ಅಜ್ಜಿಯ ಸಾಹಸ; ಎಕರೆ ಜಾಗಕ್ಕೆ ಏಕಾಂಗಿಯಾಗಿ ಕಲ್ಲಿನ ಕೋಟೆ ನಿರ್ಮಾಣ
ಉಡುಪಿ, ಜನವರಿ 28; ನಮಗೆಲ್ಲಾ ಕೋಟೆ ಅಂದಾಕ್ಷಣ ನೆನಪಾಗುವುದುದ ಚಿತ್ರದುರ್ಗದ ಕಲ್ಲಿನ ಕೋಟೆ. ರಾಜರು ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಮಾಡಿದ ಗೋಡೆ, ಚೀನಾದ ಮಹಾ ಗೋಡೆ ಹೀಗೆ ಹಲವು ಕೋಟೆಗಳು ನೆನಪಾಗಾಗುತ್ತದೆ.
ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಅಜ್ಜಿ ಯೊಬ್ಬರು ಕಟ್ಟಿದ ಕಲ್ಲಿನ ಕೋಟೆ ಮಾತ್ರ ಈಗ ಸಖತ್ ಸುದ್ದಿಯಾಗುತ್ತಿದೆ. ತನ್ನ ಒಂದು ಎಕರೆ ಜಾಗದ ಸುತ್ತ ಪೃಕೃತಿ ಯಲ್ಲೇ ಸಿಗುವ ಕಲ್ಲುಗಳನ್ನು ಉಪಯೋಗಿಸಿ ಅಜ್ಜಿ ಏಕಾಂಗಿಯಾಗಿ ಯಾವ ಇಂಜಿನಿಯರ್ಗೂ ಕಡಿಮೆ ಇಲ್ಲದಂತೇ ಅದ್ಭುತವಾಗಿ ಕಲ್ಲಿನ ಕೋಟೆ ಕಟ್ಟಿದ್ದಾರೆ.
ರಾಜ ಮಹಾರಾಜರುಗಳು ತಮ್ಮ ಸಾಮ್ರಾಜ್ಯ ಉಳಿವಿಗಾಗಿ ಸಾವಿರಾರು ಸೇವಕರಿಂದ ಕೋಟೆ ಕಟ್ಟಿದರೆ ಈ ಅಜ್ಜಿ ಮಾತ್ರ ಯಾರ ಸಹಾಯವನ್ನೂ ಪಡೆಯದೇ ಏಕಾಂಗಿಯಾಗಿ ಸರ್ವಕಾಲಕ್ಕೂ ಸುಭಧ್ರವಾಗಿರುವ ಕಲ್ಲಿನ ಕೋಟೆ ಕಟ್ಟಿದ್ದಾರೆ. ಈ ವಿಸ್ಮಯಕಾರಿ ಸಾಹಸ ಮೆರೆದ ಪರಿಶ್ರಮಿ ಅಜ್ಜಿಯ ಹೆಸರು ಸುಲೋಚನಮ್ಮ.
ಸುಲೋಚನಮ್ಮ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ನಿವಾಸಿ. ಅಜ್ಜಿ ಸುಲೋಚನಮ್ಮಗೆ ಸದ್ಯ 80 ವರ್ಷ ವಯಸ್ಸಾಗಿದೆ. ಆದರೆ ಅಜ್ಜಿಯ ಜೀವನೋತ್ಸಾಹ, ಕೆಲಸದ ಮೇಲಿರುವ ತುಡಿತ, ಅಜ್ಜಿಯ ಬಳಿ ಎಂದೂ ಸೋಗದ ಉದಾಸೀನತೆಯಿಂದ ಅಜ್ಜಿ ಕಟ್ಟಿದ ಕೋಟೆ ಈಗ ಎಲ್ಲರ ಹುಬ್ಬೇರಿಸಿದೆ.

