ಉಡುಪಿಯಿಂದ ಕುಂದಾಪುರದತ್ತ ಹೊರಳಿದ ಹಿಜಾಬ್ ವಿವಾದ; ಕಾಲೇಜಿನಲ್ಲಿ ಹಿಜಾಬ್ vs ಕೇಸರಿ ಶಲ್ಯ
ಉಡುಪಿ, ಫೆಬ್ರವರಿ 2: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಉಡುಪಿಯ ಹಿಜಾಬ್ ಪ್ರಕರಣ ಮತ್ತೊಂದು ಹಂತವನ್ನು ತಲುಪಿದೆ. ಕಳೆದ ಹಲವು ದಿನಗಳಿಂದ ಉಡುಪಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಾತ್ರ ಸುತ್ತುತ್ತಿದ್ದ ವಿವಾದದ ಚಕ್ರ ಈಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನತ್ತ ಹೊರಳಿದೆ.
ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸೆಡ್ಡು ಹೊಡೆಯಲು ಕಾಲೇಜಿನ ಹಿಂದೂ ಹುಡುಗರು ಕೇಸರಿ ಶಲ್ಯವನ್ನು ಮೈಗೆತ್ತಿಕೊಂಡಿದ್ದಾರೆ. ಕಾಲೇಜಿನಲ್ಲಿ 27 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರುತ್ತಿದ್ದು, ಇದನ್ನು ವಿರೋಧಿಸಿ ಕಾಲೇಜಿನ 40ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯವನ್ನು ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ.
ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಲ್ಯ ವಿವಾದ ತಾರಕಕ್ಕೇರುತ್ತಿರುವ ಹಿನ್ನಲೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶಾಸಕ ಶ್ರೀನಿವಾಸ ಶೆಟ್ಟಿ, ಹಿಂದೂ ಸಂಘಟನೆಯ ಮುಖಂಡರು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಜೊತೆ ಸಭೆ ಮಾಡಿದ್ದಾರೆ. ಮುಸ್ಲಿಂ ಪೋಷಕರ ಮನವೊಲಿಸಲು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪೋಷಕರ ಜೊತೆ ಸಭೆ ಮಾಡಿ ಕಾಲೇಜಿನಲ್ಲಿ ಸಮವಸ್ತ್ರ ನೀತಿಯನ್ನು ಪಾಲಿಸಲು ಒತ್ತಾಯಿಸಿದ್ದಾರೆ.

ಸಮವಸ್ತ್ರ ಧರಿಸಿ ಬರಲು ಮಾತ್ರ ಅವಕಾಶ
ಸಭೆಯ ವೇಳೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಸಚಿವ ನಾಗೇಶ್ಗೆ ಕರೆ ಮಾಡಿ ಕುಂದಾಪುರ ಕಾಲೇಜಿನ ಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ಸಚಿವ ನಾಗೇಶ್, ಕಾಂಪೌಂಡ್ನ ಒಳಗೆ ಸಮವಸ್ತ್ರ ಧರಿಸಿ ಬರಲು ಮಾತ್ರ ಅವಕಾಶ ಅಂತಾ ಹೇಳಿದ್ದಾರೆ. ಸಚಿವರ ನಿಲುವನ್ನು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಬಳಿ ಹೇಳಿದ್ದಾರೆ. ಆದರೆ ಈ ನಿಲುವಿಗೆ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು ಒಪ್ಪಿಲ್ಲ. ಹೀಗಾಗಿ ಶಾಸಕರ ಸಂಧಾನ ಸಭೆ ವಿಫಲವಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರು, ಹಿಜಾಬ್ ಎನ್ನುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ಯಾರು ಏನೇ ವಿರೋಧ ಮಾಡಿದರೂ, ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸುತ್ತಾರೆ ಎಂದು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.

