ಎಳ್ಳಮಾವಾಸ್ಯೆ ಅಚರಣೆ, ಅಗಲಿದ ಹಿರಿಯರ ಆತ್ಮಶಾಂತಿಗೆ ಪ್ರಾರ್ಥನೆ
ಉಡುಪಿ, ಡಿಸೆಂಬರ್ 29: ಆಗಷ್ಟೇ ಮೂಡಿಬಂದ ನೇಸರ, ಕಡಲ ತೀರದಲ್ಲಿ ಕಿಕ್ಕಿರಿದ ಜನಸಾಗರ, ಸೂರ್ಯ ದೇವನಿಗೆ ಭಕ್ತಿಯ ನಮಸ್ಕಾರ, ಚುಮು ಚುಮು ಚಳಿಯಲ್ಲೂ ಪವಿತ್ರ ಸ್ನಾನ. ಗುರುವಾರ ಎಳ್ಳಮಾವಾಸ್ಯೆ , ಹೀಗಾಗಿ ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಸಾವಿರಾರು ಜನ ಸೇರಿದ್ದರು. ಅಗಲಿದ ಹಿರಿಯರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪಿಂಡ ಪ್ರದಾನ ಮಾಡಿದರು.
ಸಮುದ್ರ ತೀರದಲ್ಲಿ ಜಾತಿ ಭೇದವಿಲದೆ ಸಾವಿರಾರು ಜನರು ಸೇರಿದ್ದರು. ಮನೆಯಲ್ಲಿ ಯಾರಾದ್ರೂ ಸಾವನ್ನಪ್ಪಿದಾಗ ಅವರಿಗೆ ಪಿಂಡ ಸಮರ್ಪಣೆ ಮಾಡದಿದ್ದ ಪಕ್ಷದಿದ್ದಲ್ಲಿ ಎಳ್ಳಮಾವಾಸ್ಯೆಯಂದು ಪಿಂಡ ಸಮರ್ಪಣೆ ಮಾಡಿದರೆ ಮೋಕ್ಷ ಪ್ರಾಪ್ತಿ ಆಗುತ್ತದೆ ಎಂಬುದು ಜನರ ನಂಬಿಕೆ. ಇನ್ನು ಸಮುದ್ರ ಸ್ನಾನ ಮಾಡಿದರೆ ಚರ್ಮ ರೋಗ ಗುಣವಾಗುತ್ತದೆ ಎಂಬುದು ಕೂಡ ನಂಬಿಕೆ.[ಮೂಢನಂಬಿಕೆ ನಿಷೇಧಿಸುವ ಧೈರ್ಯ ಸಿಎಂಗಿಲ್ಲ: ಪೇಜಾವರ ಶ್ರೀ]

ಎಳ್ಳಮಾವಾಸ್ಯೆ ಪ್ರಯುಕ್ತ ಗುರುವಾರ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿಯ ಕಡಲ ತೀರದಲ್ಲಿ ಆಸ್ತಿಕರು ಸಾವಿರಾರು ಸಂಖ್ಯೆಯಲ್ಲಿ ತೀರ್ಥ ಸ್ನಾನ ಮಾಡಿ, ಹೋಮ ಹವನದಲ್ಲಿ ಪಾಲ್ಗೊಂಡರು. ಉಡುಪಿಯ ಮಲ್ಪೆ ಕಡಲತೀರದಲ್ಲಿ ಬೆಳ್ಳಂ ಬೆಳಗ್ಗೆ ಚುಮು ಚುಮು ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಂದಿ ಸಮುದ್ರಕ್ಕೆ ಇಳಿದು ಸ್ನಾನ ಮಾಡಿದ್ದರು.[ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಪರಿಕ್ಕರ್]

ಆ ಬಳಿಕ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಮೂಲಕ ಹಿರಿಯರ ಆತ್ಮ ಶಾಂತಿಗಾಗಿ ಪ್ರಾರ್ಥಿಸಿದರು. ರೈತರು ಭೂದೇವಿಗೆ ನಮಿಸುತ್ತಾ ಕಡಲ ತೀರದ ಬಳಿಯ ಒಡಬಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮಲ್ಪೆ ಸಮುದ್ರ ತೀರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.












Click it and Unblock the Notifications