ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?
Recommended Video

ಉಡುಪಿ, ಜೂನ್ 23 : ಕರಾವಳಿಯ ಆರಾಧನಾ ಕಲೆ ಯಕ್ಷಗಾನ. ಈ ಕಲೆಯನ್ನೇ ನಂಬಿ ಬದುಕುವ ಕಲಾವಿದರಿದ್ದಾರೆ. ಆದ್ರೆ ಮಳೆಗಾಲದಲ್ಲಿ ಯಕ್ಷಗಾನ ಮೇಳಗಳ ತಿರುಗಾಟ ಇರೋದಿಲ್ಲ.
ಮೇಳದ ಕಲಾವಿದರಿಗೆ ಮಳೆಗಾಲದಲ್ಲಿ ನೆರವಾಗೋದು ಚಿಕ್ಕಮೇಳ. ಇದು ದೇವರ ಆರಾಧನೆಯಾಗಿಯೂ ಬೆಳೆದು ಬಂದಿದೆ. ಮನೆಮನೆಗೆ ಹೋಗಿ ಗೆಜ್ಜೆನಾದ ಸೇವೆಯ ಮೂಲಕ ಕಲಾವಿದರು ತಮ್ಮ ಬದುಕಿನ ನಿರ್ವಹಣೆ ಮಾಡಿಕೊಳ್ಳುತ್ತಾರೆ.
ಕರಾವಳಿಯ ಜಾನಪದ ಕಲೆ ಯಕ್ಷಗಾನಕ್ಕೆ ಶತಮಾನಗಳ ಇತಿಹಾಸವಿದೆ. ಇದನ್ನು ಆರಾಧನಾ ಕಲೆಯೆಂದೇ ಕರೆಯಲಾಗುತ್ತಿದೆ. ವರ್ಷದ ಮಳೆಗಾಲವನ್ನು ಹೊರತು ಪಡಿಸಿ ನವೆಂಬರ್ ನಿಂದ ಮೇವರೆಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೊಡು ಜಿಲ್ಲೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸುತ್ತವೆ.

ಸುಮಾರು 600 ಕಲಾವಿದರು ಈ ಕಲೆಯನ್ನು ನಂಬಿ ಜೀವನ ನಡೆಸುತ್ತಾರೆ. ಆದ್ರೆ ಮಳೆಗಾಲದಲ್ಲಿ ಕಲಾವಿದರ ಜೀವನ ನಿರ್ವಹಣೆ ಕಷ್ಟವೇ ಸರಿ. ಈ ಕಾರಣದಿಂದ ಹಿಂದಿನ ಕಾಲದಿಂದ ಮಳೆಗಾಲದಲ್ಲಿ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ.
ಕೇವಲ 4 ಅಥವಾ 5 ಜನ ಕಲಾವಿದರು ಮನೆಮನೆಗೆ ತೆರಳಿ ಅಲ್ಪ ಅವಧಿಯ ಯಕ್ಷಗಾನ ಸೇವೆ ಸಲ್ಲಿಸುತ್ತಾರೆ. ಈ ಮೂಲಕ ಮನೆ ಮಕ್ಕಳಿಗೆ ಯಕ್ಷಗಾನದ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತದೆ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯಲಾಗುತ್ತದೆ.

ಒಂದು ಊರಿನ ಹಲವು ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ. ದಿನದಲ್ಲಿ ಸಂಜೆ 7ರಿಂದ ರಾತ್ರಿ 10ರ ತನಕ ಚಿಕ್ಕ ಮೇಳಗಳು ತಿರುಗಾಟ ನಡೆಸುತ್ತವೆ. ಮನೆಗೆ ಬಂದ ಕಲಾ ತಂಡವನ್ನು ಮನೆಯವರು ಸ್ವಾಗತಿಸುತ್ತಾರೆ. ಹೂ ಹಣ್ಣು ಅಕ್ಕಿ ತೆಂಗಿನಕಾಯಿ ಮತ್ತು ದೀವ ಇಟ್ಟು ಅಲ್ಲಿ ಪ್ರಾರ್ಥನೆ ಸಲ್ಲಿಸಿ, ಯಾವುದಾದರೂ ಒಂದು ಪ್ರಸಂಗದ ಚಿಕ್ಕ ಬಾಗವನ್ನು ಮನೆಯಲ್ಲಿ ಪ್ರದರ್ಶಿಸುತ್ತಾರೆ.

ಒಂದು ಸ್ತ್ರೀ ವೇಷ ಇನ್ನೊಂದು ಪುರುಷ ವೇಷ ಧಾರಿ ಮತ್ತು ಹಿಮ್ಮೇಳದ ಇಬ್ಬರು ಕಲಾವಿದರು ತಂಡದಲ್ಲಿರುತ್ತಾರೆ. ಪ್ರತಿ ಮನೆಯಲ್ಲಿ ಕಲಾವಿದರಿಗೆ ಕಾಣಿಕೆಯನ್ನೂ ನೀಡಲಾಗುತ್ತದೆ. ಈ ಮೂಲಕ ಮಳೆಗಾಲದಲ್ಲಿ ಯಕ್ಷ ಸೇವೆಯ ಜೊತೆ ತನ್ನ ಬದುಕಿನ ನಿರ್ವಹಣೆಯನ್ನು ಕಲಾವಿದ ಕಂಡುಕೊಳ್ಳುತ್ತಾನೆ.
ಒಂದೆಡೆ ಕಲಾವಿದರ ಜೀವನ ನಿರ್ವಹಣೆ ಇನ್ನೊಂದೆಡೆ ಕಲಾ ಸೇವೆ ಹೀಗೆ ಚಿಕ್ಕ ಮೇಳ ಮಳೆಗಾಲದಲ್ಲೂ ಯಕ್ಷಗಾನದ ಕಂಪನ್ನು ಮನೆಮನೆಗೆ ಪಸರಿಸುತ್ತದೆ. ಈ ಮೂಲಕ ಮಕ್ಕಳಿಗೆ ಮನೆಮಂದಿಗೆ ಮನರಂಜನೆಯನ್ನೂ ಒದಗಿಸಿ ಯಕ್ಷ ಕಲೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಚಿಕ್ಕಮೇಳ.












Click it and Unblock the Notifications