ಉಡುಪಿ ಮಠದಲ್ಲಿ ನಡೆಯಿತು ಕಟ್ಟಿಗೆ ಮುಹೂರ್ತ
ಉಡುಪಿ, ಆಗಸ್ಟ್. 28 : ಮುಂಬರುವ ಜನವರಿಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವದ ವಿಧಿವಿಧಾನಗಳು ಆರಂಭಗೊಂಡಿವೆ. ಎರಡನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಮಠದ ಆವರಣದಲ್ಲಿ ನಡೆಯಿತು.
ಪಲಿಮಾರು ಮಠದ ದೇವರು, ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಸೇರಿದಂತೆ ಎಲ್ಲಾ ದೇವರುಗಳಿಗೆ ಪರ್ಯಾಯ ಕೈಕರ್ಯಗಳು ಸಾಂಗವಾಗಿ ನೆರವೇರಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪಲಿಮಾರು ಮಠದಿಂದ ಶ್ರೀಕೃಷ್ಣಮಠದ ಮಧ್ವ ಸರೋವರದ ಬಳಿಗೆ ಕಟ್ಟಿಗೆ ರಥ ನಿರ್ಮಾಣದ ಕಟ್ಟಿಗೆಯನ್ನು ಭವ್ಯ ಮೆರವಣಿಗೆಯಲ್ಲಿ ಹೊತ್ತು ತರಲಾಯಿತು.
Recommended Video


ವೇದವ್ಯಾಸ ಭಟ್ ಅವರ ಪೌರೋಹಿತ್ಯದಲ್ಲಿ ಕಟ್ಟಿಗೆ ರಥದ ಕಂಬಕ್ಕೆ ಪೂಜೆ ನೆರವೇರಿಸಿ ಮೂಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿಗಳು, ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ,ಧಾರ್ಮಿಕ ಮುಖಂಡರುಗಳ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ಭಟ್, ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪರ್ಯಾಯದ ಪೂರ್ವ ಸಿದ್ಧತೆಗಳಲ್ಲಿ ಕಟ್ಟಿಗೆ ಮಹೂರ್ತ ಮೂರನೆಯದ್ದಾಗಿದೆ. ಈಗಾಗಲೇ ಬಾಳೆ ಹಾಗೂ ಅಕ್ಕಿ ಮೂಹೂರ್ತಗಳು ನಡೆದಿದ್ದು, ಮುಂದೆ ಭತ್ತ ಮುಹೂರ್ತ ನಡೆಯಲಿದೆ. ಕಟ್ಟಿಗೆ ಮುಹೂರ್ತ ನಡೆದ ಸ್ಥಳದಲ್ಲಿ ಒಂದು ತಿಂಗಳಲ್ಲಿ ಕಟ್ಟಿಗೆ ರಥ ನಿರ್ಮಾಣವಾಗಲಿದ್ದು, ಈ ಕಟ್ಟಿಗೆಯನ್ನು ಪರ್ಯಾಯದ ಅವಧಿಯಲ್ಲಿ ಅಡುಗೆ ಮಾಡಲು ಬಳಸಲಾಗುತ್ತಿದೆ.












Click it and Unblock the Notifications