ರೈಗೆ ಕಾರಂತ ಪ್ರಶಸ್ತಿ : ಸಾಮಾಜಿಕ ತಾಣದಲ್ಲಿ ಭುಗಿಲೆದ್ದ ಆಕ್ರೋಶ
ಮಂಗಳೂರು, ಅಕ್ಟೋಬರ್ 05 : ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಈ ಬಾರಿಯ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಖ್ಯಾತ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿತ್ತು. ಇದೀಗ ಇವರ ಆಯ್ಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಡಾ.ಶಿವರಾಮ ಕಾರಂತರು ನಮ್ಮೂರಿನ ಹೆಮ್ಮೆ ಅವರು ಸದಾ ಪರಿಸರ, ಸಮಾಜದ ಬಗ್ಗೆ ಧ್ವನಿ ಎತ್ತುತ್ತಿದ್ದರು. ಅಂಥವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಪ್ರಕಾಶ್ ರೈ ಓರ್ವ ಉತ್ತಮ ಆಯ್ಕೆಯಲ್ಲ. ಪ್ರಕಾಶ್ ರೈ ನಾಡಿನ ಜೀವಂತ ಸಮಸ್ಯೆಗಳಾದ ಕಾವೇರಿ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರ, ನೇತ್ರಾವತಿ ವಿಚಾರದಲ್ಲಿ ಮಾತನಾಡಿದವರಲ್ಲ. ಹಾಗಿದ್ದ ಮೇಲೂ ಅವರನ್ನು ಪ್ರಶಸ್ತಿಗೆ ಯಾಕೆ ಆಯ್ಕೆ ಮಾಡಲಾಯಿತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ, ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡುವ ಮೂಲಕ ಪ್ರಕಾಶ್ ರೈ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ದರಿಂದ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಈ ಪ್ರಶಸ್ತಿ ಕೂಡಬಾರದೆಂದು ಜೈ ಭಾರ್ಗವ ಬಳಗ ಎನ್ನುವ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.

ರೈಗೆ ಪ್ರಶಸ್ತಿ ನೀಡಿದರೆ ಕಪ್ಪು ಬಾವುಟ
ಒಂದು ವೇಳೆ ಪ್ರಕಾಶ ರೈ ಅವರಿಗೆ ಪ್ರಶಸ್ತಿ ನೀಡಿದ್ದಲ್ಲಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು ಎಂದು ಸಂಘಟನೆ ಎಚ್ಚರಿಸಿದೆ. ಪ್ರಕಾಶ್ ರೈ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದರೂ ಸಾಮಾಜಿಕ ತಾಣದಲ್ಲಿ ಅವರ ವಿರುದ್ಧ ಎದ್ದಿರುವ ಆಕ್ರೋಶ ತಣ್ಣಗಾಗುತ್ತಿಲ್ಲ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಪ್ರಕಾಶ್ ಅವರ ಸ್ಥಿತಿಯಾಗಿದೆ.

ಉತ್ಸವದ ಕೊನೆ ದಿನ ರೈಗೆ ಪ್ರಶಸ್ತಿ ಪ್ರದಾನ
ಈಗಾಗಲೇ ಪ್ರತಿಷ್ಠಾನದ ವತಿಯಿಂದ ಕಾರಂತರ ಜನ್ಮದಿನೋತ್ಸವ ಹಾಗೂ 13ನೇ ವರುಷದ ಕಾರಂತ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಗೊಂಡಿದ್ದು, ಒಟ್ಟು ಹತ್ತು ದಿನಗಳ ಕಾಲ ಕುಂದಾಪುರದ ಕೋಟದಲ್ಲಿರುವ ಕಾರಂತ ಥೀಂ ಪಾರ್ಕ್ ನಲ್ಲಿ ಪ್ರತಿದಿನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಕೊನೆ ದಿನ ಅಂದರೆ 10ನೇ ತಾರೀಖಿನಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಕಾಶ್ ರೈ ಆಯ್ಕೆ ಈ ಹಿಂದೆಯೇ ಆಗಿದ್ದರಿಂದ ಸಂಘಟಕರು ಈಗ ಗೊಂದಲಗೀಡಾಗಿದ್ದಾರೆ.

ಸಂಘಟಕರಲ್ಲಿಯೂ ಪ್ರಶಸ್ತಿ ನೀಡಲು ವಿರೋಧ
ಅಲ್ಲದೇ ಸಂಘಟಕರ ನಡುವೆಯೂ ಪ್ರಕಾಶ್ ರೈ ಯವರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡಲು ವಿರೋಧವಿದೆ ಅನ್ನೋ ಮಾತು ಕೇಳಿ ಬಂದಿದೆ. ಅಕ್ಟೋಬರ್ 1ರಿಂದಲೇ ಸಾಂಸ್ಕೃತಿಕ ದಿಬ್ಬಣ ಆರಂಭವಾಗಿದ್ದು, ಅಕ್ಟೋಬರ್ 10ರಂದು ಪ್ರಕಾಶ್ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಾರಂತರಿಗೆ ಅವಮಾನ ಮಾಡುವುದು ಬೇಡ
ದಯವಿಟ್ಟು ಪ್ರಕಾಶ್ ರೈ ಅವರಿಗೆ ಶಿವರಾಮ್ ಕಾರಂತ್ ಪ್ರಶಸ್ತಿಯನ್ನು ನೀಡಬೇಡಿ. ನಂತರ ಅವರು ಆ ಪ್ರಶಸ್ತಿಯನ್ನು ವಾಪಸ್ ಮಾಡಿ ಕಾರಂತರಿಗೆ ಅವಮಾನ ಮಾಡುವುದು ಬೇಡ ಎಂದು ಕಾರಂತ್ ಅಭಿಮಾನಿಯೊಬ್ಬರು ಕೋರಿದ್ದಾರೆ. ಆದರೆ, ರೈ ಅವರು ತಾವು ಯಾವುದೇ ಪ್ರಶಸ್ತಿಯನ್ನು ಹಿಂದಿರುಗಿಸಿ ಅವಮಾನ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲಿಯ ಭಾರ್ಗವ ಎಲ್ಲಿಯ ರಾಜ್?
ಎಲ್ಲಿಯ ನಮ್ಮ ಕಡಲ ತಡಿಯ ಭಾರ್ಗವ ನೇರ, ನಿಷ್ಠುರವಾದಿ ಕಾರಂತಜ್ಜ, ಎಲ್ಲಿ ಲಾಭನಷ್ಟದ ಲೆಕ್ಕಾಚಾರದ ಅನುಕೂಲಸಿಂಧು ಹೇಳಿಕೆ ಕೊಡುವ ಪ್ರಕಾಶ್ ರೈ ಆಲಿಯಾಸ್ ಪ್ರಕಾಶ್ ರಾಜ್? ಕಾರಂತರು ಎಲ್ಲೆಡೆ ಕಾರಂತರಾಗೇ ಬದುಕಿದರು. ಪಕ್ಕದ ರಾಜ್ಯಕ್ಕೆ ಹೋದಾಗ ಪ್ರಕಾಶ್ ರೈ ಹಾಗೆ ರಾಜ್ ಎಂದು ಬದಲಿಸಿಕೊಂಡು ಶಿವರಾಮ್ ರಾಜ್ ಆಗಲಿಲ್ಲ.












Click it and Unblock the Notifications