ಎಸ್ಎಸ್ಎಲ್ ಸಿ ಫಲಿತಾಂಶ: ಮೇಧಾ ದ್ವೀತಿಯ, ಮನೋಜ್ ತೃತೀಯ
ಉಡುಪಿ ಮೇ 07 : ಕರ್ನಾಟಕ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಸೋಮವಾರ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. 625 ಅಂಕಗಳಲ್ಲಿ 625 ಅಂಕಗಳನ್ನು ಇಬ್ಬರು ವಿದ್ಯಾರ್ಥಿಗಳು ಪಡೆದರೆ, 625ರಲ್ಲಿ 624 ಅಂಕಗಳನ್ನು 8 ಮಂದಿ ಪಡೆದಿದ್ದಾರೆ.
ಈ ಪೈಕಿ ಉಡುಪಿ ಜಿಲ್ಲೆಯ ಟಿಎ ಪೈ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಹಾಗೂ ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ ಕೂಡ ಸೇರಿಕೊಂಡಿದ್ದಾರೆ. ಟಿಎ ಪೈ ಇಂಗ್ಲೀಷ್ ಶಾಲೆಯ ಮೇಧಾ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಇಂದ್ರಾಳಿ ಶಾಲೆಯ ಮನೋಜ್ ಎಂ. ಮಲ್ಯ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದು, ಜಿಲ್ಲೆಗೆ, ಶಾಲೆಗೆ, ಪೋಷಕರಿಗೆ ಕೀರ್ತಿ ತಂದಿದ್ದಾರೆ.
ತನ್ನ ಸತತ ಪ್ರಯತ್ನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುವ ಮೇಧಾ ಎಲ್ಲಾ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾಳೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಕನಸು ಹೊತ್ತಿದ್ದಾರೆ.

"ನಾನು ಪರೀಕ್ಷೆ ಹತ್ತಿರ ಬಂದಾಗ ತಯಾರು ಆರಂಭಿಸಿಲ್ಲ. ಮೊದಲಿನಿಂದಲೇ ದಿನಾ ಸ್ವಲ್ಪ ಹೊತ್ತು ಓದಿಗೆ ಮೀಸಲಿಡುತ್ತಿದ್ದೆ. ತಂದೆ ತಾಯಿಯ ಆಶೀರ್ವಾದದಿಂದ ನನಗೆ ಅಂಕ ಪಡೆಯಲು ಸಾಧ್ಯವಾಯಿತು" ಎಂದು ತಮ್ಮ ಸಾಧನೆಯ ಹಿಂದಿನ ಪರಿಶ್ರಮವನ್ನು ವಿವರಿಸುತ್ತಾರೆ ಮೇಧಾ.
ನನಗೆ ರಾಂಕ್ ದೊರೆಯಲು ಕಾರಣವಾದ ಎಲ್ಲರಿಗೂ ಧನ್ಯವಾದ. ನನ್ನ ಸಾಧನೆಗೆ ಸಹಪಾಠಿಗಳು ಕೂಡ ಸಾಥ್ ನೀಡಿದ್ದಾರೆ. ಆದರೆ ಅವರಿಗೆ ಕಡಿಮೆ ಅಂಕ ಬಂದರೆ ಬೇಸರ ಪಡುವ ಆಗತ್ಯವಿಲ್ಲ. ಅಂಕ ಗಳಿಸೋದೆ ಜೀವನವಲ್ಲ ಎಂಬ ಸ್ಪೂರ್ತಿಯ ಮಾತುಗಳನ್ನಾಡುತ್ತಾರೆ ಮೇಧಾ.
ಒಟ್ಟು 6 ವಿಷಯಗಳಲ್ಲಿ ಸಂಸ್ಕೃತ 125 ಅಂಕ, ಇಂಗ್ಲೀಷ್ 100 ಅಂಕ, ಕನ್ನಡ 100, ಗಣಿತ 99, ಸಮಾಜ 100, ವಿಜ್ಞಾನ 99 ಅಂಕಗಳನ್ನು ಪಡೆದುಕೊಂಡಿರುವ ಮನೋಜ್ ದಿನ ನಾಲ್ಕು ಗಂಟೆಗಳ ತಯಾರಿ ನಡೆಸುತ್ತಿದ್ದರಂತೆ.
ಗುರುಗಳ ಮತ್ತು ಪೋಷಕರ ಸಹಾಯದಿಂದ ಈ ಫಲ ಸಿಕ್ಕಿದೆ ಎನ್ನುವ ಮನೋಜ್ ಅಂಕ ನೋಡಿ ಪೋಷಕರು ಕೂಡ ಖುಷಿ ಹಂಚಿಕೊಂಡಿದ್ದಾರೆ.
ಇವರ ತಂದೆ ಮಣಿಪಾಲದಲ್ಲಿ ಶಿಕ್ಷಕರಾಗಿದ್ದು, ತಾಯಿ ಎಲ್ ಐ ಸಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮನೋಜ್ ತನ್ನ ಸಾಧನೆಗೆ ಬೆನ್ನುಲುಬಾಗಿ ನಿಂತ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಮನೋಜ್ ಮುಂದಕ್ಕೆ ಐಐಟಿಯಲ್ಲಿ ಕಲಿಯಬೇಕೆಂಬ ಹಂಬಲ ಇಟ್ಟುಕೊಂಡಿದ್ದಾನೆ. ಅದಕ್ಕಾಗಿ ತಯಾರಿಯನ್ನು ಕೂಡ ನಡೆಸುತ್ತಿದ್ದಾನೆ.












Click it and Unblock the Notifications