Sachin Tendulkar: ಶಹಬ್ಬಾಸ್ ಮಗನೇ.. ಪುತ್ರ ಅರ್ಜುನ್ ತೆಂಡೂಲ್ಕರ್ ಆಟಕ್ಕೆ ಕ್ರಿಕೆಟ್ ದೇವರು ಸಚಿನ್ ವಿಶೇಷ ಮೆಚ್ಚುಗೆಯ ಸಂದೇಶ
Sachin Tendulkar: ಏಕನಾ ಕ್ರೀಡಾಂಗಣದಲ್ಲಿ ಶನಿವಾರ (ಮೇ 23) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಈ ಹಿನ್ನೆಲೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪುತ್ರ ಅರ್ಜುನ್ಗೆ ವಿಶೇಷ ಸಂದೇಶವನ್ನು ಕಳುಹಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋತರೂ ಸಹ ಅರ್ಜುನ್ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದರು. ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ ಅವರ ಪ್ರಮುಖ ವಿಕೆಟ್ ಪಡೆಯುವಲ್ಲಿ ಅವರು ಯಶಸ್ವಿಯಾದರು. ತಮ್ಮ 4 ಓವರ್ಗಳ ಕೋಟಾದಲ್ಲಿ 36 ರನ್ ನೀಡಿ 1 ವಿಕೆಟ್ ಪಡೆದು ಸಂಭ್ರಮಿಸಿ ಗಮನ ಸೆಳೆದರು.

ಮಗ ಅರ್ಜುನ್ ಆಟಕ್ಕೆ ಅಪ್ಪ ಸಚಿನ್ ಮೆಚ್ಚುಗೆ
ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ಪುತ್ರನ ತಾಳ್ಮೆ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ. 'ಅಭಿನಂದನೆಗಳು ಅರ್ಜುನ್. ಈ ಇಡೀ ಸೀಸನ್ನಲ್ಲಿ ನೀನು ನಿನ್ನನ್ನು ನಡೆಸಿಕೊಂಡ ರೀತಿ ಹೆಮ್ಮೆ ತಂದಿದೆ. ನಿನ್ನ ಸಾಮರ್ಥ್ಯದ ಮೇಲೆ ಸದಾ ವಿಶ್ವಾಸವಿಟ್ಟು ತಾಳ್ಮೆಯಿಂದ, ಕಠಿಣ ಪರಿಶ್ರಮ ಪಡುತ್ತಾ ಹಾಗೂ ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ಸಕಾರಾತ್ಮಕವಾಗಿ ಇದ್ದದ್ದಕ್ಕಾಗಿ ನಿನಗೆ ಅಭಿನಂದನೆಗಳು,' ಎಂದು ಬರೆದುಕೊಂಡಿದ್ದಾರೆ. ಇದು ಇದೀಗ ಸಖತ್ ವೈರಲ್ ಆಗುತ್ತಿದೆ.
ಅರ್ಜುನ್ಗೆ ತಾಳ್ಮೆಯ ಪಾಠ
'ಕ್ರಿಕೆಟ್ ಕೌಶಲವನ್ನು ಎಷ್ಟು ಪರೀಕ್ಷಿಸುತ್ತದೆಯೋ, ಅಷ್ಟೇ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಇಂದು ನೀನು ಇವೆರಡನ್ನೂ ಅದ್ಭುತವಾಗಿ ನಿಭಾಯಿಸಿದ್ದೀಯ. ಮೊದಲಿನಿಂದಲೂ ನೀನು ಈ ಆಟವನ್ನು ಹೇಗೆ ಪ್ರೀತಿಸುತ್ತಿದ್ದೀಯೋ ಇನ್ಮುಂದೆಯೂ ಹಾಗೆಯೇ ಪ್ರೀತಿಸುತ್ತಿರು. ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ,' ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಎಲ್ಎಸ್ಜಿ ಪರ ಮೊದಲ ಪಂದ್ಯ ಆಡಿದ ಅರ್ಜುನ್
