Property: ಬೆಂಗಳೂರು-ತುಮಕೂರು ಮೆಟ್ರೋ ಲೈನ್; ಮುಂದಿನ ರಿಯಲ್ ಎಸ್ಟೇಟ್ ಹಾಟ್ಸ್ಪಾಟ್ ಇದೇನಾ?
ಬೆಂಗಳೂರು: ಬೆಂಗಳೂರು ಮೆಟ್ರೋ ತುಮಕೂರುವರೆಗೂ ವಿಸ್ತರಿಸಲು ಎಲ್ಲ ಸಿದ್ಧತೆ ನಡೆದಿದೆ. ಡಿಪಿಆರ್ ಸಹ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. ಮುಂದಿನ ದಿನಗಳಲ್ಲಿ ಅನುಮೋದನೆ ಆಗುತ್ತಿದ್ದಂತೆ ಯೋಜನೆಗೆ ಮತ್ತಷ್ಟು ವೇಗ ಸಿಗಲಿದೆ. ಸದ್ಯ ಬಂಡವಾಳ ಹೂಡಿಕೆದಾರರ ಕಣ್ಣು ತುಮಕೂರು ರಸ್ತೆ ಅಕ್ಕಪಕ್ಕ ರಿಯಲ್ ಎಸ್ಟೇಟ್ ಮೇಲೆ ಬಿದ್ದಿದೆ. ಮೆಟ್ರೋ ಲೈನ್ ಸುತ್ತಮುತ್ತಲಿನ ಭೂಮಿಗಳಿಗೆ, ಮನೆ ಬಾಡಿಗೆ ದರ ಮತ್ತಷ್ಟು ಹೆಚ್ಚಾಗಲಿದೆ. ಭೂಮಿಗೆ ಬಂಗಾರದ ಬೆಲೆ ಬರಲಿದ್ದು, ಆಸ್ತಿ ಮಾಲೀಕರಿಗೆ ಬಂಪರ್ ಲಾಟರಿ ಹೊಡೆಯಲಿದ್ದಾರೆ.
ಯಶವಂತಪುರ, ದಾಸರಹಳ್ಳಿ, ಪೀಣ್ಯ, ನೆಲಮಂಗಲ ಮಾರ್ಗವಾಗಿ ಮಾದನಾಯಕನಹಳ್ಳಿ, ಕ್ಯಾತಸಂದ್ರ ಮೂಲಕ ತುಮಕೂರುವರೆಗೆ ಮೆಟ್ರೋ ಮಾರ್ಗ ತಲೆ ಎತ್ತಲಿದೆ. ಇಲ್ಲಿ ಪ್ರತಿ ಚದರ ಅಡಿಗೆ ಭೂಮಿ ಬೆಲೆ ಕನಿಷ್ಠ 3000 ರೂಪಾಯಿಯಿಂದ 10,000 ರೂಪಾಯಿವರೆಗೆ ಬೆಲೆ ಇದೆ.

ಮುಂದೆ ಏರಿಕೆ ಆಗಲಿದೆ ಹಾಲಿ ಆಸ್ತಿ ಮೌಲ್ಯ, ಈಗ ಎಷ್ಟಿದೆ
ಯಶವಂತಪುರ ಸುತ್ತಮುತ್ತ ಪ್ರತಿ ಚದರ ಅಡಿ ಜಾಗಕ್ಕೆ 5000 ರಿಂದ 7000 ಅಡಿವರೆಗೆ ಇದೆ. ಕೆಲವೆಡೆ ಇದಕ್ಕೂ ಹೆಚ್ಚಿರಬಹುದು. ನಾಗಸಂದ್ರ ಮತ್ತು ಜಾಲಹಳ್ಳಿ ಸುತ್ತಮುತ್ತ ಇದೇ ಚದರ ಅಡಿ ಜಾಗಕ್ಕೆ 4500 ರೂ.ನಿಂದ 6,500 ರೂ. ದರ ನಿಗದಿ ಆಗಿದೆ. ಇನ್ನೂ ಪ್ರೀಮಿಯಂ ಟೌನ್ ಶಿಪ್ (ಪ್ರೆಸ್ಟೀಜ್ ಜಿಂದಾಲ್ ಸಿಟಿ) ನಲ್ಲಿ ಬರೋಬ್ಬರಿ 12,000-13,500 ರೂಪಾಯಿ ಇದೆ. ಸಮುದ್ರ ಅಭಿವೃದ್ಧಿ ಎದುರು ನೋಡುತ್ತಿರುವ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಚದರ ಅಡಿ ಜಾಗಕ್ಕೆ 3000-7000 ರೂಪಾಯಿ ಇದೆ.
