ಆನ್ಲೈನ್ನಲ್ಲಿ ಕೊಲ್ಲೂರು ದೇವಾಲಯದ ಸೇವೆ ಬುಕ್ ಮಾಡಿ
ಉಡುಪಿ, ಆಗಸ್ಟ್ 09 : 'ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಚಿಂತನೆ ನಡೆದಿದೆ' ಎಂದು ದೇವಾಲಯದ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ, ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕಾ ಇಲಾಖೆ ಉಪನಿರ್ದೇಶಕ ಯೋಗೇಶ್ವರ್ ಹೇಳಿದ್ದಾರೆ.
ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ಪ್ಯಾಕೇಜ್ ದರ್ಶನ ವ್ಯವಸ್ಥೆ, ವಾಸ್ತವ್ಯ, ದರ್ಶನ ಮತ್ತು ಪ್ರಸಾದ ವಿತರಣೆಗಾಗಿ ವಿಶೇಷ ಪ್ಯಾಕೇಜ್, ಆನ್ಲೈನ್ನಲ್ಲೇ ದರ್ಶನದ ದಿನಾಂಕ ನಿಗದಿ ಸೇರಿದಂತೆ ವಿವಿಧ ಸೇವೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.[ಕೊಲ್ಲೂರು ದೇವಾಲಯ ಮಂಡಳಿಗೆ ಹಿನ್ನಡೆ, ರಾಘವೇಶ್ವರ ಶ್ರೀಗಳಿಗೆ ಮುನ್ನಡೆ]
ಧರ್ಮಸ್ಥಳದಲ್ಲಿ ಸದ್ಯ ಪ್ರಸಾದ ಪ್ಯಾಕೇಜ್ ವ್ಯವಸ್ಥೆ ಇದೆ. ಕೊಲ್ಲೂರಿನಲ್ಲಿ ದೇವಾಲಯ ಭೇಟಿಯಿಂದ ಮರಳಿ ಹೋಗುವ ತನಕ ಪ್ಯಾಕೇಜ್ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ. ಪ್ಯಾಕೇಜ್ ಬುಕ್ ಮಾಡಿದವರಿಗೆ ಸೂಕ್ತವಾಗಿ ದರ್ಶನಕ್ಕೆ ಅವಕಾಶ ಸಿಗುವಂತೆ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ.[ಕೊಲ್ಲೂರು ಮೂಕಾಂಬಿಕೆ ದೇವಿಯ ಒಡವೆ ಕದ್ದ ಐವರ ಬಂಧನ]
ಸ್ವಚ್ಛತೆಗೆ ಆದ್ಯತೆ : 'ಕೊಲ್ಲೂರಿನ ದೇವಾಲಯದ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ದೇವಾಲಯದ ಪಾವಿತ್ರ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ದೇವಾಲಯದಲ್ಲಿ ನಡೆದಿರುವ ಚಿನ್ನಾಭರಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕಾಗಿ ನಡೆಯುತ್ತಿದೆ' ಎಂದು ಯೋಗೇಶ್ವರ್ ಹೇಳಿದರು.[ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]
2015ರ ಸಾಲಿನಲ್ಲಿ ಕುಂದಾಪುರದಲ್ಲಿ ಸಹಾಯಕ ಆಯುಕ್ತರಾಗಿದ್ದ ಯೋಗೇಶ್ವರ್ ಅವರು ಮೊದಲ ಬಾರಿಗೆ ಕೊಲ್ಲೂರಿನಲ್ಲಿ ಸ್ವಚ್ಚತೆಗೋಸ್ಕರ ವಿಶೇಷ ಸಭೆ ಕರೆದು ಸಂಘ ಸಂಸ್ಥೆಗಳು, ಸ್ಥಳೀಯಡಳಿತ ಸಹಕಾರದೊಂದಿಗೆ ಸ್ವಚ್ಛ ಪರಿಸರ ಅಭಿಯಾನ ಆರಂಭಿಸಿದ್ದರು.
ಈಗ ಅವರು ಕೊಲ್ಲೂರು ದೇವಳದ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು ತಮ್ಮದೇ ಚಿಂತನೆಗೆ ಮತ್ತೆ ಜೀವ ತುಂಬುವ ಪ್ರಯತ್ನ ಅವರಿಂದ ಆಗಲಿದೆ ಎಂಬ ಆಶಾವಾದ ಭಕ್ತರಲ್ಲಿ ಮೂಡಿದೆ.