ಡೆಮೊನ್ ವೇಷದೊಂದಿಗೆ ಬಡಮಕ್ಕಳ ಚಿಕಿತ್ಸೆಗೆ ಜನರಮುಂದೆ ಬಂದ ರವಿ ಕಟಪಾಡಿ
ಅನಾರೋಗ್ಯ ಹೊಂದಿದ ಬಡ ಮಕ್ಕಳ ಚಿಕಿತ್ಸೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ಕಾಪುವಿನ ರವಿ ಈ ಭಾರಿ ಮತ್ತೆ ವಿಶಿಷ್ಠವಾದ ವೇಷದೊಂದಿಗೆ ಬಡಮಕ್ಕಳ ಆರೋಗ್ಯದ ಚಿಕಿತ್ಸೆ ಗಾಗಿ ಜನರ ಮುಂದೆ ಬಂದಿದ್ದಾರೆ.
ಏಳು ವರ್ಷದ ಅವಧಿಯಲ್ಲಿ ಪ್ರತಿ ಕೃಷ್ಣಾಷ್ಟಮಿಯ ಸಂಧರ್ಭದಲ್ಲಿ ವಿವಿಧ ವೇಷ ಧರಿಸಿ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಸುತ್ತಾಡಿ ಜನ ನೀಡುವ ಹಣವನ್ನು ಬಡ ಮಕ್ಕಳ ಚಿಕಿತ್ಸೆಗಾಗಿ ನೀಡಿರುವ ರವಿ, ಈ ಬಾರಿಯೂ ಡೆಮೊನ್ ವೇಷದೊಂದಿಗೆ ಉಡುಪಿಯ ಬೀದಿ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಳು ವರ್ಷದ ಅವಧಿಯಲ್ಲಿ 66 ಮಕ್ಕಳ ಗಂಭೀರ ಖಾಯಿಲೆಯ ಚಿಕಿತ್ಸೆಗಾಗಿ 90 ಲಕ್ಷ ರೂಪಾಯಿ ಹಣವನ್ನು ನೀಡಿರುವ ರವಿ ಕಟಪಾಡಿ ಈ ಬಾರಿ ಡೆಮೊನ್ ವೇಷದೊಂದಿಗೆ ಮತ್ತೆ ಆರು ಮಕ್ಕಳ ಚಿಕಿತ್ಸೆಗಾಗಿ ಜನರ ಮುಂದೆ ಬಂದಿದ್ದಾರೆ.
ಕರಾವಳಿಯಲ್ಲಿ ಕೃಷ್ಣಾಷ್ಟಮಿ ಸಂಭ್ರಮ; ಕದ್ರಿಯಲ್ಲಿ ಕೃಷ್ಣ ಲೋಕ ಸೃಷ್ಠಿ
ಭಯಾನಕ ವಾದ ಹಾಲಿವುಡ್ ಡೆಮೊನ್ ವೇಷಕ್ಕಾಗಿ ರವಿ ಫ್ರೆಂಡ್ಸ್ ಕಟಪಾಡಿ ತಂಡ ಹಾಗೂ ಮಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ಭಾಗದ ಹದಿನೈದು ಅಧಿಕ ಕಲಾವಿದರು ಎರಡು ತಿಂಗಳಿನಿಂದ ಶ್ರಮ ಹಾಕಿ ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಡೆಮೊನ್ ವೇಷವನ್ನು ನಿರ್ಮಾಣ ಮಾಡಿದ್ದಾರೆ. ಈ ವೇಷದ ಹಲವು ಬಿಡಿಭಾಗಗಳನ್ನು ಯುಎಸ್ಎ ಯಿಂದ ತರಿಸಲಾಗಿದೆ.
1 ಕೋಟಿ ರೂ ತಲುಪುವ ಗುರಿ
ವೃತ್ತಿಯಲ್ಲಿ ಸೆಂಟ್ರಿಂಗ್ ಕಾರ್ಮಿಕರಾಗಿರುವ ರವಿ ಕಟಪಾಡಿ ಕಳೆದ ಏಳು ವರ್ಷದಲ್ಲಿ ಪ್ರತಿ ಅಷ್ಟಮಿಯ ಸಂದರ್ಭದಲ್ಲಿ ವಿವಿಧ ವೇಷ ತೊಟ್ಟು ಸಾರ್ವಜನಿಕರಿಂದ ಒಟ್ಟು 89.75ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದರು. ಈ ಬಾರಿ 10.5ಲಕ್ಷ ರೂಪಾಯಿ ಸಂಗ್ರಹಿಸಿ ಒಂದು ಕೋಟಿ ರೂಪಾಯಿ ತಲುಪುವ ಗುರಿಯನ್ನು ರವಿ ಕಟಪಾಡಿ ಹೊಂದಿದ್ದಾರೆ.
ಅಷ್ಟಮಿಯ ವಿಟ್ಲ ಪಿಂಡಿಯ ದಿನ ಉಡುಪಿಯ ಬೀದಿಬೀದಿ ಸುತ್ತುವ ರವಿ ಕಟಪಾಡಿ ವೇಷ ಧರಿಸಿ ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ಕೊರಗಜ್ಜ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೂರು ಮಂದಿಯ ತಂಡದೊಂದಿಗೆ ಹಣ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ.
