ಉಡುಪಿ ಶ್ರೀ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ, ವೈಶಿಷ್ಟ್ಯತೆಗಳೇನು?
ಉಡುಪಿ, ನವೆಂಬರ್ 27: ಅಲಂಕಾರ ಪ್ರಿಯ ಉಡುಪಿಯ ಶ್ರೀ ಕೃಷ್ಣನಿಗೆ ಚಿನ್ನದ ಸೇವೆ ಸಮರ್ಪಣೆಯಾಗಲಿದೆ. ಹೌದು, ಸುಮಾರು 32 ಕೋಟಿ ರೂ. ವೆಚ್ಚದಲ್ಲಿ ಕೃಷ್ಣನ ಗರ್ಭಗುಡಿಗೆ ಚಿನ್ನದ ಹೊದಿಕೆ ಹಾಸಲಾಗುತ್ತಿದೆ.
ಅಷ್ಠ ಮಠದ ಯತಿವರೇಣ್ಯರಿಂದ ಪೂಜಿಸಲ್ಪಡುವ ಶ್ರೀ ಕೃಷ್ಣ ಅಲಂಕಾರ ಪ್ರಿಯ. ಅಷ್ಠಮಠದ ಪರ್ಯಾಯ ಪೀಠದಲ್ಲಿ ವಿರಾಜಮಾನರಾಗುವ ಸ್ವಾಮೀಜಿ ತನ್ನ ಅವಧಿಯಲ್ಲಿ ವಿಶೇಷವಾದ ಸೇವೆಯನ್ನು ಕೃಷ್ಣನಿಗೆ ಅರ್ಪಿಸುತ್ತಾರೆ.
ಅಂತೆಯೇ ಪ್ರಸಕ್ತ ಪರ್ಯಾಯ ಪೀಠಾಧಿಪತಿಗಳಾದ ಪಲಿಮಾರು ವಿದ್ಯಾಧೀಶ ತೀರ್ಥರು ಕೃಷ್ಣನ ಗರ್ಭ ಗುಡಿಗೆ ಚಿನ್ನದ ಹೊದಿಕೆಯನ್ನು ಸಮರ್ಪಿಸಲು ಚಿಂತನೆ ನಡೆಸಿದ್ದಾರೆ. ಭಗವಂತನ ಸಾನ್ನಿಧ್ಯದಲ್ಲಿ ಚಿನ್ನ ವಜ್ರ ವೈಢೂರ್ಯವನ್ನು ಸಮರ್ಪಿಸಿ ತನ್ಮೂಲಕ ಸೇವೆ ಸಲ್ಲಿಸುವುದು ಸಂಪ್ರದಾಯ.
ಅಂದಹಾಗೆ ಕೃಷ್ಣನ ಗರ್ಭಗುಡಿಗೆ ಹೊದಿಸಲಾಗುವ ಚಿನ್ನದ ಹೊದಿಕೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಕೃಷ್ಣನ ಸ್ವರ್ಣಗೋಪುರ ಸುವರ್ಣ ಗೋಪುರವಾಗಿಯೂ ಕಂಗೊಳಿಸಲಿದೆ. ಮೂಲದಲ್ಲಿ ತಾಮ್ರದ ಹಾಳೆಗಳು. ಅದರ ಮೇಲೆ ಬೆಳ್ಳಿಯ ಹೊದಿಕೆ. ಬೆಳ್ಳಿಯ ಹೊದಿಕೆ ಮೇಲೆ ಚಿನ್ನದ ಹಾಳೆಗಳನ್ನು ಎರಕದ ಮೂಲಕ ಜೋಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಮೂಲದಲ್ಲಿರುವ ತಾಮ್ರದ ಹಾಳೆಯಲ್ಲಿ ವೇದ ಮಂತ್ರಗಳನ್ನು ಕೆತ್ತಲಾಗುತ್ತದೆ. ಅದರ ಜೊತೆ 21,600 ಹಂಸ ಮಂತ್ರವನ್ನು ಬರೆಯಲಾಗುತ್ತದೆ. ಈ ಮೂಲಕವಾಗಿ ದೇವರ ಗರ್ಭ ಗುಡಿಗೆ ಒಂದು ಸುತ್ತು ಹಾಕಿದಾಗ ಭಕ್ತನ ಪಾಪ ಕರ್ಮಗಳು ಪರಿಹಾರವಾಗುತ್ತದೆ.

ಈ ಸ್ವರ್ಣಗೋಪುರ ಸೇವೆಯ ಉದ್ದೇಶ
ಭಗವಂತನನ್ನು ನವ ಗ್ರಹ ಕಿಂಡಿಗಳ ಮೂಲಕ ನೋಡಿವುದು ಉಡುಪಿಯ ಸಂಪ್ರದಾಯ. ಅಂತೆಯೇ ನಮ್ಮ ಹೃದಯ ಮಂದಿರದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿ ನಮ್ಮ ದೇಹದ ನವ ಭಾಗದ ಮೂಲಕ ದೇವರನ್ನು ಕಾಣಬೇಕು ಎಂಬುದು ಈ ಸ್ವರ್ಣಗೋಪುರ ಸೇವೆಯ ಉದ್ದೇಶವಾಗಿದೆ.

ಸುವರ್ಣಗೋಪುರದ ಕೆಲಸ ಮುಕ್ತಾಯ
ಇದರ ಉಸ್ತುವಾರಿಯನ್ನು ದೈವಜ್ಞ ಸಮಾಜದ ವೆಂಕಟೇಶ ಅವರು ನೋಡಿಕೊಳ್ಳುತ್ತಿದ್ದು, ಚಿನ್ನದ ಕುಸುರಿ ಕೆಲಸವನ್ನು ವಿಶ್ವ ಕರ್ಮ ಸಮಾಜದವರು ನೋಡಿಕೊಳ್ಳಲಿದ್ದಾರೆ. ಮುಂದಿನ 4 ತಿಂಗಳಲ್ಲಿ ಸುವರ್ಣಗೋಪುರದ ಕೆಲಸ ಮುಕ್ತಾಯವಾಗಲಿದೆ.

11 ಕೋಟಿ ರೂಪಾಯಿ ಸಂಗ್ರಹ
ಪಲಿಮಾರು ವಿದ್ಯಾಧೀಶ ತೀರ್ಥರು ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಚಿನ್ನದ ಹೊದಿಕೆ ಸಮರ್ಪಣೆ ಬಗ್ಗೆ ಘೋಷಿಸಿದ್ದರು. ಸದ್ಯ ಸುಮಾರು 11 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಅಧಿಕ ಹಣದ ಅವಶ್ಯಕತೆ
ಚಿನ್ನದ ಹೊದಿಕೆ ಸಮರ್ಪಣೆಗೆ ಇನ್ನು 20 ಕೋಟಿಗೂ ಅಧಿಕ ಹಣದ ಅವಶ್ಯಕತೆ ಇದ್ದು, ಭಕ್ತರು ಯೋಜನೆ ಪೂರ್ಣಗೊಳಿಸುತ್ತಾರೆ ಎಂದು ಸ್ವಾಮೀಜಿ ಆಶಯ ಹೊಂದಿದ್ದಾರೆ.












Click it and Unblock the Notifications