ಕನಕ ಜಯಂತಿ:ಉಡುಪಿಯಲ್ಲಿ ಒಂದಾದ ಮಾಧ್ವ, ಕುರುಬ ಶ್ರೀಗಳು
ಉಡುಪಿ/ ಬೆಂಗಳೂರು, ನ 21: ಹನ್ನರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾಧ್ವ ಮತ್ತು ಕುರುಬ ಸಂಪ್ರದಾಯದ ಮೂಲಕ ಉಡುಪಿ ರಥಬೀದಿಯಲ್ಲಿರುವ ಶ್ರೀಕೃಷ್ಣನ ಪರಮಭಕ್ತ ಕನಕದಾಸನ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಗಿದೆ.
ಬುಧವಾರ (ನ 19) ಕನಕ ಜಯಂತಿ ಸಂಬಂಧ ಪೇಜಾವರ ಸ್ವಾಮೀಜಿಗಳ ಸಮ್ಮುಖದಲ್ಲಿ ಪರ್ಯಾಯ ಸೋದೆ ಶ್ರೀಗಳ ಜೊತೆ ಕಾಗಿನೆಲೆ ಶಾಖಾ ಮಠದ ಶ್ರೀಗಳು ರಥಬೀದಿಗೆ ಪ್ರದಕ್ಷಿಣೆ ಮಾಡಿ ಕನಕನಿಗೆ ಪೂಜೆ ಸಲ್ಲಿಸಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು.
ಇದಕ್ಕೂ ಮುನ್ನ ಹಾವೇರಿಯ ಕಾಗಿನೆಲೆ ಮಠದಿಂದ ಉಡುಪಿಗೆ ಬಂದ 'ಕನಕ ಸದ್ಭಾವನಾ ಜ್ಯೋತಿ' ರಥಯಾತ್ರೆಯನ್ನು ಜೋಡುಕಟ್ಟೆ ವೃತ್ತದಿಂದ ಭವ್ಯ ಮೆರವಣಿಗೆಯ ಮೂಲಕ ರಥಬೀದಿಗೆ ಸ್ವಾಗತಿಸಲಾಯಿತು. ಶ್ರೀಕೃಷ್ಣನ ದರ್ಶನ ಪಡೆದ ಕಾಗಿನೆಲೆ ಮಠದ ಶ್ರೀಗಳಿಗೆ ಪೇಜಾವರ ಶ್ರೀಗಳು ಹಾರ ಹಾಕಿ ಸನ್ಮಾನಿಸಿ ಮಂತ್ರಾಕ್ಷತೆ ನೀಡಿದರು.
ಇದಾದ ನಂತರ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಕನಕ ಶ್ರೀಕೃಷ್ಣನ ಪರಮಭಕ್ತ. ಪ್ರತಿದಿನ ಕನಕನಿಗೆ ನೈವೇದ್ಯ ಸಮರ್ಪಣೆ ಮಾಡುವ ಕ್ರಮವಿದೆ. ಅವಕಾಶವಾದಿಗಳು ಮತ್ತು ಪ್ರಚಾರಪ್ರಿಯರು ಇಲ್ಲಸಲ್ಲದ ಆರೋಪಗಳನ್ನು ಅಷ್ಠಮಠದ ಮೇಲೆ ಮಾಡಿ ಪ್ರಚಾರಗಿಟ್ಟಿಸಿ ಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತ ಪಡಿಸಿದರು.
ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿಗಳು ಮಾತನಾಡಿ, ಉಡುಪಿಯಲ್ಲಿ ಕನಕನಿಗೆ ಸರಿಯಾಗಿ ಪೂಜೆ ಸಲ್ಲಿಸಲಾಗುತ್ತಿದೆ. ಇದರಲ್ಲಿ ಯಾವುದೇ ಅಪಚಾರ ನಡೆಯುತ್ತಿಲ್ಲ. ಕನಕನಿಗೆ ನಡೆಯುವ ಪೂಜಾ ಕ್ರಮವನ್ನು ಹಿರಿಯರಾದ ಪೇಜಾವರ ಶ್ರೀಗಳು ವಿವರಿಸಿದ್ದಾರೆ. ಇದು ನಮಗೆ ಸಂತೋಷ ತಂದಿದೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಡುಪಿ ಮತ್ತು ಪೇಜಾವರ ಶ್ರೀಗಳು ಹಲವಾರು ಕಾರಣಗಳಿಂದ ಚರ್ಚೆಯ ವಿಷಯವಾಗಿತ್ತಿರುವುದರಿಂದ 'ಕನಕ ಜಯಂತಿ' ಸಂಬಂಧ ರಥಬೀದಿ ಆವರಣದಲ್ಲಿರುವ ಅಷ್ಠ ಮಠಗಳಿಗೆ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ನಿಡುಮಾಮಿಡಿ ಶ್ರೀಗಳಿಗೆ ತೊಂದರೆಯಾದರೆ ರಕ್ತಪಾತವಾಗುತ್ತದೆ. ಎಚ್ಚರ. ಮುಂದೆ ಓದಿ..

