ಸಾವಿನಲ್ಲೂ ಮಾದರಿ, ವಾಯುಸೇನೆಯ ನಿವೃತ್ತ ಯೋಧ ಉಪೇಂದ್ರ ಪ್ರಭು
ಆತ್ಮೀಯರ ಅಕಾಲಿಕ ಸಾವು ಎಂಥವರನ್ನೂ ಧೃತಿಗೆಡಿಸುತ್ತದೆ. ಅಂಥ ದುಃಖದಾಯಕ ಸಮಯದಲ್ಲೂ ತಮ್ಮ ದುಃಖವನ್ನು ಅದುಮಿರಿಸಿಕೊಂಡು, ಅಗಲಿದ ತಮ್ಮ ಆತ್ಮೀಯರ ಅಂತಿಮ ಇಚ್ಛೆಗಳನ್ನು ಪೂರೈಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಮಾನ್ಯರಿಂದ ಸಾಧ್ಯವಾಗದ ಕೆಲಸ.
ಇಂಥ ಅಸಾಮಾನ್ಯ ನಿರ್ಧಾರವೊಂದನ್ನು ತೆಗೆದುಕೊಂಡು ಅಗಲಿದ ಪತಿ ಹಾಗೂ ತಂದೆಯ ಅಂತಿಮ ಇಚ್ಛೆಯನ್ನು ಪೂರೈಸುವ ಸಮಚಿತ್ತವನ್ನು ಮೆರೆದ ಅಪರೂಪದ ಘಟನೆ ಯೊಂದು ಉಡುಪಿ ತಾಲೂಕಿನ ಹಿರಿಯಡಕದಲ್ಲಿ ನಡೆದಿದೆ.
ನನ್ನ ಬಾಲ್ಯದ ಸಹಪಾಠಿ ಹಾಗೂ ವಾಯುಸೇನೆಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ, ವಾಯುಸೇನೆಯ ನಿವೃತ್ತ ಯೋಧ ನರ್ಜೆ ಉಪೇಂದ್ರ ಪ್ರಭು (58 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಭಾನುವಾರ ರಾತ್ರಿ ಅಸುನೀಗಿದರು.

ಅವರ ಅಂಗಾಗಗಳನ್ನು ಹಾಗೂ ದೇಹವನ್ನು ಅವರ ಅಂತಿಮ ಇಚ್ಛೆಯಂತೆ ಆಸ್ಪತ್ರೆಗೆ ದಾನಮಾಡಲು, ಸಮ್ಮತಿಪತ್ರವನ್ನು ಬರೆದುಬಕೊಟ್ಟ, ಮೃತರ ಪತ್ನಿ ಶ್ರೀಮತಿ ಲಲಿತಾ ನಾಯಕ್, ಮಕ್ಕಳಾದ ಸ್ನೇಹ ಮತ್ತು ಸ್ವಾತಿ ತಮ್ಮ ಸಮಯಪ್ರಜ್ಞೆಯನ್ನು ಮೆರೆದರು. ಅವರ ಈ ನಡೆ ಕುಟುಂಬ ಮತ್ತು ಮಿತ್ರವರ್ಗದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಹಿರಿಯಡಕದ ನರ್ಜೆಯಲ್ಲಿ 1961ರ ಎಪ್ರಿಲ್ ಒಂದರಂದು ಜನಿಸಿ ಹಿರಿಯಡಕ ಮತ್ತು ಮಣಿಪಾಲದದಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ, 1981ರಲ್ಲಿ ವಾಯುಸೇನೆಯನ್ನು ಸೇರಿದ್ದ ಉಪೇಂದ್ರ ಪ್ರಭು, ಚೆನ್ನೈ, ಅಂಬಾಲಾ, ಗೋರಖಪುರ, ಪೂನಾ ಹಾಗೂ ಬೆಂಗಳೂರಿನ ವಾಯುಸೇನಾ ನೆಲೆಗಳಲ್ಲಿ ಸೇವೆಗೈದಿದ್ದರು. ಇಪ್ಪತ್ತು ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದರು.
ಕಳೆದ ವರ್ಷ ತವರೂರಿಗೆ ಬಂದು ನೆಲೆಸಿದ್ದ ಅವರು, ತನ್ನ ಮರಣದ ನಂತರ ತನ್ನ ದೇಹದ ಅಂಗಾಂಗಗಳನ್ನು ಹಾಗೂ ದೇಹವನ್ನು ದಾನಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಸೋಮವಾರದದಂದು ನೆರವೇರಿಸಲಾದ ಮೃತರ ಅಂತ್ಯ ಕ್ರಿಯೆಯಲ್ಲಿ, ಊರು ಮತ್ತು ಪರವೂರುಗಳಿಂದ ಆಗಮಿಸಿದ್ದ ಮೃತರ ಕುಟುಂಬ ಸದಸ್ಯರು, ವಾಯುಸೇನೆಯ ಸಹೋದ್ಯೋಗಿಗಳು ಹಾಗೂ ಕರಾವಳಿಯ ವಾಯು ಸೈನಿಕರ ಸಂಘದ ಹಲವಾರು ಸದಸ್ಯರು ಪಾಲ್ಗೊಂಡಿದ್ದರು. ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೊದಲು, ಮೃತ ಯೋಧರಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು.
ಅಲ್ಲಿ ನೆರೆದಿದ್ದ ನಿವೃತ್ತ ವಾಯುಸೈನಿಕರೆಲ್ಲಾ, ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಅಭಿಯಾನವೊಂದನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಕೈಗೊಂಡರು.












Click it and Unblock the Notifications