"ವೈರಲ್ ಸ್ಟಾರ್" ವೈಕುಂಠನ ಸಾವಿಗೆ ಯಾರು ಕಾರಣ?
ಉಡುಪಿ, ನವೆಂಬರ್ 19: ರಾಕ್ ಸ್ಟಾರ್ ವೈಕುಂಠ ಎಂದೇ ಖ್ಯಾತಿ ಪಡೆದಿರುವ ವೈಕುಂಠ ದಲಿತ ಸಮುದಾಯದ ಉತ್ತಮ ಹಾಡುಗಾರ. ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಮನೋರೋಗಿಯಾಗಿದ್ದ ಈತ ತನ್ನ ಕಂಠಸಿರಿಯ ಮೂಲಕ ಕರಾವಳಿಯಾದ್ಯಂತ ಹೆಸರುವಾಸಿ. ಈತನಿಗೆ ಕುಡಿಯಲು ಕಾಸು ಕೊಟ್ಟು ಅವನಿಂದ ಹಾಡು ಹಾಡಿಸಿ ಅದನ್ನು ಮೊಬೈಲ್ ನಲ್ಲಿ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಪರಿಪಾಠವನ್ನು ಕುಂದಾಪುರದಲ್ಲಿ ಹಲವರು ಮಾಡಿಕೊಂಡಿದ್ದರು. ತನ್ನ ಜನಪ್ರಿಯತೆ ಹೆಚ್ಚುತ್ತಿದ್ದಂತೆ ವೈಕುಂಠನಲ್ಲಿ ಕುಡಿತದ ಚಟವೂ ಹೆಚ್ಚುತ್ತಾ ಹೋಯಿತು.
ಆದರೆ ಸಾಮಾಜಿಕ ಜಾಲತಾಣದ ಲೈಕ್ ಕಮೆಂಟ್ ಗಳ ಮಧ್ಯೆ ಆತ ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರ ಯಾರೂ ಆತನ ಕೈ ಹಿಡಿಯಲಿಲ್ಲ. ಈತನ ಅನಾರೋಗ್ಯದ ಬಗ್ಗೆ ಮತ್ತೆ ಅದೇ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾದಾಗ ಒಂದಿಷ್ಟು ಯುವಕರು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ದಾಖಲಿಸುವ ಸಂದರ್ಭ ವೈದ್ಯಾಧಿಕಾರಿಗಳ ಜೊತೆಗೂ ಜಗಳವಾಡಿದ್ದಾರೆ.
ಮನೋರೋಗ ಮತ್ತು ಪಾರ್ಕಿನ್ ಸನ್ ಕಾಯಿಲೆಗೆ ತುತ್ತಾಗಿದ್ದ ವೈಕುಂಠನಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾನೆ. ಅನಾರೋಗ್ಯ ಪೀಡಿತನನ್ನು ದಾಖಲಿಸಿ ವೈದ್ಯರೊಂದಿಗೆ ಜಗಳವಾಡಿ ಮರೆಯಾಗಿದ್ದವರು ವೈಕುಂಠ ಮೃತಪಟ್ಟ ಬಳಿಕ ಪ್ರತಿಭಟನೆ ನಡೆಸಿದ್ದಾರೆ.

ವೈದ್ಯರಾದ ನಾಗೇಶ್ ಪ್ರತಿಕ್ರಿಯೆ ನೀಡಿ, "ಸರಕಾರಿ ಆಸ್ಪತ್ರೆ ಇರುವುದೇ ಬಡವರಿಗೆ. ನಾವು ವೈಕುಂಠನನ್ನು ಅಡ್ಮಿಟ್ ಮಾಡಿ ಸಾಧ್ಯವಾದ ಮಟ್ಟಿಗೆ ಚಿಕಿತ್ಸೆ ನೀಡಿದ್ದೇವೆ. ವೆಂಟಿಲೇಟರ್ ನಲ್ಲಿ ಇಟ್ಟ ನಂತರ ರೋಗಿ ಬದುಕುವ ಸಾಧ್ಯತೆ ಐವತ್ತು ಐವತ್ತು ಮಾತ್ರ. ಆದರೆ ಅವರು ಸಾವನ್ನಪ್ಪಿದ್ದಾರೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಇಲ್ಲ" ಎಂದು ಮಾಧ್ಯಮದವರಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಆದರೆ ಸಾಮಾಜಿಕ ಜಾಲತಾಣದ ಪ್ರಚಾರದ ಗೀಳಿಗೆ ಓರ್ವ ಅಮಾಯಕನ ಪ್ರಾಣ ಬಲಿಯಾಗಿರುವುದಂತೂ ನಿಜ.












Click it and Unblock the Notifications