ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ ಬಗ್ಗೆ ಕಾರವಾರ ನೌಕಸೇನೆ ಹೇಳಿದ್ದೇನು?
ಉಡುಪಿ, ಮೇ 08:ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮಂದಿ ಮೀನುಗಾರರ ನಿಗೂಢ ನಾಪತ್ತೆ ಪ್ರಕರಣಕ್ಕೆ ಈಗ ಸ್ಪಷ್ಟತೆ ದೊರೆತಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ ಆಳ ಸಮುದ್ರದಲ್ಲಿ ನೌಕಾಪಡೆ ಪತ್ತೆ ಮಾಡಿದ್ದ ಬೋಟ್ ನ ಅವಶೇಷ ಸುವರ್ಣ ತ್ರಿಭುಜದ್ದು ಎಂದು ಕದಂಬಾ ನೇವಲ್ ಬೇಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೋಟ್ ನ ಅವಶೇಷ ಪತ್ತೆಯಾಗಿರುವ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ನೌಕಸೇನೆಯ ಕಾರವಾರ ನೇವಲ್ ಬೇಸ್ ಅಧಿಕಾರಿಗಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೇ 3ರಂದು ಮನವಿ ಸಲ್ಲಿಸಿದ್ದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇದಕ್ಕೆ ನೇವಲ್ ಬೇಸ್ ಅಧಿಕಾರಿಗಳು ಬೋಟು ಹಾಗೂ ಮೀನುಗಾರರ ಪತ್ತೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಕುರಿತ ವಿವರವನ್ನು ಎಸ್ಪಿಯವರಿಗೆ ನೀಡಿದ್ದಾರೆ.
ನೌಕಾಪಡೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ 30ರಿಂದ ಮೇ 2ರವರೆಗೆ ನೌಕಾಪಡೆಯ ಹಡಗು ಐಎನ್ಎಸ್ ನಿರೀಕ್ಷಕ್ ಮಹಾರಾಷ್ಟ್ರದ ಮಾಲ್ವಾನ್ ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದೆ. ಕಾರ್ಯಚರಣೆಯ ಕೊನೆಯ ದಿನ ಸಮುದ್ರದ ಸುಮಾರು 60 ಮೀಟರ್ ಆಳದಲ್ಲಿ ಬೋಟಿನ ಅವಶೇಷ ಪತ್ತೆಯಾಗಿದೆ.
ಮಲ್ಪೆಯಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ
ಕಾರ್ಯಾಚರಣೆಗೆ ಮುಳುಗು ತಜ್ಞರು ಹಾಗೂ ಸೋನಾರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಅವಶೇಷಗಳನ್ನು ದೃಢಪಡಿಸುವ ಸಂದರ್ಭದಲ್ಲಿ ಸಾರ್ವಜನಿಕರಾಗಿ ಶಾಸಕ ರಘುಪತಿ ಭಟ್ ಹಾಗೂ ಇತರ ಒಂಭತ್ತು ಮಂದಿ ಭಾಗವಹಿಸಿರುವುದಾಗಿ ನೌಕಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನುಗಾರರಿಗೆ ಬಲಗೊಳ್ಳುತ್ತಿದೆ ಅನುಮಾನ
ಈ ನಡುವೆ ಸುವರ್ಣ ತ್ರಿಭುಜ ಬೋಟ್ ಗೆ ನೌಕಾಪಡೆಯ ಹಡಗು ಡಿಕ್ಕಿಯಾಗಿರುವ ಆರೋಪ ಕೇಳಿಬರುತ್ತಿದ್ದರೂ ನೌಕಾಪಡೆ ಮಾತ್ರ ಈವರೆಗೆ ಆ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಈ ಕುರಿತು ಈಗ ಮೀನುಗಾರರಲ್ಲಿ ಅನುಮಾನ ಬಲಗೊಳ್ಳುತ್ತಿದೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಡಿಸೆಂಬರ್ 13 ರಂದು ನಾಪತ್ತೆಯಾಗಿತ್ತು
ನೌಕಾಪಡೆಯ 'ಐಎನ್ಎಸ್ ನಿರೀಕ್ಷಕ್' ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ ಮಾಡಿದ್ದರು. ಡಿಸೆಂಬರ್ 13 ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಮೀನುಗಾರಿಕಾ ದೋಣಿ ನಾಪತ್ತೆಯಾಗಿತ್ತು. ಬೋಟ್ ನಲ್ಲಿದ್ದ 7 ಮಂದಿ ಮೀನುಗಾರು ಕಣ್ಮರೆಯಾಗಿದ್ದರು. ಕಣ್ಮರೆಯಾದ ಮೀನುಗಾರರ ಪೈಕಿ ಮಲ್ಪೆಯ ಇರ್ವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆ
ಬೋಟ್ ಪತ್ತೆಗಾಗಿ ನಡೆದ ಶೋಧಕಾರ್ಯ
ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪದಿಂದ ಸುವರ್ಣ ತ್ರಿಭುಜ ಬೋಟ್ ಡಿ. 15 ರಂದು ಮೀನುಗಾರರ ಸಹಿತ ನಿಗೂಢವಾಗಿ ಕಾಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್, ಕರಾವಳಿ ಕಾವಲು ಪಡೆ, ಭಾರತೀಯ ತಟ ರಕ್ಷಣಾ ಪಡೆ ಸೇರಿದಂತೆ ಭಾರತೀಯ ನೌಕಾಪಡೆ ನಾಪತ್ತೆಯಾಗಿದ್ದ ಬೋಟ್ ಗಾಗಿ ಸಾಕಷ್ಟು ಶೋಧಕಾರ್ಯ ನಡೆಸಿದ್ದರು. ಆದರೆ ನಾಪತ್ತೆಯಾದ ಬೋಟ್ ಆಗಲಿ, ಅದರಲ್ಲಿದ್ದ 7 ಮಂದಿ ಮೀನುಗಾರರ ಸುಳಿವಾಗಲಿ ಪತ್ತೆಯಾಗಿರಲಿಲ್ಲ.
ನಾಪತ್ತೆ ಬಗ್ಗೆ ಕೇಳಿಬಂದ ಆರೋಪಗಳಿವು
ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷಗಳು ಈಗ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬೋಟ್ ನಲ್ಲಿದ್ದ ಏಳು ಮೀನುಗಾರರು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೌಕಾಪಡೆಯವರೇ ಮೀನುಗಾರರನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.