ಉಡುಪಿ ಕೃಷ್ಣಮಠ ಭಕ್ತರಿಗೆ ಮುಕ್ತ: ದರ್ಶನ ಪಡೆದ ನೂರಾರು ಭಕ್ತರು
ಉಡುಪಿ, ಸೆಪ್ಟೆಂಬರ್ 28: ಕೋವಿಡ್-19 ಕಾರಣದಿಂದ ಕಳೆದ ಆರು ತಿಂಗಳಿನಿಂದ ಮುಚ್ಚಿದ್ದ ಉಡುಪಿಯ ಕೃಷ್ಣಮಠದಲ್ಲಿ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತಗೊಂಡಿದೆ. ಮೊದಲ ದಿನವಾದ ಇಂದು ನೂರಾರು ಭಕ್ತರು ದೇವರ ದರ್ಶನ ಪಡೆದರು.
ಮಾರ್ಚ್ 23 ರಿಂದ ಎಲ್ಲ ದೇವಸ್ಥಾನ, ಮಠಗಳಂತೆ ಕೃಷ್ಣಮಠವನ್ನೂ ಮುಚ್ಚಲಾಗಿತ್ತು. ಆದರೆ ರಾಜ್ಯದ ಹಲವು ದೇವಸ್ಥಾನಗಳು, ಮಠಗಳು ಅನ್ ಲಾಕ್ ಬಳಿಕ ತೆರೆದಿದ್ದವು. ಆದರೆ ಶ್ರೀಕೃಷ್ಣ ಮಠ ಮಾತ್ರ ನಿನ್ನೆ ತನಕ ಭಕ್ತರಿಗೆ ಪ್ರವೇಶಾವಕಾಶ ನೀಡಿರಲಿಲ್ಲ. ಇಂದಿನಿಂದ ಹಲವು ಷರತ್ತುಗಳೊಂದಿಗೆ ಭಕ್ತರಿಗೆ ತೆರೆದಿದೆ.
ಮುಖ್ಯವಾಗಿ ಇವತ್ತಿನಿಂದ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ರಿಂದ ಸಂಜೆ 5ರ ತನಕ ಮಾತ್ರ ಕೃಷ್ಣಮಠ ಪ್ರವೇಶಿದಲು ಭಕ್ತರಿಗೆ ಅವಕಾಶ ಇದೆ.

ಕೋವಿಡ್-19 ನ ಎಲ್ಲ ನಿಯಮಗಳನ್ನು ಪಾಲಿಸಿ, ದೇವರ ದರ್ಶನ ಮಾಡಿ ತೆರಳಬೇಕು. ಬೇರೆ ಬೇರೆ ದೇವರ ಸೇವೆಗಳು ಮತ್ತು ಅನ್ನ ಸಂತರ್ಪಣೆಯನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಪ್ರಾರಂಭಿಸುವುದಾಗಿ ಮಠದ ಮೂಲಗಳು ತಿಳಿಸಿವೆ.

ಕೋವಿಡ್ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಸಾಕಷ್ಟು ಮುಂಜಾಗರೂಕತೆಗಳನ್ನೂ ತೆಗೆದುಕೊಂಡಿದ್ದು, ಭಕ್ತರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಒಳಪ್ರವೇಶಿಸುವ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.

ಸರತಿ ಸಾಲು ನಿಲ್ಲುವಾಗಲೂ ದೈಹಿಕ ಅಂತರ ಕಾಪಾಡುವಂತೆ ಮಠದ ಸಿಬ್ಬಂದಿಗಳು ಭಕ್ತರಲ್ಲಿ ಮನವಿ ಮಾಡುತ್ತಿದ್ದಾರೆ. ಮಠ ಪ್ರವೇಶಿಸುವ ಮಾರ್ಗವನ್ನೂ ಬದಲಿಸಲಾಗಿದ್ದು, ರಾಜಾಂಗಣ ಮೂಲಕ ಮಾತ್ರ ಭಕ್ತರಿಗೆ ಒಳ ಪ್ರವೇಶಿಸಬಹುದಾಗಿದೆ. ಸ್ಥಳೀಯ ಭಕ್ತರಿಗೆ ಪಾಸ್ ನೀಡುವ ನಿರ್ಧಾರಕ್ಕೆ ಕೃಷ್ಣಮಠ ಬಂದಿದೆ.












Click it and Unblock the Notifications