ಉಡುಪಿಗೆ ಡಿ.27 ರಂದು ರಾಷ್ಟ್ರಪತಿ ಭೇಟಿ, ಕೃಷ್ಣ ಮಠಕ್ಕೆ ಬಿಗಿ ಭದ್ರತೆ
ಉಡುಪಿ, ಡಿಸೆಂಬರ್ 20: ಉಡುಪಿ ಪೇಜಾವರ ಮಾಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿ 80 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ಇದೇ ಡಿಸೆಂಬರ್ 27 ರಂದು ಉಡುಪಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿಗಳು ಉಡುಪಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶ್ರೀಕಷ್ಣ ಮಠಕ್ಕೆ ಬಿಗಿ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಯ ಪೂರ್ವ ತಯಾರಿ ಇಂದಿನಿಂದಲೇ ಆರಂಭಗೊಂಡಿದೆ.
ಶ್ರೀಕಷ್ಣ ಮಠಕ್ಕೆ ಬೆಳಿಗ್ಗೆ 6ರಿಂದ ಸಂಜೆ 3 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ರಾಷ್ಟ್ರಪತಿಗಳ ಭದ್ರತೆಯ ದೃಷ್ಠಿಯಿಂದ ಡಿಸೆಂಬರ್ 25 ಕ್ಕೆ ಎಸ್ ಪಿಜಿ ಭದ್ರತಾ ಅಧಿಕಾರಿಗಳು ಮಠದ ರಾಜಾಂಗಣವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲಿದ್ದಾರೆ.

ಭದ್ರತಾ ದೃಷ್ಠಿಯಿಂದ, ಉಡುಪಿಯ ಸಂಸ್ಕೃತ ಕಾಲೇಜು ಪಕ್ಕದ ಗೇಟಿನಿಂದ ಸಂಪೂರ್ಣ ರಥಬೀದಿಯ ಸುತ್ತ ಹಾಗೂ ರಾಜಾಂಗಣದ ಸುತ್ತಮುತ್ತ ಇರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಡಿಸೆಂಬರ್ 27 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮುಚ್ಚುವಂತೆ ಹಾಗೂ ಸಾರ್ವಜನಿಕರಿಗೆ ಸದ್ರಿ ದಿನದಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠ ಭೇಟಿ ನಿರ್ಬಂಧಿಸಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿರುತ್ತಾರೆ.

ಶ್ರಿ ಕೃಷ್ಣ ಮಠ , ರಥಬೀದಿ ರಾಜಾಂಗಣ ಪಾರ್ಕಿಂಗ್ ಪ್ರವೇಶದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಡಿಸೆಂಬರ್ 25ರಿಂದ 27 ರ ತನಕ ವ್ಯಾಪಾರ ವಹಿವಾಟಿಗೆ ತೊಡಕಾಲಿದೆ. ಕೊಠಡಿಗಳನ್ನು ಪ್ರವಾಸಿಗರಿಗೆ ನೀಡುವಂತಿಲ್ಲ. ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು, ಪ್ರವಾಸಿಗರಿಗೂ 3 ದಿನಗಳ ಕಾಲ ಶ್ರೀ ಕೃಷ್ಣನ ದರ್ಶನ ಕಷ್ಟಕರವಾಗಲಿದೆ.












Click it and Unblock the Notifications