ಕಲ್ಲಿನ ಕೋಟೆ ಕಟ್ಟಲು ಆರಂಭಿಸಿದ್ದಾರೆ
ಸುಲೋಚನಮ್ಮ ಪತಿ 15 ವರ್ಷಗಳ ಹಿಂದೆ ತೀರಿ ಹೋಗಿದ್ದು, ಇಬ್ಬರು ಪುತ್ರಿ ಮತ್ತು ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಅದರಲ್ಲಿ ಓರ್ವ ಪುತ್ರ ಮೂರು ವರ್ಷಗಳ ಹಿಂದೆ ತೀರಿದ್ದಾರೆ. ಅಜ್ಜಿ ತನ್ನ ಮನೆಯ ಸುತ್ತಾ ಕೋಟೆ ಕಟ್ಟಲು ಆರಂಭಿಸಿದ್ದು ತನ್ನ ನಲ್ವತ್ತನೇ ವಯಸ್ಸಿನಲ್ಲಿ. ತನ್ನ ಮನೆಯ ಸುತ್ತಮುತ್ತಲಿನ ಜಾಗದಲ್ಲಿದ್ದ ಕಾಡು ಕಲ್ಲುಗಳನ್ನು ಹೆಕ್ಕಿ ತಂದು ತನ್ನ ಜಾಗದ ಸುತ್ತಾ ಕಲ್ಲಿನ ಕೋಟೆ ಕಟ್ಟಲು ಆರಂಭಿಸಿದ್ದಾರೆ.
ನಿರಂತರವಾಗಿ ಹಲವು ವರ್ಷಗಳ ಕಾಲ ಈ ಕಾರ್ಯವನ್ನು ಮಹಾ ತಪಸ್ಸಿನ ರೀತಿ ಮಾಡಿದ ಅಜ್ಜಿ ಸುಲೋಚನಮ್ಮ ಅವರ ಶ್ರಮದ ಫಲವಾಗಿ ಇಂದು ಒಂದು ಎಕರೆ ಜಾಗಕ್ಕೆ ಸುಭಧ್ರವಾಗಿ ಕಲ್ಲಿನ ಕೋಟೆ ಕಟ್ಟಿದ್ದಾರೆ. ಸುಮಾರು 6 ಅಡಿ ಎತ್ತರಕ್ಕೆ ಈ ಕಲ್ಲಿನ ಮಹಾಗೋಡೆಯೇ ನಿರ್ಮಾಣವಾಗಿದೆ. ಪೃಕೃತಿಯಲ್ಲಿ ಸಿಗುವ ಸಾವಿರಾರು ಕಲ್ಲುಗಳನ್ನು ತಂದು ಅಜ್ಜಿ ಕಟ್ಟಿದ ಮಹಾಗೋಡೆ ಹಲವು ಗಾಳಿ-ಮಳೆಯ ಹೊಡೆಯ ತಿಂದರೂ ಅಜ್ಜಿ ಇಟ್ಟ ಒಂದೂ ಕಲ್ಲು ಮಿಸುಕಾಡಿಲ್ಲ. ಇದು ಅಜ್ಜಿಯ ಆಲೋಚನಾ ಶಕ್ತಿ ಮತ್ತು ಕೆಲಸದ ಜಾಣ್ಮೆಗೆ ಹಿಡಿದ ಕೈಗನ್ನಡಿ ಅಂತಾ ಸ್ಥಳೀಯರು ಬಣ್ಣಿಸಿದ್ದಾರೆ.

