ಉಡುಪಿಯಲ್ಲಿ ವಿಟ್ಲಪಿಂಡಿ ಪ್ರಯುಕ್ತ ಮೊಸರು ಕುಡಿಕೆಗೆ ಚಾಲನೆ
ಉಡುಪಿ, ಸೆಪ್ಟೆಂಬರ್ 14 : ಇಂದು (ಸೆ.14) ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಿದಿಯೂರು ಕೆ.ಉದಯ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಮುಂಬೈಯ ಅಲಾರೆ ಗೋವಿಂದ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಬಾಲಮಿತ್ರ ವ್ಯಾಯಾಮ ಶಾಲೆಯ ಪುರುಷರ ತಂಡದಿಂದ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಉಡುಪಿಯಲ್ಲಿ ನಡೆಯುವ ಮೊಸರು ಕುಡಿಕೆಗೆ ವಿಠಲನ ಪಿಂಡಿ ಎಂದು ಹೆಸರು. ಕೃಷ್ಣನ ರಥಬೀದಿಯಲ್ಲಿ ಜನಸಾಗರ ತುಂಬಿ ತುಳುಕುವ ನಡುವೆ ಎತ್ತರದ ಮರಗಳಿಗೆ ಕಟ್ಟಿದ ಮಡಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವ ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ದಕ್ಷಿಣ ಕನ್ನಡದ ಮೊಸರು ಕುಡಿಕೆ ಉಡುಪಿ ಪ್ರಭಾವಿತವೇ ಆದರೂ ವಿಭಿನ್ನ.

ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಠದ ರಾಜಾಂಗಣದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಜಾಂಗಣ ಪಾರ್ಕಿಂಗ್ ನಲ್ಲಿ ಕ್ರೇನ್ ಮೂಲಕ ಸುಮಾರು 20 ಅಡಿ ಎತ್ತರದಲ್ಲಿ ಮೊಸರು ತುಂಬಿದ ಮಡಕೆಯನ್ನು ಇರಿಸಲಾಗಿತ್ತು. ಇದನ್ನು ಬಾಲಮಿತ್ರ ವ್ಯಾಯಾಮ ಶಾಲೆಯ ಪುರುಷರ ತಂಡ ಮಾನವ ಪಿರಮಿಡ್ ರಚಿಸಿ ಒಡೆಯಿತು. ಎರಡು ಬಾರಿ ಪ್ರಯತ್ನಿಸಿದ ತಂಡ ಮೂರನೆ ಬಾರಿಯ ಯತ್ನದಲ್ಲಿ ಯಶಸ್ವಿ ಸಾಧಿಸಿತು. ಈ ವಿಶಿಷ್ಟ ಮೊಸರು ಕುಡಿಕೆ ವೀಕ್ಷಿಸಿ ಜನಸ್ತೋಮವೇ ನೆರೆದಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಅನ್ನದಾನ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಯ ಸೇವೆ. ವಿವಿಧ ರೀತಿಯ ಸೇವೆಯಿಂದ ಭಗವಂತನಿಗೆ ತೃಪ್ತಿ ದೊರೆಯಲಿದೆ.
ಇದರಿಂದ ಲೋಕ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದರು.












Click it and Unblock the Notifications