ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನಪ್ರಿಯ ನಾಯಕ ಬಿಜೆಪಿಗೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಂಟ ಸಮುದಾಯದ ಪ್ರತಿನಿಧಿ, ಜನಪ್ರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರು ಭಾರತೀಯ ಜನತಾ ಪಕ್ಷ ಸೇರಲು ಮುಹೂರ್ತ ಫಿಕ್ಸ್ ಆಗಿದೆ.
ಬೆಂಗಳೂರು, ನವೆಂಬರ್ 25: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಂಟ ಸಮುದಾಯದ ಪ್ರತಿನಿಧಿ, ಜನಪ್ರಿಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರು ಭಾರತೀಯ ಜನತಾ ಪಕ್ಷ ಸೇರಲು ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರು ಈ ವಾರಾಂತ್ಯದಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಜೆಪಿ ಬಾವುಟ ಕೈಯಲ್ಲಿ ಹಿಡಿಯಲಿದ್ದಾರೆ.
2012ರ ಉಪಚುನಾವಣೆಯ ಮೂಲಕ ಸಂಸತ್ ಗೆ ಆಯ್ಕೆಯಾದ ಬಳಿಕ ಕೊರ್ಗಿ ಜಯಪ್ರಕಾಶ್ ಹೆಗ್ಡೆಯವರು ಮತ್ತೊಮ್ಮೆ ಸಂಸದರಾಗಿ ಶಾಸಕರಾಗಿ ಆಯ್ಕೆಯಾಗಲು ನಡೆಸಿದ ಯತ್ನ ಸಫಲವಾಗಿಲ್ಲ. 2015ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊತ್ತು ವೃಥಾ ಕಾಂಗ್ರೆಸ್ ನಿಂದ ಹೊರಕ್ಕೆ ಬರಬೇಕಾಯಿತು. [ಕೊರ್ಗಿ ಜಯಪ್ರಕಾಶ್ ಹೆಗ್ಡೆ ವ್ಯಕ್ತಿ ಪರಿಚಯ]

ವೃತ್ತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಯುವ ಮನಸ್ಸಿನ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರು ಜನಾನುರಾಗಿಯಾಗಿ ಕ್ಷೇತ್ರದಲ್ಲಿ ಹೆಸರುವಾಸಿ. ಹೀಗಾಗಿ ಈ ಹಿಂದೆ ಬಿಜೆಪಿ ವಿರುದ್ಧ ಸೋಲು ಅನುಭವಿಸಿದರೂ ಈಗ ಜನಪ್ರತಿನಿಧಿಯಾಗಿ ಮತ್ತೊಮ್ಮೆ ಜನರ ಮುಂದೆ ನಿಲ್ಲಲು ಮತ್ತೊಂದು ಯತ್ನ ನಡೆಸಿದ್ದಾರೆ.
ಬಿಜೆಪಿಗೆ ಏನು ಲಾಭ?: ಚಿಕ್ಕಮಗಳೂರಿಗಿಂತ ಉಡುಪಿ ಜಿಲ್ಲೆಯಲ್ಲಿ ಉತ್ತಮ ಜನಪ್ರಿಯತೆ ಹೊಂದಿರುವ ಹೆಗ್ಡೆ ಅವರು ಬಿಜೆಪಿ ಸೇರಿದರೆ, ಕಾಂಗ್ರೆಸ್ ಗೆ ಭಾರಿ ಹೊಡೆತ ಬೀಳುವುದು ಗ್ಯಾರಂಟಿ. ಈಗಾಗಲೇ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಬಗ್ಗೆ ಉಡುಪಿ, ಮಂಗಳೂರಿನಲ್ಲಿ ಅಸಮಾಧಾನವಿದೆ. ಈ ಪರಿಸ್ಥಿತಿಯಲ್ಲಿ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಇದು ಉತ್ತಮ ನಡೆಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ನವೆಂಬರ್ ಮೊದಲ ವಾರದಲ್ಲಿ ಭೇಟಿ ಮಾಡಿ ಹೆಗ್ಡೆ ಅವರು ಮಾತುಕತೆ ನಡೆಸಿದ್ದಾರೆ.ನವೆಂಬರ್ 27ರಂದು ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಹೆಗ್ಡೆ ಅವರು ಅಧಿಕೃತವಾಗಿ ಬಿಜೆಪಿ ಸೇರುವ ಸಾಧ್ಯತೆ ನಿಚ್ಚಳವಾಗಿದೆ.












Click it and Unblock the Notifications