾರ್ಥಿನಿಯರು ಮತ್ತು ಓರ್ವ ಶಿಕ್ಷಕನ ರಕ್ಷಣೆ ಮಾಡಿದ್ದಾರೆ.
ಮೃತರಾದ ಶ್ರಾವಂತಿ, ದೀಕ್ಷಾ, ಲಾವಣ್ಯ ಮತ್ತು ವಂದನ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ. ಜಿಲ್ಲಾಡಳಿತದಿಂದ ಅಂತಿಮ ನಮನದ ನಂತರ ಮೃತ ದೇಹಗಳನ್ನು ತಮ್ಮ ಸ್ವಗ್ರಾಮಗಳಿಗೆ ತರಲಾಗಿತ್ತು.












Click it and Unblock the Notifications