ಜೂ 13ಕ್ಕೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಪೇಜಾವರ ಶ್ರೀಗಳ ಇಫ್ತಾರ್ ಕೂಟ
ಉಡುಪಿ, ಜೂನ್ 4 : ಈಗ ಮತ್ತೆ ಇಫ್ತಾರ್ ಸದ್ದು ಮಾಡುತ್ತಿದೆ. ಈ ಬಾರಿಯೂ ಮುಸಲ್ಮಾನರಿಗೆ ಇಫ್ತಾರ್ ಏರ್ಪಡಿಸುವ ಯೋಚನೆ ಪೇಜಾವರ ಶ್ರೀಗಳದ್ದು. ಈ ಸಂಬಂಧ ಅವರು ಮುಸ್ಲಿಂರ ಜೊತೆ ಚರ್ಚೆಯನ್ನೂ ಮಾಡಿದ್ದಾರೆ. ಈ ಬಾರಿ ಯಾವುದೇ ವಿವಾದ ಬೇಡ ಅಂತ ಕೃಷ್ಣಮಠದ ಬದಲು ಹೊರಗಡೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಏರ್ಪಡಿಸುವ ಕುರಿತು ಮಾತುಕತೆಗಳಾಗುತ್ತಿವೆ.
ಜೂನ್ 13ನೇ ತಾರೀಕಿಗೆ ಮಾಡುವ ನಿರ್ಧಾರಕ್ಕೂ ಬರಲಾಗಿದೆ. ಖುದ್ದು ಪೇಜಾವರ ಶ್ರೀಗಳೂ ಇದರಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ಬಾರಿಯೂ ಕಳೆದ ಬಾರಿಯಂತೆ ವಿವಾದವಾಗುವ ಎಲ್ಲ ಸಾಧ್ಯತೆಗಳೂ ಕಂಡು ಬರುತ್ತಿವೆ.
ಕಳೆದ ವರ್ಷ ರಮ್ಝಾನ್ ತಿಂಗಳಲ್ಲಿ ಮುಸಲ್ಮಾನರಿಗೆ ಪೇಜಾವರ ಶ್ರೀಗಳು ಇಫ್ತಾರ್ ಕೂಟ ಏರ್ಪಡಿಸಿದ್ದು ಭಾರೀ ಪರ- ವಿರೋಧ ಚರ್ಚೆಗೆ ಕಾರಣವಾಗಿತ್ತು. ಈ ಸಲ ಮತ್ತೆ ರಮ್ಝಾನ್ ತಿಂಗಳು ಬಂದಿದೆ. ಈ ಬಾರಿಯೂ ಮುಸಲ್ಮಾನರಿಗೆ ಇಫ್ತಾರ್ ಕೂಟ ಏರ್ಪಡಿಸುವ ಇಚ್ಛೆ ಪೇಜಾವರ ಶ್ರೀಗಳದ್ದು.

ರಮ್ಜಾನ್ ತಿಂಗಳು ಬಂತೆಂದರೆ ಜಾತಿ- ಭೇದ ಮರೆತು ಸೌಹಾರ್ದ ಇಫ್ತಾರ್ ಕೂಟಗಳು ನಡೆಯುತ್ತವೆ. ಹಿಂದೂ, ಕ್ರಿಶ್ಚಿಯನ್ನರೂ ರಮ್ಝಾನ್ ತಿಂಗಳ ಇಫ್ತಾರ್ ಕೂಟಗಳನ್ನು ಏರ್ಪಡಿಸಿ ಸೌಹಾರ್ದತೆ ಮೆರೆಯುವುದು ನಡೆದುಕೊಂಡು ಬಂದಿದೆ. ಕಳೆದ ವರ್ಷ ಹಿರಿಯ ಯತಿ ಪೇಜಾವರ ಶ್ರೀಗಳು ಇಂತಹದ್ದೊಂದು ನಿರ್ಧಾರಕ್ಕೆ ಬಂದು, ಕ್ರಾಂತಿಯೊಂದಕ್ಕೆ ನಾಂದಿ ಹಾಡಿದರು.
ಕೃಷ್ಣಮಠಕ್ಕೆ ಮುಸಲ್ಮಾನರನ್ನು ಆಹ್ವಾನಿಸಿ ಇಫ್ತಾರ್ ಕೊಡುವ ಮೂಲಕ ಸೌಹಾರ್ದದ ವಾತಾವರಣ ನಿರ್ಮಿಸುವುದು ಪೇಜಾವರ ಶ್ರೀಗಳ ಉದ್ದೇಶವಾಗಿತ್ತು. ಈ ಕ್ರಾಂತಿಕಾರಿ ಹೆಜ್ಜೆಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಆದರೆ ಅದರ ಜತೆಗೆ ವಿರೋಧವೂ ವ್ಯಕ್ತವಾಯಿತು.
ಮುಖ್ಯವಾಗಿ ಶ್ರೀರಾಮ ಸೇನೆಯಂತಹ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ಮಾಡಿದವು. ಆದರೆ ಪೇಜಾವರ ಶ್ರೀಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕೃಷ್ಣಮಠಕ್ಕೆ ಜಾಗ ನೀಡಿದ್ದೇ ಮುಸಲ್ಮಾನರು. ಈ ಸೌಹಾರ್ದ ಪರಂಪರೆ ಇವತ್ತಿನದಲ್ಲ, ಹಿಂದಿನಿಂದಲೂ ಇದೆ ಅಂತ ಹೇಳಿ ವಿವಾದಕ್ಕೆ ತೆರೆ ಎಳೆದರು.












Click it and Unblock the Notifications