ಹಿಂದೂಗಳಿಗೆ ಕೇಸರಿ ಶಲ್ಯವೂ ಧಾರ್ಮಿಕ ಸ್ವಾತಂತ್ರ್ಯ
ಇದಕ್ಕೆ ಪ್ರತಿಯಾಗಿ ಹಿಂದೂ ಜಾಗರಣ ವೇದಿಕೆಯೂ ಕಾಲೇಜಿನಲ್ಲಿ ಹಿಜಾಬ್ ನಿಷೇಧವಾಗುವವರೆಗೂ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸುತ್ತಾರೆ. ಕಾಲೇಜಿನಲ್ಲಿ ಸಮವಸ್ತ್ರ ನೀತಿ ಎಲ್ಲರಿಗೂ ಒಂದೇ ರೀತಿಯಾಗಿ ಇರಬೇಕು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಎಷ್ಟು ಪ್ರಾಮುಖ್ಯವೋ, ಹಿಜಾಬ್ ಅವರ ಧಾರ್ಮಿಕ ಸ್ವಾತಂತ್ರ್ಯವಾದರೆ, ಹಿಂದೂಗಳಿಗೆ ಕೇಸರಿ ಶಲ್ಯವೂ ಧಾರ್ಮಿಕ ಸ್ವಾತಂತ್ರ್ಯವಾಗಿದೆ. ಸರ್ಕಾರ ಈ ಬಗ್ಗೆ ಮಧ್ಯಪ್ರವೇಶ ಮಾಡದಿದ್ದಲ್ಲಿ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದ್ದಾರೆ.

ಉಡುಪಿಯ ಹಿಜಾಬ್ ವಿವಾದ ಮುಗಿಯುವ ಲಕ್ಷಣವಿಲ್ಲ
ಇನ್ನು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಬುಧವಾರ ಕೂಡಾ ಹಿಜಾಬ್ ಧರಿಸಿ ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಾರೆ. ಆದರೆ ಕಾಲೇಜು ಮಾತ್ರ ವಿದ್ಯಾರ್ಥಿನಿಯರಿಗೆ ತರಗತಿಗೆ ಅನುಮತಿ ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಕುಳಿತು ವಿದ್ಯಾರ್ಥಿನಿಯರು ಮೌನ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್, ವಿದ್ಯಾರ್ಥಿನಿಯರು, ಪೋಷಕರು, ಕಾಲೇಜು ಆಡಳಿತ ಸಮಿತಿ ಸಭೆಯಲ್ಲಿ ಮಾತುಕತೆ ನಡೆದಿದೆ. ರಾಜ್ಯ ಸಮಿತಿ ನಿರ್ಧಾರ ತಿಳಿಸುವವರಗೆ ಹಿಜಾಬ್ ಅವಕಾಶ ಇಲ್ಲ, ಹಿಜಾಬ್ ಧರಿಸಿ ಬರಬಾರದೆಂದು ನಿರ್ಧಾರ ತಿಳಿಸಲಾಗಿದೆ. ಮನೆಯಲ್ಲಿ ಪುರುಷರೊಂದಿಗೆ ಮಾತನಾಡಿ ತಿಳಿಸುವುದಾಗಿ ಹೇಳಿದ್ದರು.

ಕಾಲೇಜು ವಾತಾವರಣ ಹಾಳು ಮಾಡುತ್ತಿದ್ದಾರೆ
ಓರ್ವ ವಿದ್ಯಾರ್ಥಿನಿ ಅಲಿಯಾ ಬಿಟ್ಟು ಉಳಿದ ನಾಲ್ವರು ಹಿಜಾಬ್ ಇಲ್ಲದೆ ಬರುವ ಅರ್ಧ ಮನಸ್ಸು ಮಾಡಿದ್ದರು. ಈಗ ಮತ್ತೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದು ವಾತಾವರಣ ಹಾಳು ಮಾಡುತ್ತಿದ್ದಾರೆ. ಹೈಕೋರ್ಟ್ಗೂ ರಿಟ್ ಸಲ್ಲಿಸಿದ್ದಾರೆ. ನ್ಯಾಯಾಲಯ ಹಾಗೂ ಸರ್ಕಾರ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇವೆ. ಈ ವಿದ್ಯಾರ್ಥಿನಿಯರಿಗೆ ಕಲಿಯುವ ಉದ್ದೇಶ ಇಲ್ಲ, ಸೌಹಾರ್ದತೆ ಹಾಳು ಮಾಡುವ ಉದ್ದೇಶ ಇದೆ. ಕಡಿಮೆ ಶುಲ್ಕ ಎಂದು ಬಂದು ಈಗ ಈ ರೀತಿ ವರ್ತಿಸುತ್ತಿದ್ದಾರೆ. ಧಾರ್ಮಿಕತೆಗೆ ಒತ್ತು ಕೊಡುವ ಕಾಲೇಜಿನಲ್ಲಿ ಹೆಚ್ಚು ಶುಲ್ಕ ಎನ್ನುತ್ತಾರೆ. ಕಡಿಮೆ ಶುಲ್ಕ ಎಂದು ಈಗ ಶೈಕ್ಷಣಿಕ ವಾತಾವರಣ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications