ಉಡುಪಿಯಲ್ಲಿ ಸೆ.10 ರಿಂದ ಕೃಷ್ಣ ಜನ್ಮಾಷ್ಟಮಿ: ಭಕ್ತರಿಗೆ ನೋ ಎಂಟ್ರಿ
ಉಡುಪಿ, ಸೆಪ್ಟೆಂಬರ್ 9: ಉಡುಪಿಯಲ್ಲಿ ಸೆಪ್ಟೆಂಬರ್ 10 ರಿಂದ ಎರಡು ದಿನಗಳ ಕಾಲ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದ್ದು, ಆದರೆ ಕೋವಿಡ್-19 ಮಾರ್ಗಸೂಚನೆಗಳನ್ನು ಪಾಲಿಸಬೇಕಾಗುತ್ತದೆ.
ಸೆ.11 ರಂದು ರಥ ಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದ್ದು, ವಿಟ್ಲಪಿಂಡಿ ಆಚರಣೆಗೆ ನೂರು ಜನ ಸೇರುವ ಅವಕಾಶವೂ ಇಲ್ಲ ಎಂದು ಉಡುಪಿ ಡಿಸಿ ಜಿ.ಜಗದೀಶ್ ಹೇಳಿದರು.
ಕೃಷ್ಣ ಮಠದ ಪರ್ಯಾಯ ಸ್ವಾಮೀಜಿ ಜೊತೆ ಮಾತನಾಡಿದ್ದೇನೆ, ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಆಚರಣೆಯಲ್ಲಿ ಸಾರ್ವಜನಿಕರಿಗೆ ಭಾಗಿಯಾಗುವ ಅವಕಾಶ ಇಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸುವುದಾಗಿ ಸ್ವಾಮೀಜಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾಂಪ್ರದಾಯಿಕ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ ನಡೆಯುತ್ತದೆ. ಕೃಷ್ಣ ಮಠಕ್ಕೆ ಬರುವ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳಿದರು.
ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಯಾವುದೇ ವೇಷಗಳಿಗೆ ಅವಕಾಶ ಇಲ್ಲವಾಗಿದ್ದು, ಮಠದ ಸಿಬ್ಬಂದಿ ಮೊಸರು ಕುಡಿಕೆಯನ್ನು ಸಾಂಪ್ರದಾಯಕವಾಗಿ ನಡೆಸುತ್ತಾರೆ. ಆದರೆ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದರು.

ಕೃಷ್ಣ ಮಠದಲ್ಲಿ ಭಕ್ತರಿಗೆ ವಿತರಿಸಲು ಲಕ್ಷ ಚಕ್ಕುಲಿ, ಉಂಡೆ!
ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಭಕ್ತರಿಗೆ ಎಲ್ಲಿಲ್ಲದ ಖುಷಿ, ಸಂಭ್ರಮ. ಆದರೆ ಕೊರೊನಾದಿಂದಾಗಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಆದರೆ ಭಕ್ತರು ನಿರಾಶರಾಗಬೇಕಿಲ್ಲ, ಭಕ್ತರಿಗಾಗಿ ಅಷ್ಟಮಿಯ ಪ್ರಸಾದ, ಉಂಡೆ, ಚಕ್ಕುಲಿ ಸಿದ್ಧಗೊಂಡಿವೆ. ಈ ಬಾರಿ ಒಂದು ಲಕ್ಷದಷ್ಟು ಉಂಡೆ, ಚಕ್ಕುಲಿ ತಯಾರಿಸಲಾಗಿದೆ. ಆದರೆ ಭಕ್ತರು ಇದನ್ನು ನೇರವಾಗಿ ಬಂದು ಪಡೆಯುವಂತಿಲ್ಲ.
ಭಕ್ತಾಧಿಗಳು ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದರಿಂದ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ಸಾಧ್ಯವಾದಷ್ಟು ಭಕ್ತಾಧಿಗಳಿಗೆ ಕೃಷ್ಣ ಪ್ರಸಾದ ವಿತರಣೆ ನಡೆಯಲಿದೆ. ಮಠದ ಸಿಬ್ಬಂದಿ ಪ್ರಸಾದ ವಿತರಿಸಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications