ಕಾರ್ಕಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ ನಗದು ವಶ
ಉಡುಪಿ, ಮಾರ್ಚ್ 13: ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತಗಳು ಅಕ್ರಮ ತಡೆಗೆ ಸನ್ನದ್ದವಾಗಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ.
ಈ ನಡುವೆ ದಾಖಲೆಗಳಿಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ನಗದನ್ನು ಉಡುಪಿ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ?
ಕಾರ್ಕಳ ಪೊಲೀಸರು ಮಂಗಳವಾರ ತಡ ರಾತ್ರಿ ಮಾಳ ಚೆಕ್ ಪೊಸ್ಟ್ ನಲ್ಲಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಮಾಳ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಜೀಪಿನಲ್ಲಿ ದಾಖಲೆ ಇಲ್ಲದ 1,50,000 ರೂ. ನಗದು ಪತ್ತೆಯಾಗಿದೆ.
ಸಾಗಾಟವಾಗುತ್ತಿದ್ದ ಹಣ ಜೀಪ್ ನಲ್ಲಿದ್ದ ಬಾಲಕೃಷ್ಣ ಮತ್ತು ಸೈಯದ್ ಮುಹಿನುಲ್ಲಾ ಎಂಬವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಸದ್ಯ ಈ ಹಣವನ್ನು ಪೊಲೀಸರು ಕಾರ್ಕಳ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ತನಿಖೆ ಮುಂದುವರೆಸಲಾಗಿದೆ.
ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ನೀತಿ ಸಂಹಿತೆ ಅಡ್ಡಿ
ಉಡುಪಿ ಜಿಲ್ಲೆಯಾದ್ಯಂತ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು , ಜಿಲ್ಲೆಯಲ್ಲಿ ಹಾಗೂ ಸರಹದ್ದಿನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.