ಕನ್ನಡ ರಾಜ್ಯೋತ್ಸವದಲ್ಲಿ ಕಾಂತಾರಾ ಕ್ರೇಜ್: ಪಾಡ್ದನ ಹಾಡಿ ಗಮನ ಸೆಳೆದ ನಾಗರಾಜ ಪಾಣಾರ
ಉಡುಪಿ, ನವೆಂಬರ್ 1: 67 ನೇ ಕನ್ನಡ ರಾಜ್ಯೋತ್ಸವಕ್ಕೂ ಕಾಂತಾರಾ ಚಿತ್ರದ ಕ್ರೇಜ್ ಹಬ್ಬಿದೆ. ಪಾಡ್ದನದ ಹಾಡನ್ನು ಮೊದಲ ಬಾರಿಗೆ ಯಥಾವತ್ತಾಗಿ ಬೆಳ್ಳಿತೆರೆಯ ಮೇಲೆ ತಂದು ರಿಷಬ್ ಶೆಟ್ಟಿಯ ಕಾಂತಾರಾ ಚಿತ್ರ ದಲ್ಲಿ ಬಳಸಿದ್ದಾರೆ. ಈ ಪಾಡ್ದನವನ್ನು ಹಾಡಿದ ಕುಂದಾಪುರದ ನಾಗಾರಾಜ ಪಾಣಾರ ಅವರಿಗೆ ಉಡುಪಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಉಡುಪಿಯಲ್ಲಿ ನಾಗಾರಾಜ ಪಾಣಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಈ ವೇಳೆ ನಾಗಾರಾಜ ಪಾಣಾರ ಕಾಂತಾರದಲ್ಲಿ ತಾವು ಹಾಡಿದ ಹೇ ಲೇಗಾ ಪದ್ಯವನ್ನು ಹಾಡಿ ಎಲ್ಲರನ್ನೂ ರಂಜಿಸಿದ್ದಾರೆ. ಉಡುಪಿಯ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು,ಉಡುಪಿ ಜಿಲ್ಲಾ ಉಸ್ತುವಾರಿ ಮತ್ತು ಮೀನುಗಾರಿಕಾ ಬಂದರು ಸಚಿವರಾದ ಎಸ್. ಅಂಗಾರ ಧ್ವಜಾರೋಹಣ ನೆರವೇರಿಸಿದರು.
ಪುನೀತ್ ಸಾಧನೆ ಯುವಕರಿಗೆ ಸ್ಪೂರ್ತಿ: ಡಾ. ವೀರೇಂದ್ರ ಹೆಗ್ಗಡೆ
ಕನ್ನಡ ರಾಜ್ಯೋತ್ಸವದಲ್ಲಿ ಕಾಂತಾರ ಕಲರವ ಎದ್ದು ಕಂಡಿದ್ದು, ದೈವಾರಾದಕ ನಾಗರಾಜ ಪಾಣರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ನಾಗಾರಾಜ ಪಾಣಾರ ಅವರ ಹಾಡಿಗೆ ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮರಾವ್ ಸೇರಿದಂತೆ ಗಣ್ಯರು ಹಾಗೂ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.
ಇನ್ನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಅಭಿವೃದ್ಧಿಯ ಕನಸು ಬಿತ್ತಿದ್ದ ಉಸ್ತುವಾರಿ ಸಚಿವ ಎಸ್ ಅಂಗಾರ, ನಮ್ಮ ಸರಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತನ್ನು ಕೊಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಮತ್ತು ವಿವರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟ ಮೊಟ್ಟಮೊದಲ ಕಾರ್ಯಗಾರವನ್ನು ಕರ್ನಾಟಕದಲ್ಲಿ ಆಯೋಜನೆ ಮಾಡಲಾಗಿದೆ. ಮೀನಿನಿಂದ ಬೇರೆ ಬೇರೆ ಉತ್ಪನ್ನಗಳನ್ನ ತಯಾರಿಸುವ ಬಗ್ಗೆ ಸಂಪೂರ್ಣ ಮೀನು ಕೃಷಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣವಾದ ಪ್ರೋತ್ಸಾಹವನ್ನು ಕೊಡಲಿದೆ ಎಂದರು.
ಕರ್ನಾಟಕ ಕರಾವಳಿಯಲ್ಲಿ ಸಿಗುವ ಮೀನುಗಳಿಗೆ ಮಾರುಕಟ್ಟೆ ಮಾಡುವ ಮತ್ತು ರಫ್ತು ಮಾಡುವ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. ಕೃತಕ ಮತ್ತು ನೈಸರ್ಗಿಕ ಮೀನುಗಾರಿಕೆಯ ಬಗ್ಗೆ ಕಾರ್ಯಗಾರದಲ್ಲಿ ಚರ್ಚೆಗಳನ್ನು ಮಾಡಲಾಗಿದೆ. ಜೊತೆಗೆ ಸಿಹಿ ನೀರಿನ ಮೀನುಗಾರಿಕೆ, ಕೃತಕ ಮೀನುಗಾರಿಕೆಯ ಯೋಜನೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ವಿಶ್ವದಲ್ಲೇ ಭಾರತವನ್ನು ಅತಿ ಹೆಚ್ಚು ಮೀನು ಉತ್ಪಾದನೆ ಮಾಡುವ ಮತ್ತು ರಫ್ತು ಮಾಡುವ ದೇಶ ಮಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಚಿಂತನೆಯಾಗಿದೆ. ದೇಶದ ಎಲ್ಲಾ ಮೀನುಗಾರಿಕಾ ಸಚಿವರಿಗೆ ಪ್ರಧಾನಿ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ದೇಶದಲ್ಲೇ ಕರ್ನಾಟಕವನ್ನ ಮೀನುಗಾರಿಕೆ ಉತ್ಪಾದನೆ ಮತ್ತು ರಫ್ತು ವಿಚಾರದಲ್ಲಿ ದೇಶದಲ್ಲಿ ನಂಬರ್ ಒನ್ ಮಾಡಬೇಕು ಎಂಬ ಉದ್ದೇಶವನ್ನ ಇಟ್ಟುಕೊಂಡಿದ್ದೇವೆ. ಫಿಶ್ ಮಿಲ್ಗಳಲ್ಲಿ ಮೀನು ಸಂಸ್ಕರಣೆ, ರಫ್ತು ಮಾಡುವ ಸಂದರ್ಭ ಬಹಳ ತ್ಯಾಜ್ಯಗಳು ಉಳಿಯುತ್ತವೆ. ತ್ಯಾಜ್ಯಗಳನ್ನ ಬಳಸಿ ಬಯೋಡೇಜಿಲ್ ಮಾಡುವ ಬಗ್ಗೆ ಚಿಂತನೆ ಇದೆ. ಮುಲ್ಕಿಯಲ್ಲಿರುವ ಮೀನುಗಾರಿಕಾ ಇಲಾಖೆಯ ಸಂಬಂಧ ಪಟ್ಟ ಜಮೀನಿನಲ್ಲಿ ಇದರ ಸಂಶೋಧನೆ ನಡೆಯುತ್ತದೆ. ಮುಂದಿನ ಜನವರಿ ತಿಂಗಳ ಒಳಗೆ ಈ ಪ್ರಾಜೆಕ್ಟ್ ಆರಂಭವಾಗುತ್ತದೆ ಎಂದು ಅಂಗಾರ ಹೇಳಿದ್ದಾರೆ.