Karnataka Budget 2023 Expectations: ಉಡುಪಿ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ಉಡುಪಿ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ರಾಜ್ಯ ಬಜೆಟ್ಗೆ ಕ್ಷಣಗಣನೆ ಆರಂಭವಾಗಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ರಾಜ್ಯ ಬಜೆಟ್ ಮೇಲೆ ಉಡುಪಿ ಜಿಲ್ಲೆಯ ನಿರೀಕ್ಷೆ ಸಾಕಷ್ಟಿವೆ. ಕರಾವಳಿ ಅಭಿವೃದ್ಧಿಗೆ ಒತ್ತು ಸಿಗಬೇಕೆಂಬ ಆಶಯ ಹೊಂದಿರುವ ಉಡುಪಿ ಜನರು ಉಡುಪಿಯ ಸರ್ವತೋಮುಖ ಬೆಳವಣಿಗೆಯ ಭರವಸೆಯನ್ನು ಹೊಂದಿದ್ದಾರೆ.
ಉಡುಪಿ ಜಿಲ್ಲೆಗೊಂದು ಪೊಲೀಸ್ ತರಬೇತಿ ಅಕಾಡೆಮಿ ಆಗಬೇಕು ಎಂಬ ಬೇಡಿಕೆ ಸಾಕಷ್ಟು ವರ್ಷದಿಂದಲೂ ಇದೆ. ರಾಜ್ಯ ವಿಪತ್ತು ನಿರ್ವಹಣ ಘಟಕ (ಎಸ್ಡಿಆರ್ಎಫ್) ಉಡುಪಿ ಜಿಲ್ಲೆಯಲ್ಲಿ ಆರಂಭಿಸಬೇಕು ಎಂಬ ಆಗ್ರಹ ಇದೆ. ಎಸ್ಡಿಆರ್ಎಫ್ಗೆ ಮಲ್ಪೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ ಶಾಶ್ವತ ವ್ಯವಸ್ಥೆ ಆಗಿಲ್ಲ.
ಕರಾವಳಿಯಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ಹೆಚ್ಚಿರುತ್ತದೆ. ಇದಕ್ಕೊಂದು ಶಾಶ್ವತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯೂ ಆಗಬೇಕಿದೆ ಎನ್ನುವ ಬೇಡಿಕೆ ಇದೆ.

ಶಿವಳ್ಳಿ ಕೈಗಾರಿಕೆ ಪ್ರದೇಶ, ಮೀಯಾರು, ಬೆಳಪು, ನಂದಿಕೂರು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಆಗಬೇಕು. ಕೈಗಾರಿಕೆ ಪ್ರದೇಶಗಳನ್ನು ಸಂದಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಮತ್ತು ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಬೇಕು.
ಈ ನಿಟ್ಟಿನಲ್ಲಿ ಕೈಗಾರಿಕೆಗೆ ಸಮಗ್ರ ಅಭಿವೃದ್ಧಿಗೆ ನಿರ್ಧಿಷ್ಟ ಅನುದಾನ ಮೀಸಲಿಡಬೇಕು ಎಂದು ಜನರು ರಾಜ್ಯ ಬಜೆಟ್ ಮೇಲಿನ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.
ಸಕ್ಕರೆ ಕಾರ್ಖಾನೆಗೆ ಮರುಜೀವ
ಇನ್ನು ಬೈಂದೂರಿನ ವಿಮಾನ ನಿಲ್ದಾಣದ ಪ್ರಸ್ತಾವನೆಗೆ ಜೀವ ತುಂಬಬೇಕಿದೆ. ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಮಾಡಲು ಎಲ್ಲಾ ರೀತಿಯ ವ್ಯವಸ್ಥೆಯಿದೆ, ಮೂಲ ಅನುದಾನದೊಂದಿಗೆ ಕಾಲೇಜು ಘೋಷಣೆ ಆಗಬೇಕು. ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಬೇಕು. ಮಣಿಪಾಲ, ಪಡುಬಿದ್ರಿ ಮೊದಲಾದ ಕಡೆಗಳಲ್ಲಿ ಅಗ್ನಿಶಾಮಕ ಘಟಕ ಸಹಿತ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.
ಮೀನುಗಾರಿಕೆಗೆ ಹೆಚ್ಚಿನ ಬೆಂಬಲ
ಮೀನುಗಾರಿಕೆಗೆ ಅನುಕೂಲವಾಗುವಂತೆ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ಡೀಸೆಲ್, ಸೀಮೆಎಣ್ಣೆ ಪೂರೈಕೆ ವ್ಯತ್ಯಯವಾಗದಂತೆ ನೋಡಿ ಕೊಳ್ಳುವ ಜೊತೆಗೆ ವಿವಿಧೆಡೆ ಜೆಟ್ಟಿ ನಿರ್ಮಾಣ, ಬಂದರುಗಳ ಹೂಳೆತ್ತುವುದು ಸಹಿತವಾಗಿ ಸಮಗ್ರ ಅಭಿವೃದ್ಧಿ ಮತ್ತು ಜಿಲ್ಲೆಗೊಂದು ಶೀತಲೀಕರಣ ಘಟಕಕ್ಕೆ ವಿಶೇಷ ಅನುದಾನ ಒದಗಿಸುವ ಬಗ್ಗೆಯೂ ನಿರೀಕ್ಷೆ ಹೊಂದಲಾಗಿದೆ.
ಕೃಷಿ, ತೋಟಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಸಮಗ್ರತೆಯ ಆಧಾರದಲ್ಲಿ ಕರಾವಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅದರಡಿ ಉಡುಪಿ ಜಿಲ್ಲೆಗೆ ನಿರ್ಧಿಷ್ಟ ಪ್ರಮಾಣದ ಅನುದಾನ ಮೀಸಲಿಡಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
ಉಡುಪಿ ನಗರದ ಯುಜಿಡಿ ಸಮಸ್ಯೆ ಮುಕ್ತಿಗಾಗಿ ಅನುದಾನ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೂಕ್ತವಾದ ಯುಜಿಡಿ ವ್ಯವಸ್ಥೆಯಿಲ್ಲ. 330 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಈ ಯೋಜನೆಗೆ ಒಪ್ಪಿಗೆ ಸಿಕ್ಕರೆ ಉಡುಪಿ ನಗರದ ಯುಜಿಡಿ ಸಮಸ್ಯೆಗೆ ಮುಕ್ತಿ ಸಿಗಲಿದೆ ಮತ್ತು ನದಿ ಕಲುಷಿತವಾಗುವುದು ತಪ್ಪಲಿದೆ.
ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣ ಕಾಮಗಾರಿ ಕುಂಟುತ್ತಿದೆ. ಇದರ ಜೊತೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಪಿಪಿಪಿ ಮಾದರಿ ಬದಲು ಪೂರ್ಣ ಪ್ರಮಾಣದ ಸರಕಾರ ಕಾಲೇಜು ಘೋಷಣೆ ಮಾಡಬೇಕು ಎಂಬ ಆಗ್ರಹವನ್ನು ಉಡುಪಿ ಜಿಲ್ಲೆಯ ಜನರು ಮಾಡಿದ್ದಾರೆ.












Click it and Unblock the Notifications