ಕಲ್ಲುಗಳೆಂದರೆ ಅಜ್ಜಿಗೆ ಪ್ರೀತಿ
ಅಜ್ಜಿ ಸುಲೋಚನಮ್ಮಗೆ ಕಲ್ಲುಗಳಂದರೆ ಹಿಂದಿನಿಂದಲೂ ತುಂಬಾ ಪ್ರೀತಿ ಅಂತೇ. ಬಾಲ್ಯದಿಂದಲೂ ಕಾಡು ಕಲ್ಲುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಸುಲೋಚನಮ್ಮ ಎಲ್ಲಿ ಹೋದರೂ ಕಲ್ಲುಗಳನ್ನು ಮನೆಗೆ ತಂದು ಜೋಡಿಸುತ್ತಿದ್ದರು. ಅಜ್ಜಿ ತನಗೆ ಮದುವೆಯಾದ ಸಂದರ್ಭದಲ್ಲಿ ಗಂಡನ ಮನೆಯಲ್ಲಿ ಕೂಡುಕುಟುಂಬ ಇದ್ದ ಸಂದರ್ಭದಲ್ಲಿಯೂ ಕಲ್ಲುಗಳನ್ನು ತಂದು ಗೋಡೆ ನಿರ್ಮಿಸಿದ್ದರು. ಅದೇ ಹವ್ಯಾಸವನ್ನು ಮುಂದುವರಿಸಿದ ಅಜ್ಜಿ ತನ್ನ ಜಾಗ,ಮನೆಯ ಸುತ್ತಾ ಕಲ್ಲಿನ ಗೋಡೆ ನಿರ್ಮಿಸಿದ್ದಾರೆ. ಗೋಡೆಯನ್ನು ನೋಡಿದ ಪ್ರತಿಯೊಬ್ಬರು ಅಜ್ಜಿಯ ಕೆಲಸದ ಚಾಕಚಕ್ಯತೆಗೆ ಶಹಬಾಸ್ ಎಂದಿದ್ದಾರೆ. ಕಾಡು ಕಲ್ಲುಗೆ ಆಕಾರ ಇಲ್ಲದಿದ್ದರೂ ಅಜ್ಜಿಯ ಕೋಟೆಯಲ್ಲಿ ಕಾಡು ಕಲ್ಲು ಬಹಳ ಶಿಸ್ತಿನಿಂದ ಒಂದೇ ಲಯದಲ್ಲಿ ಇರೋದು ಕಂಡುಬರುತ್ತದೆ.

ಸ್ಥಳೀಯರಿಂದ ಮೆಚ್ಚುಗೆ
ಕಲ್ಲುಗಳು ಕೆಳಗೆ ಬೀಳದ ಹಾಗೆ ಕಲ್ಲುಗಳ ನಡುವೆ ಮಣ್ಣನ್ನೂ ಸೇರಿಸಿದ್ದಾರೆ. ಈಗಿನ ಕಾಲದಲ್ಲಿ ಇಂಜಿನಿಯರ್ನ ಹೈಟೆಕ್ ತಂತ್ರಜ್ಞಾನ ಜೊತೆಗಿದ್ದರೂ ಕೆಲಸ ಪೂರ್ಣವಾದಗ ಏನೋ ಒಂದು ಕೊರತೆ ಕಂಡು ಬರುತ್ತದೆ. ಆದರೆ ಅಜ್ಜಿಯ ಕಟ್ಟಿದ ಕಲ್ಲಿನ ಕೋಟೆಯಲ್ಲಿ ಹುಡುಕೋಕೂ ಒಂದೇ ಒಂದು ತಪ್ಪುಗಳಿಲ್ಲ. ಇದಕ್ಕೆಲ್ಲಾ ಅಜ್ಜಿಯ ಅಭ್ಯಾಸ ಬಲವೇ ಅನ್ನೋದು ಸ್ಥಳೀಯರು ಅಭಿಪ್ರಾಯವಾಗಿದೆ.
