ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?
ಉಡುಪಿ, ಜೂನ್.15 : ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಮುಸ್ಲಿಮರ ದೊಡ್ಡ ಹಬ್ಬ ಈದುಲ್ ಫಿತರ್ ಬಂದಿದೆ. ವಿಶ್ವದೆಲ್ಲೆಡೆ ಹಬ್ಬದ ಸಂಭ್ರಮ ನೆಲೆಸಿದೆ. ರಂಜಾನ್ ತಿಂಗಳು ಪೂರ್ತಿಯಾದದ್ದನ್ನು ಸಾರುವ ಚಂದ್ರದರ್ಶನದ ಬಳಿಕ ಹಬ್ಬ ಆಚರಿಸುವುದು ವಿಶೇಷ.
ಆಯಾ ಊರು, ರಾಜ್ಯ, ದೇಶಗಳಿಗೆ ಅನುಗುಣವಾಗಿ ಹಬ್ಬ ಒಂದು ದಿನ ಆಚೀಚೆ ಆಗಬಹುದು. ಆದರೆ ಈದುಲ್ ಫಿತರ್ ಹಬ್ಬದ ಸಂಭ್ರಮ ಎಲ್ಲೆಡೆ ಒಂದೇ ರೀತಿಯಾಗಿ ಆಚರಿಸಲ್ಪಡುತ್ತದೆ.
ಮೈಸೂರಿನಲ್ಲಿ ಕಳೆಗಟ್ಟಿದ ರಂಜಾನ್ ಸಡಗರ: ಎಲ್ಲೆಲ್ಲೂ ಸಮೋಸದ ಘಮಲು
ರಂಜಾನ್ ತಿಂಗಳ ಹಗಲಿನಲ್ಲಿ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರು ಸಮಾನರು ಎನಿಸಿಕೊಳ್ಳುತ್ತಾರೆ. ಅಲ್ಲಿ ಬಡವ - ಶ್ರೀಮಂತರೆನ್ನುವ ಭೇಧವಿಲ್ಲ. ಎಲ್ಲರೂ ಒಂದೇ. ಅಲ್ಲಾಹನನ್ನು ಪ್ರಾರ್ಥಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ಪ್ರಾಯಶ್ಚಿತ್ತ ಕೇಳುವ ತಿಂಗಳು ರಂಜಾನ್.
ಮುಸಲ್ಮಾನರ ದಾನದ ಹಬ್ಬ
ಈ ತಿಂಗಳ ಕೊನೆಗೆ ವಿಶ್ವ ಮುಸ್ಲಿಮರು ಈದುಲ್ ಫಿತರ್ ಹಬ್ಬ ಆಚರಿಸುತ್ತಾರೆ. ಇದು ಮುಸಲ್ಮಾನರ ದಾನದ ಹಬ್ಬವೂ ಹೌದು. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದನ್ನು ಅರಿತ ಮುಸ್ಲಿಮನಿಗೆ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯ ಮಾಢುವುದು ಕರ್ತವ್ಯ.
ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾಗಿದೆ 'ಝಕಾತ್'. ಝಕಾತ್ ಅಂದರೆ ದಾನ .
ಫಿತ್ರ್ ಝಕಾತ್ ಎಂದರೇನು ?
ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದೇ ಈ ದಾನದ ಉದ್ದೇಶ. ಒಬ್ಬ ಮುಸ್ಲಿಮ್ ಆತನ ಈದ್ ದಿನದ ಹಗಲಿನ ಮತ್ತು ಆ ರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಕಡ್ಡಾಯವಾಗಿ ದಾನ ನೀಡಬೇಕು.
ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನ ಪಡೆಯಲು ಅರ್ಹರು. ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಕಡ್ಡಾಯವಾಗಿದೆ.
ರಮಳಾನ್ ಸಮಾಪ್ತಿ ಮತ್ತು ಶವ್ವಾಲ್ ತಿಂಗಳ ಆರಂಭದ ನಿಮಿಷಗಳಲ್ಲಿ ಫಿತ್ರ್ ಝಕಾತ್ ಕಡ್ಡಾಯವಾದವನು ಯಾವ ಊರಲ್ಲಿರುವನೋ ಆ ಊರಿನಲ್ಲಿ ಸಾಮಾನ್ಯವಾಗಿ ಅಲ್ಲಿನ ಬಡ ಜನತೆ ಸ್ವೀಕರಿಸಿರುವ ಮುಖ್ಯ ಆಹಾರ ಧಾನ್ಯವನ್ನೇ ಫಿತ್ರ್ ಝಕಾತ್ ಆಗಿ ನೀಡಬೇಕು.