ಸಿದ್ದರಾಮಯ್ಯ
ಕುರುಬ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಸಿಎಂ ಆದ ನಂತರ ಕನಕ ಜಯಂತಿ ಉತ್ಸವ ಬರುತ್ತಿರುವುದರಿಂದ ಈ ಬಾರಿಯ ಕನಕ ಜಯಂತಿಗೆ ವಿಶೇಷ ಮಹತ್ವ ಎಂದೇ ಕಲ್ಪಿಸಲಾಗಿತ್ತು. ಕುರುಬ ಸಮುದಾಯಕ್ಕೆ ಏನಾದರೂ ಪ್ಯಾಕೇಜ್ ಘೋಷಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಸಿದ್ದು, ದಾಸ ಸಾಹಿತ್ಯದ ಮರುಮುದ್ರಣ ಮಾಡಲು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಗೆ ಆದೇಶ ನೀಡಿದ್ದೇನೆ ಎಂದಷ್ಟೇ ಪ್ರಕಟಿಸಿದ್ದಾರೆ.

ಕನಕಶ್ರೀ ಪ್ರಶಸ್ತಿ
ದಾಸ ಸಾಹಿತ್ಯ ಪ್ರಚಾರಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಡಾ.ಕೃಷ್ಣ ಕೊಲ್ಹಾರ ಕುಲ್ಕರ್ಣಿ ಮತ್ತು ಚಿಕ್ಕಣ್ಣ ಅವರಿಗೆ 2012ರ 'ಕನಕ ಶ್ರೀ' ಪ್ರಶಸ್ತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದ್ದಾರೆ.

ಸಿದ್ದರಾಮಯ್ಯ ಬೇಸರ
ಬೆಂಗಳೂರಿನಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಮೂಢನಂಭಿಕೆ ನಿಷೇಧ ಮಸೂದೆ ಜಾರಿಯ ವಿರುದ್ದ ಮಾತನಾಡುವವರು ನಿಜವಾದ ಕೋಮುವಾದಿಗಳು. ಜನರ ಮೌಢ್ಯವನ್ನು ದೂರ ಮಾಡಲು ಮುಂದಾದರೆ ಅದನ್ನು ಟೀಕಿಸುವವರು ಸಮಾಜದ ನಿಜವಾದ ಶತ್ರುಗಳು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನಿಡುಮಾಮಿಡಿ
ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ವಿರುದ್ದ ನಾನು ಧ್ವನಿ ಎತ್ತಿದೆ. ಅದಕ್ಕೆ ಈಗ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಮ್ಮ ಸ್ವಾಮೀಜಿಗಳ ಜೊತೆ ಸಾವಿರಾರು ಜನರಿದ್ದಾರೆ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ, ಮಠದ ಗೋಡೆಯ ಮೇಲೆ ಬೆದರಿಕೆ ಸಂದೇಶ ಬರೆದಿದ್ದಾರೆ. ನಾನು ಇದಕ್ಕೆ ಭಯ ಪಡುವವನಲ್ಲ. ರಂಭಾಪುರಿ ಶ್ರೀಗಳು ಅಡ್ಡಪಲ್ಲಕ್ಕಿ ಉತ್ಸವ ತ್ಯಜಿಸಿದರೆ ನಾನು ಅವರಲ್ಲಿ ಕ್ಷಮೆ ಕೇಳಲು ಸಿದ್ದ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ರಕ್ತಪಾತ
ಅಡ್ಡಪಲ್ಲಕ್ಕಿ ಮತ್ತು ಮೂಢನಂಬಿಕೆ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡಿದ್ದಕ್ಕೆ ನಿಡುಮಾಮಿಡಿ ಶ್ರೀಗಳನ್ನು ಮುಗಿಸುವ ಕರೆಗಳು ಬರುತ್ತಿವೆ. ಅವರಿಗೆ ಏನಾದರೂ ತೊಂದರೆಯಾದಲ್ಲಿ ರಕ್ತಪಾತವಾಗಲಿದೆ ಎಂದು ನಿಡುಮಾಮಿಡಿ ಆಪ್ತರು ಮತ್ತು ಭಕ್ತಾದಿಗಳು ಎಚ್ಚರಿಸಿದ್ದಾರೆ.












Click it and Unblock the Notifications