ಉದ್ದೇಶಿತ ಮೆಟ್ರೋ ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ
ಸಾಮಾನ್ಯವಾಗಿ ಮೆಟ್ರೋ ಯೋಜನೆ, ಇನ್ನಿತರ ಸರ್ಕಾರಿ ಯೋಜನೆಗಳು ಜಾರಿಯಾದರೆ, ಘೋಷಣೆ ಆದಲ್ಲಿ ಅಥವಾ ಅಭಿವೃದ್ಧಿ ಪ್ರಸ್ತಾಪವಾಗುತ್ತಿದ್ದಂತೆ ಆ ಭಾಗದಲ್ಲಿ ಆಸ್ತಿಗಳ ಬೆಲೆಗಳು ಗಗನಕ್ಕೇರುತ್ತವೆ. ರಿಯಲ್ ಎಸ್ಟೇಟ್ ವಲಯ ವಿಸ್ತರಣೆಗೆ ಅಣಿಯಾಗಿಬಿಡುತ್ತದೆ. ಅದೇ ರೀತಿ ಮಾದಾವರದಿಂದ ತುಮಕೂರುವರೆಗೆ ಮೆಟ್ರೋ ಯೋಜನೆ ಜಾರಿ ಹೊತ್ತಿಗೆ ಈ ಮೇಲಿನ ಆಸ್ತಿ ದರಗಳು ಮತ್ತಷ್ಟು ಏರಿಕೆ ಆಗಲಿವೆ. ಅದರಲ್ಲೂ ಮೆಟ್ರೋ ಮಾರ್ಗ, ನಿಲ್ದಾಣದ 500 ಮೀಟರ್ ವ್ಯಾಪ್ತಿಯಲ್ಲಿ ಆಸ್ತಿ ಇರುವ ಮಾಲೀಕರನ್ನು ಕೋಟ್ಯಾಧೀಶರು ಅಂದರೂ ತಪ್ಪಾಗಲಾರದು. ಅಂತಹ ಬೆಳವಣಿಗೆ ಕೆಲವೇ ದಿನಗಳಲ್ಲಿ ಆಗುವ ಲಕ್ಷಣಗಳು ಎದ್ದು ಕಾಣುತ್ತಿವೆ.
ಇನ್ನೂ ಬೆಂಗಳೂರು ಹೊರ ಭಾಗದ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಹಾಲಿ ಒಂದು ಚದರ ಅಡಿ ಜಾಗಕ್ಕೆ 3000-6000 ರೂಪಾಯಿ ಇದೆ. ಇನ್ನೂ ಮೆಟ್ರೋ ಹತ್ತಿರದ ಅಭಿವೃದ್ಧಿ ನೂತನ ಬಡಾವಣೆಗಳಲ್ಲಿ ಪ್ರತಿ ಚದರ ಮಿಟರ್ ಜಾಗಕ್ಕೆ 7000-13000 ರೂಪಾಯಿ ದರ ನಿಗದಿ ಮಾಡಲಾಗಿದೆ. ಕೇವಲ ಆಸ್ತಿ ಮೌಲ್ಯಗಳು ಮಾತ್ರವಲ್ಲದೇ ಮನೆ ಬಾಡಿಗೆಗಳು ಏರಿಕೆ ಆಗಲಿವೆ. ಕಾರಣ ನಗರ ಒಳಗೆ ಟ್ರಾಫಿಕ್ನಲ್ಲಿ ಸಂಚರಿಸಿ ಪರದಡಿರುವ ಅದೆಷ್ಟೋ ಮಂದಿ ಊರಿಗೆ ತೆರಳುವಾಗ ಸಂಕಷ್ಟ ಅನುಭವಿಸುತ್ತಾರೆ. ಹಾಗಾಗಿ ಅವರು ಬೆಂಗಳೂರು ತುಮಕೂರು ಮಾರ್ಗದಲ್ಲಿ ಮನೆ ಮಾಡಿದರೆ ನಗರಕ್ಕೆ ಬರಲು ಮತ್ತು ದಾವಣಗೆರೆ, ಚಿತ್ರದುರ್ಗದ ಕಡೆಗೆ ತೆರಳಲು ಅನುಕೂಲವಾಗುತ್ತದೆ. ಅದರೆ ಅವರು ಬಾಡಿಗೆ ಏರಿಕೆ ಬಿಸಿ ಅನುಭವಿಸಬೇಕಾಗಬಹುದು.
ಸರ್ಕಾರ ನಮ್ಮ ಮೆಟ್ರೋ ತುಮಕೂರುವರೆಗೆ (59ಕಿಮೀ) ವಿಸ್ತರಣೆ ಮಾಡುವ ಯೋಜನೆಯ ಡಿಪಿಆರ್ ಸ್ವೀಕರಿಸಿದೆ. ಇದರಲ್ಲಿ ಯಾವೆಲ್ಲ ಅಂಶಗಳನ್ನು ಅನುಷ್ಠಾನಕ್ಕೆ ಶಿಫಾರಸು ಮಾಡಬೇಕೆಂದು ಸರ್ಕಾರ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಿದೆ. ಬಳಿಕ ಕೆಂದ್ರ ಸರ್ಕಾರ ಅನುಮೋದನೆ, ಟೆಂಡರ್ ಪ್ರಕ್ರಿಯೆ, ಭೂಸ್ವಾಧೀನ ಕೆಲಸಗಳು ನಡೆಯಲಿವೆ. ಒಟ್ಟಾರೆ ಈ ಮಾರ್ಗವು ಪ್ರಯಾಣಿಕರಿಗೆ ಮಾತ್ರವಲ್ಲದೇ ಆಸ್ತಿ ಮಾಲೀಕರಿಗೂ ವರದಾನ ಆಗಲಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಲಿವೆ.














Click it and Unblock the Notifications