ಐಪಿಎಲ್ 2026ರ ಪ್ಲೇಆಫ್ ರೇಸ್ನಿಂದ ಲಕ್ನೋ ಸೂಪರ್ ಜೈಂಟ್ಸ್ ಹೊರಬಿದ್ದ ನಂತರ ಅರ್ಜುನ್ ತೆಂಡೂಲ್ಕರ್ ಅವರಿಗೆ ಆ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಅವಕಾಶ ನೀಡಲಾಯಿತು. ಆ ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿ 5 ರನ್ ಗಳಿಸಿದರು. ಬೌಲಿಂಗ್ನಲ್ಲಿ ವಿಕೆಟ್ ಪಡೆದಿದ್ದಲ್ಲದೆ, ಬ್ಯಾಟಿಂಗ್ನಲ್ಲೂ ಕ್ರೀಸ್ಗೆ ಇಳಿದ ಅರ್ಜುನ್ ಅವರಿಗೆ ಇದು ಒಂದು ಕಲಿಕೆಯ ಅನುಭವವಾಗಿತ್ತು. ಲಕ್ನೋ ತಂಡಕ್ಕೆ ಈ ಸೀಸನ್ ನಿರಾಸೆ ತಂದಿದ್ದರೂ ಅರ್ಜುನ್ ಅವರ ಪದಾರ್ಪಣೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಈ ಎಡಗೈ ವೇಗಿ ಕೇವಲ 9ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರು. ಇದು ಅವರ ತಂಡದ ಇತರ ಎಲ್ಲಾ ಆಟಗಾರರಿಗಿಂತ ಕಡಿಮೆ ಇತ್ತು. ರಿಷಬ್ ಪಂತ್ ಅವರು ಅತ್ಯಂತ ಸುಲಭವಾದ ಕ್ಯಾಚ್ವೊಂದನ್ನು ಕೈಬಿಡದಿದ್ದರೆ ಅರ್ಜುನ್ ಅವರ ಮೊದಲ ಓವರ್ನಲ್ಲೇ ಪಂಜಾಬ್ ತಂಡದ ಪ್ರಭ್ಸಿಮ್ರಾನ್ ಅವರು ಔಟ್ ಆಗುತ್ತಿದ್ದರು.
ಕೊನೆಗೂ ಅರ್ಜುನ್ ತಮ್ಮ ಮೂರನೇ ಓವರ್ನಲ್ಲಿ ಯಶಸ್ಸು ಕಂಡರು. ಅದ್ಭುತ ಯಾರ್ಕರ್ ಎಸೆಯುವ ಮೂಲಕ ಪ್ರಭ್ಸಿಮ್ರಾನ್ ಅವರನ್ನು ಎಲ್ಬಿಡಬ್ಲ್ಯೂ ಬಲೆಯಲ್ಲಿ ಸಿಲುಕಿಸಿ ವಿಕೆಟ್ ಪಡೆದರು. ಐಪಿಎಲ್ 2026 ಅರ್ಜುನ್ ಅವರ ಪಾಲಿಗೆ ಅತ್ಯಂತ ಮಹತ್ವದ ಸೀಸನ್ ಆಗಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಅವರು ಬೇರೆ ಫ್ರಾಂಚೈಸಿಯಲ್ಲಿ ಆಡುತ್ತಿರುವುದು ಇದೇ ಮೊದಲು. ಐಪಿಎಲ್ 2026ರ ಹರಾಜಿಗೂ ಮುನ್ನ ಅವರನ್ನು ಮುಂಬೈ ಇಂಡಿಯನ್ಸ್ನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು.
Well done, Arjun. ❤️
— Sachin Tendulkar (@sachin_rt) May 23, 2026
Proud of the way you’ve carried yourself through this season, always believing in your ability, staying patient, working hard quietly, and remaining positive despite having to wait for your opportunity till the very last match.
Cricket tests patience as much… pic.twitter.com/3RdiGkXbfT
ಒಟ್ಟಿನಲ್ಲಿ ಹೇಳುವುದಾದರೆ ಸಚಿನ್ ತೆಂಡೂಲ್ಕರ್ ಅವರು ಮನಸು ಮಾಡಿದ್ದರೆ ಆರಂಭದಿಂದಲೇ ಅರ್ಜುನ್ಗೆ ಐಪಿಎಲ್ ಪಂದ್ಯದಲ್ಲಿ ಆಡಲು ಅವಕಾಶ ಕಲ್ಪಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ತಮ್ಮ ಮಗ ಬೆಂಚ್ ಕಾದರೂ ಪರ್ವಾಗಿಲ್ಲ, ಅದರ ಅನುಭವದ ಪಡೆದುಕೊಂಡು ಶ್ರಮದಿಂದಲೇ ಮೇಲೆ ಬರಬೇಕೆಂದು ಬಯಸಿದ್ದರು. ಅದರಂತೆಯೇ ಇದೀಗ ಅರ್ಜುನ್ ಕೂಡ ಶ್ರಮಿಸಿ ಅಪ್ಪನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.












Click it and Unblock the Notifications