ಉಪವಾಸ ಕೂತ ಶೋಭಾ ಕರಂದ್ಲಾಜೆಯಿಂದ ಕಾಂಗ್ರೆಸ್ ವಿರುದ್ದ ವಾಗ್ದಾಳಿ
ಉಡುಪಿ, ಏ 12: ವಿಪಕ್ಷಗಳಿಂದ ಸಂಸತ್ ಕಲಾಪಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಬೆಂಬಲ ವ್ಯಕ್ತಪಡಿಸಿದರು. ಉಡುಪಿಯ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿ ಮುಂದೆ ಸಂಸದೆ ಶೋಭಾ ಸತ್ಯಾಗ್ರಹ ನಡೆಸಿದರು.
ಗುರುವಾರ (ಏ 12) ಬೆಳಿಗ್ಗೆ ಹತ್ತು ಗಂಟೆಗೆ ಪಕ್ಷದ ಕಾರ್ಯಕರ್ತರ ಜೊತೆ ಆಗಮಿಸಿದ ಸಂಸದೆ ಶೋಭಾ, ಸತ್ಯಾಗ್ರಹ ಕುಳಿತು ವಿಪಕ್ಷದ ವಿರುದ್ಧ ಘೋಷಣೆ ಕೂಗಿದರು. ಅತ್ಯಂತ ಹಳೆಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಕಕ್ಕೆ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಗೌರವ ಇಲ್ಲ ಎಂದು ಶೋಭಾ ಕಿಡಿಕಾರಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಸಂಸತ್ ಕಲಾಪಗಳಿಗೆ ಅಡ್ಡಿ ಪಡಿಸುತ್ತಿರುವ ವಿಪಕ್ಷಗಳಿಗೆ ಒಂದು ಸಂದೇಶ ರವಾನೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಉಪವಾಸ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದಾರೆ. ಅದರಂತೆ ದೇಶಾದ್ಯಂತ ಬಿಜೆಪಿಯ ಸಂಸದರು, ಮಂತ್ರಿಗಳು ಉಪವಾಸ ಕುಳಿತಿದ್ದಾರೆ.

ವಿಪಕ್ಷಗಳು ಸಂಸತ್ ನಲ್ಲಿ ಅಡ್ಡಿ ಪಡಿಸುತ್ತಿರುವುದರಿಂದ ಅನೇಕ ಮಸೂದೆಗಳು ಅಂಗೀಕಾರವಾಗದೇ ಬಾಕಿ ಉಳಿದಿವೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟು ಈ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ , ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿ , ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಹಾಲಾಡಿಗೆ ವಿಶ್ವಾಸ: ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲೇ ಭಿನ್ನಮತ ಸ್ಪೋಟಗೊಂಡಿತ್ತು. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಟಿಕೆಟ್ ನೀಡಿದ್ದಕ್ಕೆ ಅಸಮಧಾನಗೊಂಡು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು.
ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ , ಕುಂದಾಪುರದ ಬಿಜೆಪಿ ಭಿನ್ನಮತ ಪಕ್ಷದೊಳಗಿನ ವಿಚಾರ. ಭಿನ್ನಮತವನ್ನು ರಾಜ್ಯಾಧ್ಯಕ್ಷರು ಶಮನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಅಧಿಕೃತ ಅಭ್ಯರ್ಥಿಯಾಗಿ ನನ್ನ ಹೆಸರು ಘೋಷಣೆಯಾಗಿದೆ. ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತೇನೆ. ಭಿನ್ನಮತೀಯರು ಪಕ್ಷದಲ್ಲಿ ಇದ್ದಾರೋ ಇಲ್ಲವೋ ಅವರೇ ತೀರ್ಮಾನಿಸಲಿ. ಪಕ್ಷದಲ್ಲಿದ್ದರೆ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ಹಾಲಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆ ಸಂದರ್ಭ ಎಲ್ಲರ ಸಹಾಯ ಬೇಕಾಗುತ್ತದೆ. ಪಕ್ಷದ ಹಿರಿಯ ನಾಯಕ ಎ.ಜಿ ಕೊಡ್ಗಿಯವರು ತಮ್ಮ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಾಲಾಡಿ, ಹಿರಿಯರಾದ ಕೊಡ್ಗಿಯವರನ್ನು ಭೇಟಿಯಾಗಿದ್ದೇನೆ. ಕೊಡ್ಗಿಯವರ ಆಶೀರ್ವಾದ ಪಡೆದು ಬಂದಿದ್ದೇನೆ.
ಎ.ಜಿ ಕೊಡ್ಗಿಯವರು ಹಿರಿಯರು, ಅವರ ಮೇಲೆ ಗೌರವವಿದೆ, ಎಲ್ಲಾ ಕಡೆ ಸ್ವಲ್ಪ ಅಸಮಾಧಾನ ಇರುತ್ತದೆ. ನಾನು ದಿನನಿತ್ಯ ಜನರ ಕೆಲಸ ಮಾಡಿದ್ದೇನೆ. ಚುನಾವಣಾ ಸಂದರ್ಭದಲ್ಲಿ ವಿಶೇಷ ಪ್ರಚಾರ ಮಾಡುವ ಅಗತ್ಯ ನನಗೆ ಬೀಳುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ವಿಶ್ವಾಸದ ಮಾತನ್ನಾಡಿದ್ದಾರೆ.












Click it and Unblock the Notifications