ತನ್ನ ಸಾಧನೆಯ ಬಗ್ಗೆ ಅಜ್ಜಿ ಸುಲೋಚನಮ್ಮ ಪ್ರತಿಕ್ರಿಯೆ ನೀಡಿದ್ದಾರೆ, "ಮನೆಯಿಂದ ಹೊರಗೆ ಹೋಗೋವಾಗ ಸಿಕ್ಕ ಕಲ್ಲುಗಳನ್ನು ಹೆಕ್ಕಿ ತಂದು ಜೋಡಿಸಿ ಕಟ್ಟುತ್ತಿದ್ದೆ. ಮೊದಲಿಗೆಲ್ಲಾ ಕಟ್ಟಿದ ಕಲ್ಲು ಸರಿಯಾಗಿ ನಿಲ್ಲದೇ ಕೆಳಗೆ ಬೀಳುತಿತ್ತು. ಮತ್ತೆ ಮತ್ತೆ ಪ್ರಯತ್ನ ಮಾಡಿದೆ. ಕಲ್ಲು ನಿಲ್ಲೋಕೆ ಆರಂಭಿಸಿತು. ಹೀಗೆ ಖುಷಿಯಿಂದ ನಿರ್ಮಿಸಿದ ಕಲ್ಲಿನ ಗೋಡೆ ಈಗ ಬೇಲಿಯೇ ಆಗಿದೆ. ಆರು ಅಡಿ ಎತ್ತರದ ಕಲ್ಲಿನ ಗೋಡೆ ನಿರ್ಮಿಸಲು ಭೌಗೋಳಿಕವಾಗಿ ಸಾಕಷ್ಟು ಸಮಸ್ಯೆ ಉಂಟಾಯಿತು. ಆದರೆ ಪ್ರಯತ್ನದ ಫಲವಾಗಿ ಇದೆಲ್ಲಾ ಸಾಧ್ಯವಾಯಿತು" ಅಂತಾ ಹೇಳಿದ್ದಾರೆ.

ಮಳೆ ನೀರು ಹೊರ ಹೋಗಲೂ ವ್ಯವಸ್ಥೆ
ಇನ್ನು ಅಮ್ಮನ ಈ ವಿಸ್ಮಯಕಾರಿ ಸಾಹಸದ ಕುರಿತು ಮಗ ಸುಧೀರ್ ಕೂಡಾ ಖುಷಿ ವ್ಯಕ್ತಪಡಿಸಿದ್ದಾರೆ, "ಎಷ್ಟೇ ಹೇಳಿದರೂ ಕೇಳದೆ ಕಲ್ಲುಗಳನ್ನು ಅಮ್ಮನೇ ತಂದು ಗೋಡೆ ನಿರ್ಮಿಸಿದ್ದಾರೆ. ಅವರು ತುಂಬಾ ಶ್ರಮ ಜೀವಿ, ಅಮ್ಮ ವಿಶ್ರಾಂತಿಯನ್ನು ಪಡೆದಿದ್ದೇ ಕಡಿಮೆ. ವಯಸ್ಸು ಎಂಭತ್ತು ಆದರೂ, ಈಗಲೂ ಯಾರ ಮಾತನ್ನೂ ಕೇಳೋದಿಲ್ಲ. ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ" ಎಂದು ಹೇಳಿದ್ದಾರೆ.
ಅಜ್ಜಿ ಕಟ್ಟಿದ ಕಲ್ಲಿನ ಮಹಾಗೋಡೆ ಸುಲಭವಾಗಿ ಉರುಳಿಸದಷ್ಟು ಬಲಿಷ್ಠವಾಗಿದೆ. ಮಳೆಗೆ ಮಣ್ಣು ಸೇರಿ ಮತ್ತಷ್ಟು ಗಟ್ಟಿಯಾಗಿದೆ. ಮಳೆ ನೀರು ಹೊರಹೋಗಲೂ ಅಜ್ಜಿ ಕಲ್ಲಿನ ಗೋಡೆ ನಡುವೆ ಸಂಧಿಯನ್ನಿಟ್ಟಿದ್ದಾರೆ.
ಒಟ್ಟಿನ್ನಲ್ಲಿ ನಮ್ಮ ಪೂರ್ವಜರು ಯಾಕೆ ದೈಹಿಕವಾಗಿ ಸಧೃಡರಾಗಿದ್ದರು ಅನ್ನೋದಕ್ಕೆ ಅಜ್ಜಿಯ ಪರಿಶ್ರಮವೇ ಇದಕ್ಕೆ ಕಾರಣ ಅನ್ನೋದು ಸಾಕ್ಷಿ ನುಡಿದಂತಿದೆ.












Click it and Unblock the Notifications