ಉಡುಪಿ; ಬಡ ಮೀನುಗಾರರ ಬದುಕು ಕಸಿದ ಕಡಲ ಅಲೆ
ಉಡುಪಿ, ಸೆಪ್ಟೆಂಬರ್ 19; ಮೀನುಗಾರರ ಬದುಕು ಹಗ್ಗದ ಮೇಲಿನ ನಡಿಗೆಗೆ ಸಮ. ಪ್ರತಿದಿನ ಕಡಲ ಅಲೆಗಳ ನಡುವೆ ಗುದ್ದಾಟ, ಸಾವಿನ ನಡುವೆ ಸೆಣಸಾಟವೇ ಕಡಲ ಮಕ್ಕಳ ದಿನಚರಿ. ಮೀನು ಬೇಟೆಯ ಗುರಿಯನ್ನೇರಿ ಸಮುದ್ರಕ್ಕಿಳಿದ ಮೀನುಗಾರ ಮತ್ತೆ ದಡ ಸೇರಿದರೇನೇ ಮೀನುಗಾರ ಕುಟುಂಬಗಳು ನಿರಾಳವಾಗುತ್ತದೆ.
ಹೀಗೆ ಸಾವಿನ ಜೊತೆ ಹೊಯ್ದಾಟ ಮಾಡದಿದ್ದರೆ ಬದುಕೆಂಬ ಜಟಕಾಬಂಡಿ ಸಾಗಬೇಕಲ್ಲ. ಹೀಗಾಗಿ ಪ್ರತಿದಿನ ಸಾವೆಂಬ ಅಗೋಚರ ಭಯವನ್ನು ಮೆಟ್ಟಿ, ಮೀನುಗಾರರು ಸಮುದ್ರದಲ್ಲಿ ಮತ್ಸ್ಯ ಬೇಟೆಯನ್ನಾಡುತ್ತಾರೆ. ಆದರೆ ಶನಿವಾರ ಪಡುವಣದ ಕಡಲಲ್ಲಿ ಮತ್ಸ್ಯ ಬೇಟೆ ಮುಗಿಸಿ, ದಡಕ್ಕೆ ಬರುತ್ತಿದ್ದ ಉಡುಪಿಯ ಬೈಂದೂರಿನ ಮೀನುಗಾರರ ತಂಡವಿದ್ದ, ಮೀನುಗಾರಿಕಾ ಬೋಟ್ಗೆ ಭಾರೀ ಅಲೆ ಅಪ್ಪಳಿಸಿದೆ.
ಭರ್ಜರಿ ಮೀನಿನ ಬೇಟೆಯ ಖುಷಿಯಲ್ಲಿದ್ದ ಏಳು ಮಂದಿಯ ಮೀನುಗಾರರ ತಂಡದಲ್ಲಿ ಇಬ್ಬರನ್ನು ಸಮುದ್ರ ರಾಜ ಆಪೋಷನ ತೆಗೆದುಕೊಂಡಿದ್ದು, ದುಃಖದ ಸಾಗರದಲ್ಲಿ ಮೀನುಗಾರಿಕಾ ಕುಟುಂಬ ಮುಳುಗಿದೆ. ಹೆಗಲಿಗೆ ಬಲೆ ಏರಿಸಿ, ಭೋರ್ಗರೆವ ಕಡಲಿಗೆ ನಮಿಸಿ, ದಿನಕರ ತನ್ನ ದಿನ ಆರಂಭಿಸುವ ಮುನ್ನ ದೋಣಿ ಏರುವ ಮೀನುಗಾರ, ಮರಳಿ ಮನೆಗೆ ಬರುತ್ತಾನೋ, ಶವವಾಗಿ ಮಸಣ ಸೇರುತ್ತಾನೋ ಹೇಳತೀರದು.

ಆದರೂ ಹಸಿವಿನ ಧಾವಂತವೋ, ಬದುಕಿನ ಅನಿವಾರ್ಯತೆವೋ, ಕುಲ ಕಸುಬಿನ ಗೌರವವೋ ಮೀನುಗಾರನ್ನು ಕಡಲ ಆಳಕ್ಕೆ ಇಳಿಯುವಂತೆ ಮಾಡುತ್ತದೆ. ಹೀಗೆ ಮೀನುಗಾರಿಕೆಯನ್ನೇ ಬದುಕಿನ ಉಸಿರಾಗಿಸಿದ ಉಡುಪಿ ಜಿಲ್ಲೆಯ ಬೈಂದೂರಿನ ಜಯಗುರೂಜಿ ಎಂಬ ಹೆಸರಿನ ದೋಣಿಯಲ್ಲಿ ಮಾಲೀಕ ಚರಣ್ ಸಹಿತ ಒಟ್ಟು 7 ಮಂದಿ ಮೀನುಗಾರರು ಶನಿವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದಾರೆ.
ಮೀನುಗಾರಿಕೆ ಚೆನ್ನಾಗಿ ನಡೆದು, ಇಳಿಸಂಜೆ ವೇಳೆ ದಡಕ್ಕೆ ನಿಧಾನವಾಗಿ ಬರುತ್ತಿದ್ದಾಗ, ಒಮ್ಮಿಂದೊಮ್ಮೆಲೇ ಬೃಹತ್ ಗಾತ್ರದ ಸಾವಿನ ಅಲೆ ಇವರಿದ್ದ ದೋಣಿಗೆ ಬಡಿದಿದೆ. ಪರಿಣಾಮ ದೋಣಿಯಲ್ಲಿದ್ದ 7 ಮಂದಿ ಸಮುದ್ರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ದೋಣಿಯಲ್ಲಿದ್ದ ವಿಜೇತ್, ಪ್ರವೀಣ, ಸಚಿನ್, ಸುಮಂತ, ವಾಸುದೇವ ಖಾರ್ವಿ ಗಂಟೆಗಟ್ಟಲೆ ಈಜಿ ದಡ ಸೇರಿ ನಿಟ್ಟುಸಿರು ಬಿಟ್ಟರು. ಉಳಿದ ಇಬ್ಬರು ನಾಪತ್ತೆ ಆಗಿದ್ದರು.
ಸುದ್ದಿ ತಿಳಿದ ತಕ್ಷಣವೇ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯವರು ಹುಡುಕಾಟ ನಡೆಸಿದ್ದು, ದೋಣಿ ಮಾಲೀಕ ಚರಣ್ ಹಾಗೂ ಅಣ್ಣಪ್ಪ ಶವ ಪತ್ತೆಯಾಗಿದೆ. ಮನೆಯವರ ರೋಧನ ಮುಗಿಲು ಮುಟ್ಟಿದೆ. ಕಡಲ ಕುವರರು ದುಃಖತ್ರಪ್ತರಾಗಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದ ಮೀನುಗಾರರ ಮನೆಗೆ ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಮೀನುಗಾರರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ 6 ಲಕ್ಷ ಪರಿಹಾರ ಘೋಷಣೆ ಮಾಡಿ, ತಾನೂ ವೈಯಕ್ತಿಕ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದಾರೆ.
Recommended Video
ಕಡಲನ್ನೇ ನಂಬಿದ ಮೀನುಗಾರರಿಗೆ ಸಂಭ್ರಮ ಹೇಳದೇ ಬರುವ ನೆಂಟನಾದ್ರೆ, ಸಾವು ಒಮ್ಮೊಮ್ಮೆ ಬರುವ ಬರ ಸಿಡಿಲು. ಆದರೂ ಸರಕಾರ ಇಂತಹ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಕುರಿತು ಯೋಚಿಸಬೇಕಿದೆ.












Click it and Unblock the Notifications