7 ಮಕ್ಕಳಿಗೆ ದೇಣಿಗೆ ಹಣ ನೀಡುವ ಉದ್ದೇಶ
ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿ ತೊಟ್ಟು ಕಳಚಿಡಬಹುದಾದ ವಿನ್ಯಾಸದ ಕಾಸ್ಟ್ಯೂಮ್ ಇದಾಗಿದ್ದು, ಈ ವೇಷಕ್ಕೆ ತಗುಲಿದ ವೆಚ್ಚವನ್ನು ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸದಸ್ಯರೇ ಭರಿಸಿದ್ದಾರೆ. ಈ ಬಾರಿ ಸಂಗ್ರಹವಾಗುವ ಮೊತ್ತವನ್ನು ಮೂರು ಕ್ಯಾನ್ಸರ್ ಪೀಡಿತ ಮಕ್ಕಳ ಸಹಿತ ಏಳು ಮಕ್ಕಳಿಗೆ ನೀಡುವ ಉದ್ದೇಶವನ್ನು ರವಿ ಕಟಪಾಡಿ ಹೊಂದಿದ್ದಾರೆ.
ಒಂದು ರೂ ಕೊಟ್ಟರೂ ಸ್ವೀಕಾರ
ತನ್ನ ಈ ವಿಶಿಷ್ಟ ಸೇವೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಕಟಪಾಡಿ, " ರವಿ ಫ್ರೆಂಡ್ಸ್ ಕಟಪಾಡಿ ತಂಡದ ಸಾಧನೆಯಿಂದ ಮಕ್ಕಳ ಸೇವೆ ಮಾಡಲು ಸಾಧ್ಯವಾಗಿದೆ. ಎರಡು ದಿನದ ಸಂಗ್ರಹದಲ್ಲಿ ಸಾರ್ವಜನಿಕರು ನಮ್ಮ ಮೇಲೆ ನಂಬಿಕೆಯಿಟ್ಟು ಹಣ ನೀಡುತ್ತಿದ್ದಾರೆ. ಜನರು ಕೊಟ್ಟ ಹಣವನ್ನು ಯಥಾವತ್ತಾಗಿ ಬಡಮಕ್ಕಳಿಗೆ ತಲುಪಿಸಿದ್ದೇವೆ. ನಮ್ಮ ರೀತಿಯೇ ಹಲವು ತಂಡಗಳು ಈ ಕಾರ್ಯವನ್ನು ಮಾಡುತ್ತಿವೆ. ಎಲ್ಲಾ ತಂಡಗಳು ಜನರು ಒಂದು ರೂಪಾಯಿ ಹಣ ನೀಡಿದರೂ ಪ್ರೀತಿಯಿಂದ ಸ್ವೀಕರಿಸಿ, ಅವರ ನಿಸ್ವಾರ್ಥ ಮನಸ್ಸನ್ನು ಗೌರವಿಸಿ ಎಂದು ಸಲಹೆ ನೀಡಿದರು.
ಮಕ್ಕಳ ಸೇವೆಗಾಗಿ ಜೀವನ ಮೀಸಲು
ನಮ್ಮ ಸೇವೆಯನ್ನು ಗೌರವಿಸಿ ಹಲವು ಸಂಘಸಂಸ್ಥೆಗಳು ಗೌರವಿಸಿದೆ. ಸಂಘ ಸಂಸ್ಥೆಗಳು ಸನ್ಮಾನಕ್ಕೆ ಅಹ್ವಾನಿಸುವಾಗ, ಶಾಲು, ಹೂವು, ಉಡುಗೂರೆ ನೀಡುವ ಬದಲು ಇದಕ್ಕೆ ತಗಲುವ ಖರ್ಚು ಒಂದು ಸಾವಿರ ರೂಪಾಯಿ ನೀಡಿ ಎಂದು ಕೇಳಿಕೊಂಡಿದ್ದೇನೆ, ಅವರೂ ಹಣ ನೀಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಗೆದ್ದಾಗ ಬಂದ 25 ಲಕ್ಷ ರೂಪಾಯಿ ಹಣವನ್ನು ಬಡಮಕ್ಕಳಿಗೆ ನೀಡಿದ್ದೇವೆ.
ಮುಂದೆ ವೈಯಕ್ತಿಕ ವಾಗಿ ಮನೆ ಕಟ್ಟಬೇಕು ಎನ್ನುವ ಆಸೆ ಇದೆ. ಬ್ಯಾಂಕ್ ನವರು ಲೋನ್ ನೀಡಿದರೆ ಮನೆ ಕಟ್ಟುತ್ತೇವೆ. ಮದುವೆ ಆಗುವ ಆಲೋಚನೆ ಇಲ್ಲ. ಮದುವೆ ಆದರೆ ಮಕ್ಕಳ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಜೀವನವನ್ನು ಬಡಮಕ್ಕಳ ಸೇವೆಗಾಗಿ ಮೀಸಲಿಡುವುದಕ್ಕೆ ತೀರ್ಮಾನಿಸಿದ್ದೇನೆ ಎಂದು ರವಿ ಕಟಪಾಡಿ ಹೇಳಿದ್ದಾರೆ.