ಅತ್ತೂರು ಚರ್ಚಿನಲ್ಲಿ ಟವರ್ ಸಂಪರ್ಕ: ಫಲಿಸಿದ ಮೋದಿ ಪತ್ರ
ಕಾರ್ಕಳ ಡಿಸೆಂಬರ್ 13: ಕಾರ್ಕಳ ಪುಣ್ಯಕ್ಷೇತ್ರಗಳ ನೆಲೆವೀಡು. ಇಲ್ಲಿನ ಕ್ರೈಸ್ತ ದೇವಾಲಯದಲ್ಲಿರುವ ಪುಷ್ಕರಣಿ ಏಕೈಕ ಕ್ರೈಸ್ತ ಪುಷ್ಕರಣಿ ಎಂಬುದಕ್ಕೆ ಅತ್ತೂರು ಸಂತ ಲಾರೆನ್ಸ್ ಚರ್ಚ್ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ. ಆದರೆ ಈ ಪುಣ್ಯಕ್ಷೇತ್ರದಲ್ಲಿ ಮೊಬೈಲ್ ಸಂಪರ್ಕಕ್ಕೆ ಅಡ್ಡಿಯಾಗಿದ್ದು, ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ.
ಪ್ರಸ್ತುತವಾಗಿ ವಿಶ್ವ ಕೈಸ್ತ ಧರ್ಮದ ರೋಮನ್ ಕೆಥೋಲಿಕ್ ಮಹಾ ಗುರು ಪೋಪ್ ಫ್ರಾನ್ಸಿಸ್ ಅವರು ಅತ್ತೂರು ಚರ್ಚನ್ನು ಮೈನರ್ ಬೆಸಿಲಿಕಾ (ಕಿರು ದೇವಾಲಯ) ಎಂದು ಅಂತಾರಾಷ್ಟ್ರೀಯ ಮನ್ನಣೆ ನೀಡಿ ಮೇಲ್ದರ್ಜೆಗೇರಿಸಿದ್ದಾರೆ. ಜನ ವಸತಿ ಇರುವ ಪ್ರದೇಶ ಇದಾಗಿದ್ದು ಖ್ಯಾತಿ ಪಡೆದ ತಾಣವಾಗಿದ್ದರೂ ಹಲವು ವರ್ಷಗಳಿಂದ ಈ ಪರಿಸರದಲ್ಲಿ ಮೊಬೈಲ್ ಸಂಪರ್ಕ ಮರೀಚಿಕೆ ಎಂಬಂತಾಗಿತ್ತು. ಪರ್ಪಲ್ ಗುಡ್ಡೆಯ ಒಂದು ಮಗ್ಗಳದಲ್ಲಿರುವ ಈ ಚರ್ಚ್ಗೆ ಇನ್ನೊಂದೆಡೆ ಬೃಹತ್ ಗುಡ್ಡ ಅಡ್ಡವಾಗಿರುವುದೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ.[ಮಳೆ ಕೊರತೆ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ]
ಇಲ್ಲಿಗಾಗಮಿಸುವ ಸಾವಿರಾರು ಭಕ್ತರಿಗೆ ತೊಂದರೆಯಾಗುತ್ತಿರುವುದರಿಂದ ಮಾಬೈಲ್ ಸಂಪರ್ಕಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಚರ್ಚ್ನ ಸಮಿತಿ ಹಾಗೂ ಧರ್ಮಗುರುಗಳಿಗೆ ಜನರು ಬೇಡಿಕೆ ಇಡುತ್ತಲೇ ಬಂದಿದ್ದಾರೆ.
ಈ ಬಗ್ಗೆ ಚರ್ಚನ ಗುರುಗಳು ಸಾಕಷ್ಟು ಬಾರಿ ಸಂಬಂಧಿಸಿದ ಕಂಪೆನಿಗಳಿಗೆ, ಇಲಾಖೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅವರು ಈ ಬಾರಿ ನೇರವಾಗಿ ಪ್ರಧಾನಿಗೆ ಸಮಸ್ಯೆ ಕುರಿತಂತೆ ಸೆ. 2ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಪ್ರಧಾನಿ , ಕೂಡಲೇ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಲ್ಲದೆ ಕೇವಲ ಏಳು ದಿನಗಳೊಳಗೆ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳ ಕೈಗೆ ಪ್ರಧಾನಿ ಹಿಂಬರಹದ ಮುಖೇನ ಉತ್ತರಿಸಿರುವ ಪತ್ರವನ್ನು ಕಳಿಸಿಕೊಟ್ಟಿದ್ದಾರೆ.[ಸಣ್ಣ ಉದ್ದಿಮೆದಾರರಿಗೆ ನರೇಂದ್ರ ಮೋದಿ ಬಹಿರಂಗ ಪತ್ರ]
ಈಗಾಗಲೇ ಬಿಎಸ್ ಎನ್ ಎಲ್ ಮಂಗಳೂರು ವಿಭಾಗದ ಮುಖ್ಯಸ್ಥ ರವಿ ಅವರು ಧರ್ಮಗುರುಗಳಿಗೆ ಪತ್ರ ಬರೆದು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದೀಗ ತಾತ್ಕಾಲಿಕ ಮೊಬೈಲ್ ಟವರ್ ನಿರ್ಮಿಸಲಾಗಿದೆ.