ಬಡವರು , ಮತ್ತು ದರಿದ್ರರು , ಸಾಲದಿಂದ ಕಂಗಾಲಾದವರು, ಯೋಧರು, ಪ್ರಯಾಣಿಕರು ಎಲ್ಲರೂ ಝಕಾತ್ ಅಥವಾ ದಾನ ಪಡೆಯಲು ಅರ್ಹರಾಗಿರುತ್ತಾರೆ.
ಹಣ ನೀಡುವ ಸಂಪ್ರದಾಯ
ಹಬ್ಬದ ದಿನ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಝ್ ನಿರ್ವಹಿಸ್ತಾರೆ. ನಮಾಝ್ ಬಳಿಕ ಸಾಮೂಹಿಕ ಪ್ರಾರ್ಥನೆಯೂ ಸಂಪನ್ನಗೊಳ್ಳುತ್ತದೆ. ಹೀಗಾಗಿ ಈ ದಿವಸ ಬಹುತೇಕ ಎಲ್ಲ ಮಸೀದಿಗಳಲ್ಲೂ ಜನಜಂಗುಳಿ ಇರುತ್ತದೆ.
ಶಾಂತಿ ಸಂದೇಶ ಸಾರುವ ವಿಶ್ವ ಭ್ರಾತೃತ್ವದ ಸಂಕೇತವಾದ ಈ ಹಬ್ಬದ ಸಂದರ್ಭ ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ವಿಶೇಷವಾಗಿ ಮುಸ್ಲಿಮರ ದೊಡ್ಡ ಹಬ್ಬ ಬಂತು ಅಂದ್ರೆ ಮಕ್ಕಳು ವಿಶೇಷ ರೀತಿಯಲ್ಲಿ ಸಂಭ್ರಮಿಸ್ತಾರೆ.
ಇದಕ್ಕೆ ಕಾರಣ ನಗದು ರೂಪದಲ್ಲಿ ಮಕ್ಕಳಿಗೆ ಸಿಗುವ ದಾನ. ಹೌದು, ಪೆರ್ನಾಳ್ ಎಂದು ಕರೆಸಿಕೊಳ್ಳುವ ಈ ಹಬ್ಬದಂದು ಹಿರಿಯರು ಕಿರಿಯರಿಗೆ ಹಣ ನೀಡುವ ಸಂಪ್ರದಾಯವೂ ಇದೆ. ಹಾಗಂತ ಕಿರಿಯರು ಹಿರಿಯರಿಗೆ ಕೊಡಬಾರದೆಂದೇನಿಲ್ಲ.
ಇದಕ್ಕೆ ವಯಸ್ಸಿನ ಭೇದ ಇಲ್ಲ. ಆದರೆ ಸಾಮಾನ್ಯವಾಗಿ ಮಕ್ಕಳಿಗೆ ದೊಡ್ಡವರು ಹಣ ನೀಡುವ ಪದ್ಧತಿ ಇದೆ. ಹೀಗಾಗಿ ಈದುಲ್ ಫಿತರ್ ದಿನ ಮಕ್ಕಳು ಗರಿಗರಿ ನೋಟು ಹಿಡಿದು ಕುಣಿಯುತ್ತಾರೆ.
ಬಂಧು, ಮಿತ್ರರ ಮನೆಗಳಿಗೆ ತೆರಳುತ್ತಾರೆ
ಬೆಳಗಿನ ಹೊತ್ತು ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಂ ಬಾಂಧವರಿಂದು ಬಂಧು ಮಿತ್ರರ ಮನೆಗಳಿಗೆ ತೆರಳುವುದು ವಾಡಿಕೆ. ಬಂಧು ಮಿತ್ರರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸುವಂತೆ ಕೋರಿಕೊಳ್ಳುತ್ತಾರೆ.
ಹಾಗಂತ ಇದು ಮುಸಲ್ಮಾನ ಬಾಂಧವರಿಗೇ ಮೀಸಲಾದ ಹಬ್ಬ ಅಲ್ಲ. ಹಿಂದೂ, ಕ್ರಿಶ್ಚಿಯನ್ ಬಾಂಧವರನ್ನೂ ಮನೆಗೆ ಕರೆಯಲಾಗುತ್ತೆ. ನೆರೆಹೊರೆಯವರಿಗೂ ಬಿರಿಯಾನಿ ಹಂಚಿ , ಸಿಹಿ ಕೊಟ್ಟು ಸತ್ಕರಿಸುವ ಪದ್ಧತಿ ಎಲ್ಲೆಡೆ ನಡೆದುಕೊಂಡು ಬಂದಿದೆ. ಒಟ್ಟಾರೆ ಶಾಂತಿ, ಸೌಹಾರ್ದತೆ ಮತ್ತು ವಿಶ್ವ ಭ್ರಾತೃತ್ವವನ್ನು ಜಗತ್ತಿಗೆ ಸಾರುತ್ತದೆ ಈದುಲ್ ಫಿತರ್ ಹಬ್ಬ.